ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ ಅಂಕಣ: ಆಹಾ, ಇದು ಇದುವೆ ಪುರುಷಾಹಂಕಾರಂ...

‘ಬೂಸಾ’ ಸರ್ವವ್ಯಾಪಿಯಾಗಿರುವ ಕಾಲಘಟ್ಟದಲ್ಲಿ ಮಾನವೀಯತೆಯನ್ನು ಎಲ್ಲಿ ಹುಡುಕುವುದು?
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‘ಸ್ತ್ರೀಮತವನುತ್ತರಿಸಲಾಗದೆ ಧರ್ಮಶಾಸ್ತ್ರದೊಳು?’ ಎನ್ನುವುದು ಕೌರವರ ಒಡ್ಡೋಲಗಕ್ಕೆ ಕುಮಾರವ್ಯಾಸನ ದ್ರೌಪದಿ ಕೇಳುವ ಪ್ರಶ್ನೆ. ಅಳಲು, ಆಕ್ರೋಶ, ವಿಷಾದ ವನ್ನೊಳಗೊಂಡ ಈ ಪ್ರಶ್ನೆ ದ್ವಾಪರದ ದ್ರೌಪದಿಯ ದಷ್ಟೇ ಅಲ್ಲ, ಎಲ್ಲ ಕಾಲದ ಹೆಣ್ಣುಮಕ್ಕಳದೂ ಹೌದು. ಆದರೆ, ಪುರಾಣ ಇತಿಹಾಸಗಳುದ್ದಕ್ಕೂ ಮತ್ತೆ ಮತ್ತೆ ಅನುರಣಿಸುವ ಈ ಪ್ರಶ್ನೆಗೆ ಉತ್ತರಿಸುವುದು ಯಾರಿ ಗಾದರೂ ಸಾಧ್ಯವಾಗಿದೆಯೆ? ವರ್ತಮಾನದಲ್ಲೂ ಈಗಲೂ, ಈ ಪ್ರಶ್ನೆ ಧುತ್ತೆಂದು ಎದುರು ನಿಂತಾಗ ಉತ್ತರಿಸುವುದು ನಮಗೆ ಸಾಧ್ಯವಾದೀತೆ?

ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲಾಗಿಸಿ, ಬೀದಿಯಲ್ಲಿ ಅಟ್ಟಾಡಿಸಿ, ಥಳಿಸಿದ ಘಟನೆ ನಡೆದಿದೆ. ಆ ಸಂತ್ರಸ್ತ ಮಹಿಳೆ ಕುಮಾರವ್ಯಾಸನ ದ್ರೌಪದಿಯನ್ನು ಅರಿಯದೆ ಹೋದರೂ, ಯಾವುದಾದರೂ ರೂಪದಲ್ಲಿ ಹೊಸ ವಂಟಮೂರಿಯ ಮಹಿಳೆಯ ಮನಸ್ಸಿನಲ್ಲೂ ದ್ರುಪದ ನಂದನೆಯ ಪ್ರಶ್ನೆ ಮೂಡಿರಬಹುದು. ಮಹಾಭಾರತವನ್ನು ಪುಣ್ಯಗ್ರಂಥವೆಂದು ಭಾವಿಸಿರುವ ಈ ದೇಶದಲ್ಲಿ, ಮಹಾಕಾವ್ಯದ ‘ದ್ರೌಪದಿ ವಸ್ತ್ರಾಪಹರಣ’ ಪ್ರಸಂಗವನ್ನು ಆಗಾಗ ಬೀದಿಗಳಲ್ಲಿ ಸಮಕಾಲೀನಗೊಳಿಸುತ್ತಲೇ ಇರುವಾಗ, ದ್ರೌಪದಿ ಕೇಳಿದ ಪ್ರಶ್ನೆ ಅನುರಣಿಸುವುದು ಹಾಗೂ ಆ ಪ್ರಶ್ನೆಯನ್ನು ಸಮಾಜ ನಿರ್ಲಕ್ಷಿಸುವುದು ಅಸಹಜವೇನೂ ಅಲ್ಲ. ಇದೇ ವರ್ಷದ ಮೇ ತಿಂಗಳಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಣಿಪುರದಲ್ಲಿ ನಡೆದಿತ್ತು. ಇಂಥ ಘಟನೆಗಳು ನಡೆದಾಗಲೆಲ್ಲ ಭಾವುಕ ಪ್ರತಿಕ್ರಿಯೆಗಳು ಸಮಾಜದಲ್ಲಿ ವ್ಯಕ್ತವಾಗುತ್ತವೆ. ಆದರೆ, ಉತ್ತರಿಸಬೇಕಾದವರು ಹಾಗೂ ಘಟನೆಯ ನೈತಿಕ ಹೊಣೆ ಹೊರಬೇಕಾದವರು, ನಡೆದ ಘಟನೆಗೂ ತಮಗೂ ಸಂಬಂಧ ಇಲ್ಲವೆನ್ನುವಂತೆ ಮೌನದ ಮೊರೆಹೋಗುತ್ತಾರೆ; ದುರ್ಯೋಧನನ ಒಡ್ಡೋಲಗದ ಮೂಕಪ್ರೇಕ್ಷಕರಂತೆ. ಕಾಲ ಬದಲಾದರೂ ಪಾತ್ರಗಳು ಬದಲಾದರೂ ಗಂಡಿನ ದರ್ಪ ಮತ್ತು ಅಹಂಕಾರ ಮಾತ್ರ ಕೊಂಚವೂ ಮುಕ್ಕಾಗದೆ ಉಳಿದುಬಂದಿದೆ.

ಕಾಳಜಿ ವಹಿಸಬೇಕಾಗಿದ್ದ ವ್ಯಕ್ತಿಯಿಂದಲೇ ಲೈಂಗಿಕ ದೌರ್ಜನ್ಯ ನಡೆದಿದೆಯೆಂದು ಕುಸ್ತಿಯಾಡುವ ಹೆಣ್ಣುಮಕ್ಕಳು ಬಯಲಿಗೆ ಬಂದು ಅಳಲು ತೋಡಿಕೊಂಡರೂ ಕಣ್ಣೀರಿಟ್ಟರೂ, ಅವರ ಮಾತು ಗಳನ್ನು ಆಲಿಸುವ ಕನಿಷ್ಠ ಸೌಜನ್ಯವನ್ನು ಪ್ರಜಾಪ್ರಭುತ್ವದ ಧರ್ಮಸಭೆಯ ಸೂತ್ರಗಳನ್ನು ವಹಿಸಿ ಕೊಂಡವರು ತೋರಿಸದ ವರ್ತಮಾನಕ್ಕೆ ನಾವು ಸಾಕ್ಷಿ ಆಗಿದ್ದೇವೆ. ಪ್ರಜಾಪ್ರತಿನಿಧಿಗಳ ನಿರ್ಲಕ್ಷ್ಯದೆದುರು ಪ್ರತಿಭಟನೆನಿರತ ಹೆಣ್ಣುಮಕ್ಕಳು ನಿರುಪಾಯರಾಗಿ ಮೂಕರಾದುದು ಈ ದೇಶದ ಎಷ್ಟು ಜನರಲ್ಲಿ ಕಸಿವಿಸಿ ಉಂಟುಮಾಡಿತು? ಹಣೆಗೆ ಕುಂಕುಮ ಧರಿಸದಿರುವ ಮಹಿಳೆಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದು ಕೊಂಡ ಕೋಲಾರದ ಸಂಸದರ ವರ್ತನೆ ಇನ್ನೂ ಎಷ್ಟು ಜನರಿಗೆ ನೆನಪಿದೆ? ನೈತಿಕತೆಯ ಹೆಸರಿನಲ್ಲಿ ಅನೈತಿಕ ಕೃತ್ಯವನ್ನೆಸಗಿದ ಜನಪ್ರತಿನಿಧಿಯ ಮಾತುಗಳು, ಮಹಿಳೆ ಯರನ್ನು ಸಂಕೇತಗಳಲ್ಲಿ ಬಂದಿಯಾಗಿರಿಸುವ ಪುರುಷ ಮನಃಸ್ಥಿತಿಯಿಂದ ಕೂಡಿರುವಂತಹದ್ದು; ಮಹಿಳೆಯರ ಸ್ವಂತಿಕೆ ಮತ್ತು ಸ್ವಾಭಿಮಾನವನ್ನು ಅವಮಾನಿಸುವಂತಹದ್ದು.

