ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಎಫ್‌’ ಹೂಡಿಕೆ ಈಗ ಸೂಕ್ತವೇ?

Last Updated 13 ಡಿಸೆಂಬರ್ 2019, 6:28 IST
ಅಕ್ಷರ ಗಾತ್ರ

ಎಲ್ಲೆಡೆ ಆರ್ಥಿಕ ಹಿಂಜರಿತದ ಬಗ್ಗೆ ಚರ್ಚೆಯಾಗುತ್ತಿರುವಾಗ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ ಎಂದು ಹೂಡಿಕೆದಾರರು ಕೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಪಷ್ಟತೆ ಕೊಡಲು ಕಳೆದ ಐದು ವರ್ಷಗಳಲ್ಲಿ ಮ್ಯೂಚುವಲ್ ಫಂಡ್ ಗಳ ಪ್ರಗತಿಯ ಬಗ್ಗೆ ಒಂದು ಒಳನೋಟ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಮ್ಯೂಚುವಲ್ ಫಂಡ್ ಈಗಿನ ಸ್ಥಿತಿಗತಿ: ಮ್ಯೂಚುವಲ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ ಐಪಿ) ಮೂಲಕ ಹೂಡಿಕೆ ಮಾಡಿದರೆ ಲಾಭ ಗಳಿಸುವುದು ಖಚಿತ ಎಂಬ ಭಾವನೆ ಇದೆ. ಆದರೆ ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನು ಪರಿಗಣಿಸಿ ನೋಡಿದಾಗ ಮ್ಯೂಚುವಲ್ ಫಂಡ್ ನಲ್ಲೂ ಕೊಂಚ ಹಿನ್ನಡೆಯಾಗಿರುವುದು ಸ್ಪಷ್ಟವಾಗುತ್ತದೆ. 139 ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳ ಪೈಕಿ ಎರಡು ಸ್ಕೀಂ ಗಳು ಮಾತ್ರ ಎರಡಂಕಿ ಲಾಭಾಂಶ ತಂದುಕೊಟ್ಟಿವೆ. ಉಳಿದಂತೆ ಸುಮಾರು 70 ಮ್ಯೂಚುವಲ್ ಫಂಡ್ ಯೋಜನೆಗಳು ಶೇ 5 ರಿಂದ ಶೇ 9.90 ಲಾಭಾಂಶ ನೀಡಿವೆ.

ಪಿಪಿಎಫ್‌ಗಿಂತ ಕಡಿಮೆ ಲಾಭಾಂಶ: ಹಲವು ಮ್ಯೂಚುವಲ್ ಫಂಡ್ ಯೋಜನೆಗಳು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಗಿಂತ ಕಡಿಮೆ ಲಾಭಾಂಶ ನೀಡಿವೆ. ಪಿಪಿಎಫ್‌ನ ಬಡ್ಡಿ ದರವನ್ನು ಪ್ರತಿ ಮೂರು ತಿಂಗಳಿಗೊಮ್ಮ ಪರಿಷ್ಕರಿಸಲಾಗುತ್ತದೆ. ಸಾಮಾನ್ಯವಾಗಿ ಪಿಪಿಎಫ್ ಬಡ್ಡಿ ದರ ಶೇ 7.5 ರಿಂದ ಶೇ 8.5 ರ ಆಸುಪಾಸಿನಲ್ಲಿರುತ್ತದೆ.

2014 ರಿಂದ 2019 ಅವಧಿಯನ್ನು ಗಣನೆಗೆ ತೆಗೆದುಕೊಂಡಾಗ ಪಿಪಿಎಫ್‌ನ ಸರಾಸರಿ ಬಡ್ಡಿ ದರ ಶೇ 8.21 ರಷ್ಟಿದೆ. ಲಾರ್ಜ್ ಕ್ಯಾಪ್, ಮಲ್ಟಿ ಕ್ಯಾಪ್ ಮತ್ತು ಇಎಲ್‌ಎಸ್‌ಎಸ್‌ ಫಂಡ್‌ನ ವಾರ್ಷಿಕ ಲಾಭಾಂಶ ಕ್ರಮವಾಗಿ ಶೇ 7.79, ಶೇ 8.57 ಮತ್ತು ಶೇ 8.53 ರಷ್ಟಿದೆ. ಮಲ್ಟಿ ಕ್ಯಾಪ್ ಮತ್ತು ಇಎಲ್ಎಸ್‌ಎಸ್‌ ಫಂಡ್‌ಗಳ ತೆರಿಗೆ ಪೂರ್ವ ಲಾಭಾಂಶ ಹೆಚ್ಚಿರುವುದು ಕಂಡುಬಂದರು ₹ 1 ಲಕ್ಷ ಮೇಲ್ಪಟ್ಟು ಲಾಭ ಗಳಿಸಿದರೆ ಶೇ 10 ರಷ್ಟುತೆರಿಗೆ ಕಟ್ಟಬೇಕಾಗುತ್ತದೆ. ಉಳಿದಂತೆ ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಯೋಜನೆಗಳು ಕ್ರಮವಾಗಿ ಶೇ 9.51 ಮತ್ತು ಶೇ 9.39 ರಷ್ಟು ಗಳಿಸಿಕೊಂಡಿವೆ.

ಕೆಳ ಮಧ್ಯಮ ಶ್ರೇಣಿಯಲ್ಲಿ ಹೂಡಿಕೆ ಸೂಕ್ತವೇ: ಕೆಳ ಮಧ್ಯ ಶ್ರೇಣಿ ( ಸ್ಮಾಲ್ ಕ್ಯಾಪ್) ಫಂಡ್ ಗಳು ಲಾರ್ಜ್ ಕ್ಯಾಪ್ ಅಥವಾ ಮಿಡ್ ಕ್ಯಾಪ್ ಗೆ ಹೋಲಿಸಿದಾಗ ಮಾರುಕಟ್ಟೆಯಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತವೆ. ಮಾರುಕಟ್ಟೆಯ ಏರಿಳಿತಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸುಮಾರು ಎಂಟರಿಂದ ಹತ್ತು ವರ್ಷ ಹೂಡಿಕೆ ಮಾಡಲು ಶಕ್ತರಿರುವವರು ಇದನ್ನು ಪರಿಗಣಿಸಬಹುದು. ಒಟ್ಟಾರೆಯಾಗಿ ನೋಡಿದಾಗ ಸಣ್ಣ ಪ್ರಮಾಣದ ಹಣವನ್ನು ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಸ್ಮಾಲ್ ಕ್ಯಾಪ್ ಗಳಲ್ಲಿ ತೊಡಗಿಸುವ ಬಗ್ಗೆ ಹೂಡಿಕೆದಾರರು ಚಿಂತಿಸಬಹುದು.

ಆತಂಕ ಬೇಡ, ಎಚ್ಚರಿಕೆಯ ನಡೆ ಮುಖ್ಯ: ಷೇರು ಮಾರುಕಟ್ಟೆ ಹೂಡಿಕೆ ಅಥವಾ ಮ್ಯೂಚುವಲ್ ಫಂಡ್ ಹೂಡಿಕೆಗಳಲ್ಲಿ ಒಂದಿಷ್ಟು ಏರಿಳಿತ ಇದ್ದೇ ಇರುತ್ತದೆ ಎನ್ನುವುದು ತಿಳಿದಿರುವ ವಿಚಾರವೇ. ಆದ್ದರಿಂದ ಮಾರುಕಟ್ಟೆಯ ತಲ್ಲಣಗಳಿಗೆ ಸದ್ಯದ ಮಟ್ಟಿಗೆ ಹೂಡಿಕೆದಾರರು ತಲೆಕೆಡಸಿಕೊಳ್ಳಬೇಕಿಲ್ಲ. ಒಂದು ಆರ್ಥಿಕ ವ್ಯವಸ್ಥೆಯಲ್ಲಿ ಹಿಂಜರಿತ, ಪ್ರಗತಿ ಇವೆಲ್ಲಾ ಸರ್ವೇ ಸಾಮಾನ್ಯ. ಎಷ್ಟೋ ಸಂದರ್ಭದಲ್ಲಿ ಹಿಂಜರಿಕೆ ಇದ್ದಾಗ ಹೂಡಿಕೆ ಮಾಡಿದವರಿಗೆ ಪ್ರಗತಿಯ ಸಂದರ್ಭದಲ್ಲಿ ದುಪ್ಪಟ್ಟು ಲಾಭಾಂಶ ಸಿಕ್ಕಿರುವ ಉದಾಹರಣೆಗಳಿವೆ. 2002-03 ರಲ್ಲಿ ಜಿಡಿಪ ದರ ಶೇ 4 ಕ್ಕೆ ಕುಸಿದಿತ್ತು. ಆದರೆ ನಂತರದ ಐದು ವರ್ಷಗಳಲ್ಲಿ ಮಾರುಕಟ್ಟೆ ಪುಟಿದೆದ್ದಿತ್ತು.

ಕುಸಿತದ ಹಾದಿ ಹಿಡಿದ ಷೇರುಪೇಟೆ
ಷೇರುಪೇಟೆ ಸೂಚ್ಯಂಕಗಳು ವಾರದ ಅವಧಿಯಲ್ಲಿ ಸುಮಾರು ಶೇ 1 ರಷ್ಟು ಕುಸಿದಿವೆ. ಆರ್ಥಿಕ ಹಿಂಜರಿಕೆಯ ಆತಂಕದ ಹಿನ್ನಲೆಯಲ್ಲಿ ವಾರದ ಆರಂಭದಲ್ಲಿ ಪೇಟೆಯಲ್ಲಿ ಮಾರಾಟದ ಒತ್ತಡ ನಿರ್ಮಾಣವಾಗಿತ್ತು. ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಜಿಡಿಪಿ ದರ ಕುಸಿತ, ರೂಪಾಯಿ ಮೌಲ್ಯ ಕುಸಿತ ಮತ್ತು ಬೇಡಿಕೆ ಕುಸಿತದಿಂದಾಗಿ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸಿದರು. 36,982 ರಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ಶೇ 0.9 ರಷ್ಟು ಕುಸಿತ ದಾಖಲಿಸಿದರೆ, 10,946 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 0.7 ರಷ್ಟು ಕುಸಿತ ಕಂಡಿತು.

ವಲಯವಾರು: ವಲಯವಾರು ಪ್ರಗತಿಯಲ್ಲಿ ಈ ವಾರ ಮಿಶ್ರಫಲ ಸಿಕ್ಕಿದೆ. ನಿಫ್ಟಿ ಲೋಹ ವಲಯ ಶೇ 3 ರಷ್ಟು ಏರಿಕೆ ದಾಖಲಿಸಿದೆ. ವಾಹನ ಉತ್ಪಾದನಾ ವಲಯ ಶೇ 1.3 ರಷ್ಟು ಜಿಗಿದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.8 ರಷ್ಟು ಕುಸಿದಿದೆ. ಎಫ್‌ಎಂಸಿಜಿ, ಬ್ಯಾಂಕಿಂಗ್ ಮತ್ತು ಮಾಧ್ಯಮ ವಲಯಗಳು ಕ್ರಮವಾಗಿ ಶೇ 2 , ಶೇ 0.6 ಮತ್ತು ಶೇ 0.5 ರಷ್ಟು ಹಿನ್ನಡೆ ಅನುಭವಿಸಿವೆ.

ಗಳಿಕೆ: ಕೋಲ್ ಇಂಡಿಯಾ ಶೇ 7 ರಷ್ಟು ಗಳಿಕೆ ಕಂಡು ಆಗ್ರ ಸ್ಥಾನದಲ್ಲಿದೆ. ವ್ಯಾಪಾರದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಮೆರಿಕದ ಜತೆ ಅಕ್ಟೋಬರ್‌ನಲ್ಲಿ ಮಾತುಕತೆ ನಡೆಸುವುದಾಗಿ ಚೀನಾ ಹೇಳಿದ್ದು ಕೋಲ್ ಇಂಡಿಯಾಗೆ ಪರೋಕ್ಷವಾಗಿ ನೆರವಾಯಿತು. ತೈಲ ಬೆಲೆ ಇಳಿಕೆಯ ಪರಿಣಾಮ ಬಿಪಿಸಿಎಲ್ ಶೇ 6.8 ಏರಿಕೆ ದಾಖಲಿಸಿತು. ಧೂಮಪಾನ ತಡೆಗೆ ಔಷಧ ಬಿಡುಗಡೆಗೊಳಿಸಿದ್ದರಿಂದ ಡಾ.ರೆಡ್ಡೀಸ್ ಶೇ 6.7 ರಷ್ಟು ಗಳಿಸಿತು. ಉಳಿದಂತೆ ಟೆಕ್ ಮಹೀಂದ್ರಾ ಶೇ 4, ಒಎನ್‌ಜಿಸಿ ಶೇ 5.6, ಎನ್‌ಟಿಪಿಸಿ ಶೇ 4.8 ಮತ್ತು ಟಾಟಾ ಮೋಟರ್ಸ್ ಶೇ 3.9 ರಷ್ಟು ಏರಿಕೆ ದಾಖಲಿಸಿದವು.

ಇಳಿಕೆ: ಹಣ ದುರುಪಯೋಗ ಆರೋಪದ ಹಿನ್ನಲೆಯಲ್ಲಿ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವ ಕಾರಣದಿಂದ ನಿಫ್ಪಿಯಲ್ಲಿ ಕಂಪನಿಯ ಷೇರುಗಳು ಶೇ 6.5 ರಷ್ಟು ಕುಸಿದಿವೆ. ಸನ್ ಫಾರ್ಮಾ ಕಂಪನಿಯ ಮೇಲೆ ಸೆಬಿ ವಿಧಿವಿಜ್ಞಾನ ಪರಿಶೋಧನೆ ಆದೇಶಿಸಿರುವ ಹಿನ್ನಲೆಯಲ್ಲಿ ಕಂಪನಿ ಷೇರುಗಳು ಶೇ 5.6 ರಷ್ಟು ತಗ್ಗಿವೆ. ಇನ್ನು ಎಚ್‌ಡಿಎಫ್ ಸಿ ಶೇ 5.8 , ಏಷ್ಯನ್‌ ಪೇಂಟ್ಸ್ ಶೇ 5.2, ಐಸಿಐಸಿಐ ಬ್ಯಾಂಕ್ ಶೇ 4.3 ಮತ್ತು ಇಂಡಸ್ ಇಂಡ್ ಬ್ಯಾಂಕ್ ಶೇ 4.7 ರಷ್ಟು ಕುಸಿದಿವೆ.

ಮುನ್ನೋಟ: ಆರ್ಥಿಕ ಉತ್ತೇಜನಕ್ಕೆ ಸರ್ಕಾರ ಕ್ರಮಗಳನ್ನು ಘೋಷಿಸಿದ್ದರೂ ಸಹಿತ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಕಂಡುಬರುತ್ತಿಲ್ಲ. ಆಗಸ್ಟ್‌ನಲ್ಲೂ ವಾಹನ ಮಾರಾಟ ಕುಸಿದಿದೆ. ಈ ವಾರ ಗ್ರಾಹಕ ಬೆಲೆ ಸೂಚ್ಯಂಕ, ಕೈಗಾರಿಕೆ ಉತ್ಪಾದನೆ ದತ್ತಾಂಶ ಮತ್ತು ವ್ಯಾಪಾರ ದತ್ತಾಂಶ ಹೊರಬೀಳಲಿದೆ. ಈ ಅಂಕಿ-ಅಂಶಗಳಿಂದ ಆರ್ಥಿಕತೆ ಎತ್ತ ಸಾಗಿದೆ ಎನ್ನುವ ಬಗ್ಗೆ ಇನ್ನಷ್ಟು ಸ್ಪಷ್ಟ ಸೂಚನೆಗಳು ಸಿಗಲಿವೆ.ಹೂಡಿಕೆದಾರರು ಸದ್ಯ ಎಚ್ಚರಿಕೆಯ ನಡೆ ಅನುಸರಿಸಬೇಕಿದೆ. ಎರಡನೇ ತ್ರೈಮಾಸಿಕ ಫಲಿತಾಂಶಗಳ ಅವಧಿ ಆರಂಭವಾಗುವ ತನಕ ಮಾರುಕಟ್ಟೆಯಲ್ಲಿ ಒಂದಿಷ್ಟು ಬದಲಾವಣೆ ಕಾಣುವುದು ಕಷ್ಟಸಾಧ್ಯ ಎನ್ನಬಹುದು.

(ಲೇಖಕ: ಇಂಡಿಯನ್ ಮನಿಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT