ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಿಂಧು ಗೆದ್ದ ಬೆಳ್ಳಿ, ಕಂಚಿನಲ್ಲಿ ಯಾವುದರ ಬೆಲೆ ಹೆಚ್ಚು?

Last Updated 3 ಆಗಸ್ಟ್ 2021, 10:45 IST
ಅಕ್ಷರ ಗಾತ್ರ

ರಿಯೊ ಒಲಿಂಪಿಕ್ಸ್‌ನಲ್ಲಿ ಪಿ.ವಿ. ಸಿಂಧು ಗಳಿಸಿದ ಬೆಳ್ಳಿ ಪದಕಕ್ಕಿಂತಲೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಯಿಸಿದ ಕಂಚಿನ ಪದಕದ ಬೆಲೆ ಒಂದಿಷ್ಟು ಹೆಚ್ಚಿರಬಹುದಲ್ಲವೇ?

ಅದ್ಹೇಗೆ?ಇಂದೆಂತಹ ತರ್ಕ ಅಂತಾ ಕೇಳ್ತಿರಾ. ಅದಕ್ಕೆ ಉತ್ತರ ಸರಳ.

ಆಟದಲ್ಲಿ ಬೆಳ್ಳಿ ಪದಕ ಸಿಗುವುದು ಫೈನಲ್‌ನಲ್ಲಿ ಸೋತಾಗ. ಆದರೆ ಕಂಚಿನ ಪದಕ ಒಲಿಯುವುದು ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಗೆದ್ದ ನಂತರವಷ್ಠೇ ಎಂದೂ ಹೇಳಬಹುದು. ಆದರೆ, ಇದಷ್ಟೇ ಅಲ್ಲ. ಸಿಂಧು ಕಂಚಿನ ಪದಕಕ್ಕೆ ಇಂತಹ ಕೆಲವು ವಿಶೇಷಗಳಿವೆ.ಅವುಗಳೇನು? ಒಂದೊಂದಾಗಿ ನೋಡೋಣ ಬನ್ನಿ.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗಳಿಸಿದ ಪಿ.ವಿ. ಸಿಂಧು, ಚಿನ್ನ ಗೆದ್ದ ಸ್ಪೇನ್‌ನ ಕೆರೊಲಿನ್ ಮರಿನ್ ಮತ್ತು ಜಪಾನಿನ ನಜೊಮಿ ಒಕುಹರಾ –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್
ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗಳಿಸಿದ ಪಿ.ವಿ. ಸಿಂಧು, ಚಿನ್ನ ಗೆದ್ದ ಸ್ಪೇನ್‌ನ ಕೆರೊಲಿನ್ ಮರಿನ್ ಮತ್ತು ಜಪಾನಿನ ನಜೊಮಿ ಒಕುಹರಾ –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್

ಎರಡು ಕೊರೊನಾ ಅಲೆಗಳ ಪೆಟ್ಟು
ಕಳೆದ ಒಂದೂವರೆ ವರ್ಷದಲ್ಲಿ ಭಾರತ ಎರಡು ಬಾರಿ ಕೊರೊನಾ ಅಲೆಗಳ ಬರ್ಬರತೆಯಲ್ಲಿ ನರಳಿತ್ತು. ಕ್ರೀಡಾ ಚಟುವಟಿಕೆಗಳು ಈಗಲೂ ಪೂರ್ಣಪ್ರಮಾಣದಲ್ಲಿ ನಡೆಯುತ್ತಿಲ್ಲ. ಅದರಲ್ಲೂ ಮೊದಲ ಅಲೆ ಬಂದಾಗ ಒಳಾಂಗಣ ಕ್ರೀಡೆಗಳು ಹೆಚ್ಚು ಪೆಟ್ಟು ತಿಂದವು. ಅದರಲ್ಲಿ ಕುಸ್ತಿ, ಬ್ಯಾಡ್ಮಿಂಟನ್, ಈಜು ಮತ್ತಿತರ ಕ್ರೀಡೆಗಳನ್ನು ಪ್ರಮುಖವಾಗಿ ನೋಡಬಹುದು. 2019ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಸಿಂಧು ಒಲಿಂಪಿಕ್ ಚಿನ್ನದ ಮೇಲೆ ಕಣ್ಣಿಟ್ಟವರು. ದೇಶದ ನಿರೀಕ್ಷೆಯ ಭಾರವೂ ಅವರ ಮೇಲಿತ್ತು. ಆದರೆ, ಅದಕ್ಕೆ ತಕ್ಕ ಅಭ್ಯಾಸ ಮಾಡಲು ಅವರು ಪರದಾಡಬೇಕಾಯಿತು. ಲಾಕ್‌ಡೌನ್‌ನಲ್ಲಿ ಮನೆಯಲ್ಲಿಯೇ ಫಿಟ್‌ನೆಸ್‌ ಕಾಪಾಡಿಕೊಂಡಿರುವುದೇ ದೊಡ್ಡ ಸವಾಲಾಗಿತ್ತು. ಇನ್ನೇನು 2020ರ ಸೆಪ್ಟೆಂಬರ್ ವೇಳೆಗೆ ನಿಧಾನವಾಗಿ ಜನಜೀವನ ಸಹಜಸ್ಥಿತಿಗೆ ಬರುತ್ತಿದ್ದರೂ ಪ್ರಯಾಣದಲ್ಲಿ ಅಪಾಯ ಕಡೆಗಣಿಸುವಂತಿರಲಿಲ್ಲ. ಆದ್ದರಿಂದ ವಿದೇಶಗಳಲ್ಲಿ ನಡೆಯಬೇಕಿದ್ದ ಕೆಲವು ಸೂಪರ್ ಸೀರಿಸ್ ಟೂರ್ನಿಗಳು ರದ್ದಾದವು. ನಡೆದ ಕೆಲವು ಟೂರ್ನಿಗಳಿಗೆ ಹೋಗುವ ಮುನ್ನ ಭಾರತದ ಬ್ಯಾಡ್ಮಿಂಟನ್‌ ಪಟುಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದ್ದರಿಂದ ತಪ್ಪಿಸಿಕೊಳ್ಳಬೇಕಾಯಿತು. ಇದರಿಂದಾಗಿ ಸೈನಾ ನೆಹ್ವಾಲ್, ಕೆ. ಶ್ರೀಕಾಂತ್ ಅವರಂತಹ ಪರಿಣತರಿಗೆ ಅವಕಾಶ ತಪ್ಪಿತು. ಈ ಎಲ್ಲ ಸವಾಲುಗಳ ನಡುವೆ ಗಟ್ಟಿಯಾಗಿ ಉಳಿದಿದ್ದು ಸಿಂಧು ಮಾತ್ರ.

ಲಂಡನ್‌ಗೆ ತೆರಳಿ ಸ್ಟ್ರೆಂತ್‌ ಮತ್ತು ನ್ಯೂಟ್ರಿಷನ್ ಟ್ರೇನಿಂಗ್ ಪಡೆದರು. ಬಹುಕಾಲದ ಕೋಚ್ ಪುಲ್ಲೇಲ ಗೋಪಿಚಂದ್ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ಚರ್ಚೆಗಳು ನಡೆದವು. ಇದೇ ಹೊತ್ತಿನಲ್ಲಿ ಹೈದರಾಬಾದಿನ ಗೋಪಿ ಅಕಾಡೆಮಿಯನ್ನು ಬಿಟ್ಟು ಸಿಂಧು ಗಚ್ಚಿಬೌಳಿಯಲ್ಲಿ ಅಭ್ಯಾಸ ಆರಂಭಿಸಿದ್ದರು. ಅದೂ ಕೂಡ ವಿದೇಶಿ ಕೋಚ್ ಪಾರ್ಕ್ ಟಿ ಸಾಂಗ್ ಅವರ ಮಾರ್ಗದರ್ಶನದಲ್ಲಿ. ಅದರ ನಡುವೆ ಕೊರೊನಾದ ಎರಡನೇ ಅಲೆಯ ಗಾಳಿ ಜೋರಾಗಿಯೇ ಬೀಸಿತು. ದೇಶದಲ್ಲಿ ಮತ್ತೆ ಕ್ರೀಡಾ ಚಟುವಟಿಕೆಗಳು ನೇಪಥ್ಯಕ್ಕೆ ಸರಿದವು. ಈ ಹೊತ್ತಿನಲ್ಲಿ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು ಆಡಿದರು. ಅಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದಾಗ ಅವರ ಫಿಟ್‌ನೆಸ್ ಕುರಿತು ವ್ಯಂಗ್ಯಗಳು ಕೇಳಿಬಂದಿದ್ದು ಇದೆ. ಅನಿಶ್ವಿತತೆ ನಡುವೆಯೂ ಆಯೋಜನೆಗೊಂಡ ಒಲಿಂಪಿಕ್ಸ್‌ಗೆ ಹೊರಟು ನಿಂತ ಭಾರತ ಬ್ಯಾಡ್ಮಿಂಟನ್ ತಂಡದಲ್ಲಿದ್ದ ತಮ್ಮ ಸ್ಥಾನವನ್ನು ಗೋಪಿ, ಪಾರ್ಕ್‌ಗೆ ಬಿಟ್ಟುಕೊಟ್ಟರು. ಆದರೆ, ಸಿಂಧು ಕಂಚು ಗೆದ್ದಾಗ ಮೊದಲು ಟ್ವೀಟ್ ಮಾಡಿ ಅಭಿನಂದಿಸಿದ್ದು ಕೂಡ ಗೋಪಿಯೇ. ಇದರಿಂದಾಗಿ ಅವರ ನಡುವೆ ಭಿನ್ನಾಭಿಪ್ರಾಯಗಳಿಲ್ಲ ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ.

ಕೋಚ್ ಪಾರ್ಕ್ ಟಿ ಸಾಂಗ್ ಮತ್ತು ಸಿಂಧು
ಕೋಚ್ ಪಾರ್ಕ್ ಟಿ ಸಾಂಗ್ ಮತ್ತು ಸಿಂಧು

ಕಂಚಿಗೂ ನಾಲ್ಕನೇ ಸ್ಥಾನಕ್ಕೂ ಅಜಗಜಾಂತರ!
ಸೆಮಿಫೈನಲ್‌ನಲ್ಲಿ ತಮ್ಮ ಗೆಳತಿ ತೈ ಜು ಯಿಂಗ್ ಮುಂದೆ ಸೋತಾಗ ಸಿಂಧು ಹತಾಶೆಯಿಂದ ಕುಗ್ಗಿಹೋಗಿದ್ದರು. ಚಿನ್ನ ಗೆಲ್ಲುವ ಆಸೆ ಕಮರಿಹೋದ ದುಃಖದಲ್ಲಿ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಒಬ್ಬ ಕೋಚ್ ಮಾಡಬೇಕಾದ ಕೆಲಸವನ್ನು ಪಾರ್ಕ್ ಅಚ್ಚುಕಟ್ಟಾಗಿ ನಿರ್ವಹಿಸಿದರು.

‘ಈ ರೀತಿ ದುಃಖ ಪಡುವುದರಿಂದ ಏನೂ ಸಿಗುವುದಿಲ್ಲ. ನಾಲ್ಕನೇ ಸ್ಥಾನಕ್ಕೂ ಕಂಚಿನ ಪದಕ ಗಳಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆಯ್ಕೆ ನಿನ್ನದು‘ ಎಂದಷ್ಟೇ ಹೇಳಿದ್ದ ಪಾರ್ಕ್ ಮಾತು ಸಿಂಧು ಮನಕ್ಕೆ ನಾಟಿತು. ಮರುದಿನವೇ ಇದ್ದ ಪಂದ್ಯಕ್ಕೆ ಮಾನಸಿಕವಾಗಿ, ದೈಹಿಕವಾಗಿ ಅವರೆಷ್ಟು ಗಟ್ಟಿಯಾಗಿ ಕಣಕ್ಕಿಳಿದರು ಎಂಬುದನ್ನು ಚೀನಾದ ಹೀ ಬಿಂಗ್‌ಜಿಯಾವೊ ಎದುರಿಗಿನ ಪಂದ್ಯ ನೋಡಿದರೆ ತಿಳಿಯುತ್ತದೆ. ಅವರೊಳಗಿನ ಗಟ್ಟಿ ಛಲ, ಪುಟಿದೇಳುವ ಗುಣ ಮತ್ತು ಸಂಪೂರ್ಣ ಸಾಮರ್ಥ್ಯದ ಅರಿವು ಹಾಗೂ ಅದನ್ನು ಪಣಕ್ಕಿಡುವ ರೀತಿಯನ್ನು ಆ ಪಂದ್ಯದಲ್ಲಿ ತೋರಿಸಿಕೊಟ್ಟರು. ಚೀನಾದ ಎಡಗೈ ಆಟಗಾರ್ತಿಯ ವೇಗವನ್ನು ತಡೆದು ಅಮೋಘ ಆಕ್ರಮಣಶೀಲ ಆಟವಾಡಿದ ಸಿಂಧು ಕಂಚಿನ ಪದಕವನ್ನಷ್ಟೇ ಅಲ್ಲ ಎಲ್ಲರ ಮನಸ್ಸು ಕೂಡ ಗೆದ್ದರು. ಇತಿಹಾಸ ಬರೆದರು.

ಎಲ್ಲರಿಗೂ ಸ್ನೇಹಿತೆ ಸಿಂಧು
ಬ್ಯಾಡ್ಮಿಂಟನ್ ಅಂಕಣದಲ್ಲಿ ಎದುರಾಳಿಯನ್ನು ವೀರಾವೇಷದಿಂದ ಎದುರಿಸುವ ಸಿಂಧು ಆಟದಾಚೆ ಎಲ್ಲರಿಗೂ ನೆಚ್ಚಿನ ಸ್ನೇಹಿತೆ. ಅದು ರಿಯೊ ಒಲಿಂಪಿಕ್ಸ್ ಫೈನಲ್‌ನಲ್ಲಿ ತಾವು ಎದುರಿಸಿದ ಕ್ಯಾರೊಲಿನ್ ಮರಿನ್ ಇರಬಹುದು, ಮೊನ್ನೆಯಷ್ಟೇ ಸೆಮಿಫೈನಲ್‌ನಲ್ಲಿ ಎದುರಿಸಿದ ಚೀನಾ ತೈಪೆಯ ತೈ ಜು ಯಿಂಗ್ ಇರಬಹುದು ಅಥವಾ ಕ್ವಾರ್ಟರ್‌ಫೈನಲ್‌ನಲ್ಲಿ ಎದುರಾಗಿದ್ದ ಜಪಾನಿನ ಅಕಾನೆ ಯಾಮಗುಚಿ ಇರಬಹುದು. ಎಲ್ಲರಿಗೂ ಸಿಂಧು ಅಚ್ಚುಮೆಚ್ಚು.

ಪಿ.ವಿ.ಸಿಂಧು ಮತ್ತು ಪಿ. ಗೋಪಿಚಂದ್
ಪಿ.ವಿ.ಸಿಂಧು ಮತ್ತು ಪಿ. ಗೋಪಿಚಂದ್

‘ಫೈನಲ್‌ನಲ್ಲಿ ನಾನು ಸೋತೆ. ಬಹಳ ದುಃಖವಾಗಿತ್ತು. ವಿಜಯವೇದಿಕೆ ಬಳಿ ನನ್ನನ್ನು ತಬ್ಬಿಕೊಂಡು ಸಂತೈಸಿದ ಸಿಂಧು, ಕೈಗಳನ್ನು ಹಿಡಿದು ನಿನಗೆ ಬೇಸರವಾಗಿದೆ. ಸೋಲಿನಿಂದ ಮುಜುಗರವಾಗುತ್ತಿದೆ. ಆದರೆ ನೀನು ತುಂಬಾ ಚೆನ್ನಾಗಿ ಆಡಿದೆ. ಪೂರ್ಣ ಸಾಮರ್ಥ್ಯ ತೋರಿದೆ. ಆದರೆ ಈ ದಿನ ನಿನ್ನದಾಗಿರಲಿಲ್ಲ. ಮುಂದೆ ಓಳ್ಳೆಯದಾಗುತ್ತೆ ಎಂದರು. ಸೆಮಿಫೈನಲ್‌ನಲ್ಲಿ ನಾನು ಸಿಂಧು ಅವರನ್ನು ಸೋಲಿಸಿದ್ದೆ. ಆದರೂ ಆಕೆಯ ಸಹೃದಯತೆ, ನಿರಂತರ ಬೆಂಬಲ ಮತ್ತು ಕ್ರೀಡಾ ಮನೋಭಾವಕ್ಕೆ ತಲೆಬಾಗಿದೆ. ಅತ್ತುಬಿಟ್ಟೆ’ ಎಂದು ತೈಜು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹ್ಯಾಟ್ರಿಕ್‌ನತ್ತ ಚಿತ್ತ
ಇನ್ನು ಮೂರು ವರ್ಷ ಕಳೆದರೆ ಪ್ಯಾರಿಸ್ ಒಲಿಂಪಿಕ್ಸ್‌ ಆಯೋಜನೆಗೊಳ್ಳಲಿದೆ. ಈ ಅವಧಿಯಲ್ಲಿ ಸಿಂಧು ಮತ್ತಷ್ಟು ಸದೃಢರಾಗಿ ಮೂರನೇ ಒಲಿಂಪಿಕ್ ಪದಕಕ್ಕೆ ಮುತ್ತಿಡುವರೇ ಎಂಬ ಕುತೂಹಲವೂ ಈಗ ಗರಿಗೆದರಿದೆ.

26 ವರ್ಷದ ಸಿಂಧು ಅವರಿಗೆ ಮುಂದಿನ ಮೂರು ವರ್ಷಗಳಲ್ಲಿ ತಮ್ಮ ಫಿಟ್‌ನೆಸ್ ಮತ್ತು ಆಟದ ಲಯವನ್ನು ಉಳಿಸಿಕೊಳ್ಳುವ ಸವಾಲು ಇದೆ. 2013ರಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನೊಂದಿಗೆ ಆರಂಭವಾದ ಅವರ ಪದಕ ಬೇಟೆ ಟೋಕಿಯೊದ ಕಂಚಿನವರೆಗೂ ಬಂದಿದೆ. ಈ ಅವಧಿಯಲ್ಲಿ ಅವರು ಎರಡು ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ, ಒಂದುಕಂಚು ಮತ್ತು ಒಂದು ಚಿನ್ನ, ಊಬರ್ ಕಪ್‌, ಒಲಿಂಪಿಕ್ಸ್ ಬೆಳ್ಳಿ, ಕಾಮನ್‌ವೆಲ್ತ್ ಚಿನ್ನ, ಏಷ್ಯನ್ ಕಂಚಿನ ಪದಕಗಳಿಂದ ತಮ್ಮ ಕೊರಳನ್ನು ಅಲಂಕರಿಸಿಕೊಂಡಿದ್ದಾರೆ.

ಅಪ್ಪ ರಮಣರೊಂದಿಗೆ ಸಿಂಧು
ಅಪ್ಪ ರಮಣರೊಂದಿಗೆ ಸಿಂಧು

ಅಪ್ಪ ರಮಣ ಮತ್ತು ಅಮ್ಮ ಪಿ. ವಿಜಯಾ ಅವರ ನಿರಂತರ ಪ್ರೋತ್ಸಾಹದಿಂದ ಸಿಂಧು ಭಾರತದ ಭರವಸೆಯ ಐಕಾನ್ ಆಗಿದ್ದಾರೆ. ಮಹಿಳೆಯರು ಮತ್ತು ಯುವಜನತೆಯ ಸ್ಪೂರ್ತಿಯಾಗಿ ಬೆಳೆದಿದ್ದಾರೆ. ಒಂದು ಕಾಲದಲ್ಲಿ ಒಲಿಂಪಿಕ್‌ನಲ್ಲಿ ಭಾಗವಹಿಸುವುದೇ ದೊಡ್ಡದು ಎಂದುಕೊಂಡಿದ್ದ ಕಾಲ ಇದಲ್ಲ. ಭಾರತದ ಹೆಣ್ಣುಮಗಳು ಕೂಡ ಎರಡು ಪದಕ ಜಯಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರು ನೆಟ್ಟಿರುವ ಮೈಲುಗಲ್ಲನ್ನು ಮುಟ್ಟುವವರು ಸದ್ಯಕ್ಕಂತೂ ಭಾರತದಲ್ಲಿ ಕಾಣುತ್ತಿಲ್ಲ. ಮುಂದಿನ ವರ್ಷಗಳಲ್ಲಿ ಸಿಂಧುಗೆ ಸವಾಲೊಡ್ಡುವವರು ಬರುವ ನಿರೀಕ್ಷೆಯಂತೂ ಇದೆ. ಜೊತೆಗೆ ಸಿಂಧು ಹ್ಯಾಟ್ರಿಕ್‌ನ ಕನಸು ಕೂಡ. ಏಕೆಂದರೆ, ಕಂಚಿನ ಪದಕ ಅಂತ್ಯವಲ್ಲ ಹೊಸ ಆರಂಭದ ಸಂಕೇತವೂ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT