ಯಾಂಗೂನ್ (ಎಎಫ್ಪಿ): ಹಿರಿಯ ಬೌದ್ಧ ಸನ್ಯಾಸಿ ಮತ್ತು ಏಳು ಮಂದಿ ದಾನಿಗಳನ್ನು ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಕರೆದೊಯ್ಯುತ್ತಿದ್ದ ಮ್ಯಾನ್ಮಾರ್ ಸೇನಾ ವಿಮಾನವು ಅಪಘಾತಕ್ಕೀಡಾಗಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಜುಂಟಾ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಆರು ಸಿಬ್ಬಂದಿ ಮತ್ತು ಎಂಟು ಪ್ರಯಾಣಿಕರಿದ್ದ ಈ ವಿಮಾನವು ಪೈನ್ ಓ ಎಲ್ವಿನ್ ನಗರದಲ್ಲಿ ಇಳಿಯಬೇಕಿದ್ದ ಸ್ವಲ್ಪ ಸಮಯದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪತನಗೊಂಡಿದೆ ಎಂದು ವಕ್ತಾರ ಜಾವ್ ಮಿನ್ ತುನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ರಾಜಧಾನಿ ನಾಯ್ಪಿಡಾವ್ ಬಳಿಯ ಜಾಯ್ ಕೋನ್ ಮಠದ ಪ್ರಮುಖ ಬೌದ್ಧ ಸನ್ಯಾಸಿ ಕವಿಸಾರ ಮತ್ತು ಏಳು ದಾನಿಗಳು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ತಕ್ಷಣ ಸ್ಥಳಕ್ಕೆ ಧಾವಿಸಿದತುರ್ತು ರಕ್ಷಣಾಕಾರರಿಗೆ ಹೊತ್ತಿ ಉರಿಯುತ್ತಿದ್ದ ವಿಮಾನದಿಂದ ಒಬ್ಬ ಬಾಲಕ ಮತ್ತು ಸಾರ್ಜೆಂಟ್ ಒಬ್ಬರನ್ನು ರಕ್ಷಿಸಲು ಸಾಧ್ಯವಾಗಿದೆ. ಆ ಇಬ್ಬರನ್ನು ಚಿಕಿತ್ಸೆಗಾಗಿ ಹತ್ತಿರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.