ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕಮಹೇಂದ್ರ ಸಿಂಗ್ಧೋನಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತು ಸಾಕಷ್ಟು ಗೊಂದಲಗಳು ಉಂಟಾಗಿರುವ ಹೊತ್ತಿನಲ್ಲಿಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದ ಬೆನ್ನಲ್ಲೇ ಹೇಳಿಕೆ ನೀಡಿರುವ ಅಖ್ತರ್, ಕನ್ನಡಿಗ ಮನೀಷ್ ಪಾಂಡೆ ಹಿರಿಯ ಆಟಗಾರ ಧೋನಿ ಅವರ ಸ್ಥಾನವನ್ನು ತುಂಬಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಯುಟ್ಯೂಬ್ ಚಾನಲ್ನಲ್ಲಿ ಪಾಂಡೆ ಕುರಿತು ಮಾತನಾಡಿರುವ ಅವರು, ‘ಭಾರತ ಧೋನಿಯ ಸ್ಥಾನವನ್ನು ತುಂಬಬಲ್ಲ ಆಟಗಾರನನ್ನು ಕೊನೆಗೂ ಕಂಡುಕೊಂಡಿದೆ’ ಎಂದಿದ್ದಾರೆ.
‘ಸಮರ್ಥ ಆಟಗಾರ ಮನೀಷ್ ಪಾಂಡೆ ಭಾರತಕ್ಕೆ ಸಿಕ್ಕಿದ್ದಾನೆ.ಶ್ರೇಯಸ್ ಅಯ್ಯರ್ ಕೂಡ ಪರಿಪೂರ್ಣ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರೂ ಭಾರತದ ಬ್ಯಾಟಿಂಗ್ಗೆ ಬಲ ತುಂಬಬಲ್ಲರು’ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವವನ್ನೂ ಹೊಗಳಿರುವ ಅವರು, ‘ಕೊಹ್ಲಿ ಅಸಾಧಾರಣ ನಾಯಕ. ಮಾನಸಿಕವಾಗಿ ಅತ್ಯಂತ ಗಟ್ಟಿಗ. ಪುಟಿದೇಳುವುದು ಹೇಗೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅವರ ಬಳಗದಲ್ಲಿರುವ ಪ್ರತಿಯೊಬ್ಬರಿಗೂ ಇದರ ಅರಿವಿದೆ. ಕೊಹ್ಲಿಯಾವುದನ್ನೂ ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅವರೊಂದಿಗೆ ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಅವರಂತಹವರು ಇದ್ದಾಗ ಎದುರಾಳಿ ತಂಡ ಗಳಿಸುವ 300ಕ್ಕಿಂತ ಕಡಿಮೆ ಮೊತ್ತವು ಸವಾಲೇ ಆಗುವುದಿಲ್ಲ’ ಎಂದಿದ್ದಾರೆ.
ಭಾರತ–ಆಸ್ಟ್ರೇಲಿಯಾ ಸರಣಿ ಕುರಿತು, ‘ಇದು ವಿಶ್ವದ ಎರಡು ಅಗ್ರ ತಂಡಗಳ ನಡುವಿನ ‘ಹೆಮ್ಮೆಯ ಕದನ’ (ಬ್ಯಾಟಲ್ ಆಫ್ ಪ್ರೈಡ್). ಇದು ಭಾರತದಹೊಸ ತಂಡ. ನಾನು ಆಡಿದಂತಹ ದಿನಗಳಲ್ಲಿ ಇದ್ದಂತದ್ದಲ್ಲ. ಮೊದಲ ಪಂದ್ಯವನ್ನು ಸೋತ ಬಳಿಕ ಸರಣಿ ಗೆಲ್ಲುವುದು ತಂಬಾ ಕಷ್ಟದಾಯಕವಾದುದು. ಆದರೆ ಭಾರತ, ಆಸ್ಟ್ರೇಲಿಯಾದ ಮೇಲೆ ಪ್ರಹಾರ ಮಾಡಿತು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.