ಹೆಣ್ಣನ್ನು ಮಿಕದಂತೆ ಕಾಣುವ ಅನಾಗರಿಕ ಕೃತ್ಯ ಹಲವು ರೂಪಗಳಲ್ಲಿ ನಮ್ಮ ನಡುವೆ ಪ್ರಕಟಗೊಳ್ಳು
ತ್ತಲೇ ಇರುತ್ತದೆ. ಹೊಸ ವಂಟಮೂರಿ ಗ್ರಾಮದ ಬೆತ್ತಲೆ ಪ್ರಕರಣವಿರಲಿ, ‘ಅನಿಮಲ್’ ಹಿಂದಿ ಚಿತ್ರದಲ್ಲಿನ ಹೆಣ್ಣಿನ ಚಿತ್ರಣವಿರಲಿ, ‘ಬಿಗ್‌ ಬಾಸ್‌’ ಆಟದ ಮನೆಯಲ್ಲಿನ ಗಂಡುಗಳ ಧೋರಣೆಯಿರಲಿ– ಎಲ್ಲೆಡೆ ಇರುವುದೂ ಒಂದೇ ಮನಃಸ್ಥಿತಿ; ಗಂಡು ನಿರ್ಧರಿಸಿದ ಚೌಕಟ್ಟಿನಲ್ಲಿ ಹೆಣ್ಣಿನ ಬಿಂಬ ಹೊಂದಿಕೊಳ್ಳಬೇಕೆನ್ನುವುದು. ಕನ್ನಡದ ಕಿರುತೆರೆಯಲ್ಲೀಗ ಚಾಲ್ತಿಯಲ್ಲಿರುವ ಬಿಗ್ ಬಾಸ್ ಆಟದಲ್ಲಿ ಯುವತಿಯೊಬ್ಬಳನ್ನು ಮನೆಯೊಳಗೆ ಹಾಗೂ ಹೊರಗೆ ನಡೆಸಿಕೊಳ್ಳುತ್ತಿರುವ ರೀತಿ ಕೂಡ, ಗಂಡು ರೂಪಿಸಿರುವ ಚೌಕಟ್ಟಿನೊಳಗೆ ಹೆಣ್ಣು ಅಡಕವಾಗದೆ ಹೋದಾಗ ಉಂಟಾಗುವ ಪ್ರತಿಕ್ರಿಯೆಗಳ ಮೂರ್ತರೂಪವೇ ಆಗಿದೆ. ವ್ಯಕ್ತಿತ್ವಗಳ ಸೌಂದರ್ಯದ ಅನಾವರಣದ ಬದಲು, ವಿಕೃತಿಯ ಅನಾವರಣವನ್ನೇ ಕಿರುತೆರೆಯ ಆಟ
ಗುರಿಯಾಗಿಸಿಕೊಂಡಂತೆ ಕಾಣುತ್ತಿದೆ. ಈ ಆಟವನ್ನು ಜನ ಮುಗಿಬಿದ್ದು ನೋಡುತ್ತಿರುವುದು ನಮ್ಮೊಳಗಿನ ಸುಪ್ತ ಕ್ರೌರ್ಯವನ್ನು ತಣಿಸುತ್ತಿರುವ ಸಂಕೇತದಂತಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರದ ಯಶಸ್ಸು ಸಮಾಜದ ನೈತಿಕತೆಯ ಸೋಗಲಾಡಿ
ತನಕ್ಕೆ ಹೊಸತೊಂದು ಉದಾಹರಣೆ. ಸಿನಿಮಾದಲ್ಲಿನ ಹಿಂಸೆ, ನಗ್ನತೆ ಹಾಗೂ ಅಸಭ್ಯತೆಯ ಬಗ್ಗೆ ಸಂಸತ್‌ನಲ್ಲಿಯೂ ಚರ್ಚೆ ನಡೆದಿದೆ. ಬಹುತೇಕ ಸಿನಿಮಾ ವಿಮರ್ಶೆಗಳು ‘ಅನಿಮಲ್’ ಒಳಗೊಂಡಿರುವ ಪಶು ಮನೋಭಾವವನ್ನು ಪ್ರಶ್ನಿಸಿವೆ. ಇದಾವುದರ ಪರಿವೆಯಿಲ್ಲದೆ ಜನ ‘ಅನಿಮಲ್‌’ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಕಲೆ ಮತ್ತು ಆಟದ ಹೆಸರಿನಲ್ಲಿನ ಹಿಂಸೆ ಒಪ್ಪಿತ ಎನ್ನುವುದಾದರೆ, ಅದು ಬಯಲಿನಲ್ಲಿ ನಡೆದಾಗ ನಾಗರಿಕ ಮನಸ್ಸು ಹೆಚ್ಚೇನೂ ಗಾಸಿಗೊಳ್ಳದು. ಆಟದ ಹೆಸರಿನಲ್ಲಿ, ಕಣ್ಣಿನ ದೃಷ್ಟಿಗೆ ಅಪಾಯ ಉಂಟಾಗುವ ಮಟ್ಟಿಗೆ ಯಾರನ್ನಾದರೂ ಹಿಂಸಿಸುವುದು, ಆಟ ನಡೆಸುವವರು ಹಾಗೂ ನೋಡುವವರಿಗೆ ಆ ವಿಕೃತಿ ಸಹ್ಯ ಎನ್ನಿಸುವುದು ಸಂವೇದನಾರಾಹಿತ್ಯ ಸಮಾಜ ರೂಪುಗೊಳ್ಳುತ್ತಿರುವುದನ್ನು ಕಾಣಿಸುವಂತಿದೆ. ಆಟದಲ್ಲಿ ಗಾಯಗೊಂಡ ಯುವತಿಯ ಬಗ್ಗೆ, ಕೃತ್ಯಕ್ಕೆ ಕಾರಣರಾದವರಲ್ಲಿ ಪ್ರಾಯಶ್ಚಿತ್ತ ಭಾವ ತೋರಿಕೆಗಾದರೂ ಕಾಣಿಸದಿರುವುದು, ಆ ದುರಂತಕ್ಕೆ ಆಕೆಯ ಹಟಮಾರಿತನವೇ ಕಾರಣ ಎಂದವರು ಬಿಂಬಿಸುತ್ತಿರುವುದು ಏನನ್ನು ಹೇಳುತ್ತಿದೆ? ಈ ಘಟನೆಯ ಪಂಚಾಯಿತಿ ಮಾಡಬೇಕಾದ ವ್ಯಕ್ತಿ ಕೂಡ, ತಪ್ಪಿಗೆ ಕಾರಣಗಳನ್ನು ಹುಡುಕುವುದರಲ್ಲಿ ಹಾಗೂ ಆ ತಪ್ಪಿನ ಹೊಣೆಯನ್ನು ಸಾಮೂಹಿಕಗೊಳಿಸುವುದರಲ್ಲಿ ತೋರಿದ ಜಾಣ್ಮೆ ನ್ಯಾಯಸಮ್ಮತವಾಗಿರಲಿಲ್ಲ, ಅಂತಃಕರಣದಿಂದಲೂ ಕೂಡಿರಲಿಲ್ಲ. ಕಣ್ಣುಗಳಿಗೆ ಗಂಭೀರ ಹಾನಿ ಯಾಗಿ ಚಿಕಿತ್ಸೆ ಪಡೆದಿರುವ ಹೆಣ್ಣುಮಗಳನ್ನು ಆಟದ ಮನೆಯಲ್ಲಿ ಹಟಮಾರಿಯಂತೆ ಬಿಂಬಿಸಲಾಗುತ್ತಿದೆ ಹಾಗೂ ಆ ಹಟಮಾರಿತನವೇ ಆಕೆಯ ಸಂಕಷ್ಟಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದ ಚರ್ಚೆಗ ಳಲ್ಲಿಯೂ ಕೆಲವರು ಆಕೆಯ ಹಟಮಾರಿತನವನ್ನು ಹೀಯಾಳಿಸುತ್ತಿದ್ದಾರೆ. ಗಂಡನ್ನು ಪ್ರಶ್ನಿಸುವ, ಗಂಡಿನ ಅಹಂಕಾರವನ್ನು ಒಪ್ಪದ ಹೆಣ್ಣುಮಕ್ಕಳ ಮನೋಭಾವ ಮಹಿಳೆಯರಿಗೂ ಹಟಮಾರಿತನದಂತೆ ಕಾಣಿಸುವ ಮಟ್ಟಿಗೆ ನಮ್ಮ ಸಮಾಜ ಪುರುಷಪಕ್ಷಪಾತಿಯಾಗಿದೆ. ಈ ಧೋರಣೆ ಬಿಗ್ ಬಾಸ್ ಆಟದಲ್ಲೂ ಕಾಣಿಸುತ್ತಿದೆ. ಕನ್ನಡ ಕಿರುತೆರೆಯ ಬಿಗ್ ಬಾಸ್ ಆಟದಲ್ಲಿನ ಕಳೆದ ಒಂಬತ್ತು ಆವೃತ್ತಿಗಳಲ್ಲಿ ಒಮ್ಮೆಯಷ್ಟೇ ಮಹಿಳಾಸ್ಪರ್ಧಿ ಗೆದ್ದಿರುವುದು, ಆ ಆಟ ಎಷ್ಟರಮಟ್ಟಿಗೆ ಪುರುಷಪಕ್ಷಪಾತಿಯಾಗಿದೆ ಎನ್ನುವುದನ್ನು ಹೇಳುವಂತಿದೆ.

ಕನ್ನಡ ಸಾಹಿತ್ಯದಲ್ಲಿ ತುಂಬಿಕೊಂಡಿರುವ ಬೂಸಾವನ್ನು ಬಿ. ಬಸವಲಿಂಗಪ್ಪನವರು ಎತ್ತಿ ತೋರಿಸಿದ ಚಾರಿತ್ರಿಕ ಘಟನೆಗೆ ಐವತ್ತು ವರ್ಷಗಳು ತುಂಬಿರುವ ಸಂದರ್ಭವಿದು. ಈ ಐವತ್ತು ವರ್ಷಗಳಲ್ಲಿ ಸಾಹಿತ್ಯ
ದಲ್ಲಿನ ಬೂಸಾ ಕಡಿಮೆಯಾಗಿದೆಯೆ? ಇಲ್ಲ, ಆ ಬೂಸಾ ಸಾಹಿತ್ಯದಾಚೆಗೂ ಹರಡಿಕೊಂಡಿದೆ, ಸಾಮಾಜಿಕ ಸಾಂಸ್ಕೃತಿಕ ಪರಿಸರದಲ್ಲೂ ತುಂಬಿಕೊಂಡಿದೆ. ರಾಜಕಾರಣಿಗಳಿಗಂತೂ ಬೂಸಾ ರುಚಿಕರ ಹಾಗೂ ಲಾಭಕರವಾಗಿದೆ. ಈ ಬೂಸಾ ಕಾಲಘಟ್ಟದಲ್ಲಿ ಮಾನವೀಯತೆಯನ್ನು, ಹೃದಯ ಸಂವಾದವನ್ನು ಎಲ್ಲಿ, ಯಾರಲ್ಲಿ ಹುಡುಕುವುದು?

ಮತ್ತೆ ಕುಮಾರವ್ಯಾಸನ ಮಾತಿಗೆ ಬರೋಣ. ‘ಸ್ತ್ರೀಮತವನುತ್ತರಿಸಲಾಗದೆ ಧರ್ಮಶಾಸ್ತ್ರದೊಳು?’ ಎಂದು ಕುಮಾರವ್ಯಾಸನ ದ್ರೌಪದಿ ಕೇಳಿದ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿದೆಯೆ? ಉತ್ತರದ ಮಾತಿರಲಿ, ಆ ಪ್ರಶ್ನೆಯನ್ನು ಸಾವಧಾನದಿಂದ ಎದುರುಗೊಳ್ಳುವಷ್ಟು ಸಹೃದಯತೆ ಯನ್ನಾದರೂ ನಾವು ಉಳಿಸಿಕೊಂಡಿದ್ದೇವೆಯೆ? ಕೌರವನ ಒಡ್ಡೋಲಗದಲ್ಲಿನ ಹಿರಿಯರಿಗೆ ದ್ರೌಪದಿಯ ಪ್ರಶ್ನೆಯಿಂದ ಗಂಟಲುಕಟ್ಟಿತು, ಎದೆಗೆ ನೈತಿಕತೆಯ ಮುಳ್ಳು ನಾಟಿತು. ಈ ಹೊತ್ತು, ಪ್ರಶ್ನೆ ಕೇಳುವ ಹೆಣ್ಣು
ಮಕ್ಕಳನ್ನು ಗಯ್ಯಾಳಿಗಳೆಂದು ಕರೆದು, ಅವರ ಬಾಯಿ ಮುಚ್ಚಿಸಲಾಗುತ್ತದೆ. ನೋವುಂಡವರಿಗೆ ತಮ್ಮ ಸಂಕಟವನ್ನು ಹೇಳಿಕೊಳ್ಳುವ ಅವಕಾಶವನ್ನೇ ಕೊಡದೆ, ಪ್ರಶ್ನೆಗಳ ಕೂರಂಬುಗಳನ್ನು ಅವರ ಮೇಲೆ ತೂರ ಲಾಗುತ್ತಿದೆ. ಮಾತಿನ ದಾಳಿಯ ಮೂಲಕ, ಅನುಭವಿಸಿದ ನೋವು ‘ಕೇವಲ’ವೆನ್ನಿಸುವಂತೆ ಮಾಡುವ ರಾಜಕೀಯ ಚತುರತೆ ಜನಸಾಮಾನ್ಯರಿಗೂ ಸಿದ್ಧಿಸಿದೆ.

‘ಸ್ತ್ರೀಮತವನುತ್ತರಿಸಲಾಗದೆ ಧರ್ಮಶಾಸ್ತ್ರದೊಳು?’ ಎಂದು ದ್ರೌಪದಿಗೆ ಬಾಯಿ ಕೊಟ್ಟ ಕವಿಯೇ ಹೇಳಿರುವ ಮತ್ತೊಂದು ಮಾತು: ‘ಅರಸು ರಾಕ್ಷಸ ಮಂತ್ರಿಯೆಂಬುವ/ ಮೊರೆವ ಹುಲಿ ಪರಿವಾರ ಹದ್ದಿನ/ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT