ಹುಕ್ಕೇರಿ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದಿರುವ ಕಬ್ಬು ಕಡಿಯಲು ಮಹಾರಾಷ್ಟ್ರದಿಂದ ಬಂದಿರುವ ಕಾರ್ಮಿಕರ ಮಕ್ಕಳಿಗೆ, ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಶುಗರ್ಸ್ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಟೆಂಟ್ ಶಾಲೆ ತೆರೆದಿದೆ.
ಇದನ್ನು ಶನಿವಾರ ಉದ್ಘಾಟಿಸಿದ ವಿಶ್ವರಾಜ್ ಶುಗರ್ಸ್ ಪ್ರವರ್ತಕ ಪವನ್ ಕತ್ತಿ, ‘ಶಾಲೆಯಿಂದ ಹೊರಗುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ‘ಟೆಂಟ್ ಶಾಲೆ’ ತೆರೆದಿರುವುದು ಶ್ಲಾಘನೀಯ. ಇಲ್ಲಿ ಅನಾನುಕೂಲವಾದರೆ ವಿ.ಎಂ.ಕತ್ತಿ ಶಿಕ್ಷಣ ಸಂಸ್ಥೆಯಲ್ಲಿ ಟೆಂಟ್ ಶಾಲೆ ತೆರೆಯಲು ಜಾಗ ನೀಡಲು ಸಿದ್ಧವಿದ್ದೇನೆ. ಕಾರ್ಮಿಕರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು’ ಎಂದು ಕೋರಿದರು.
‘ಪ್ರತಿವರ್ಷ ಕಬ್ಬು ಕಡಿಯಲು ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಿಲ್ಲೆಗೆ ಬರುತ್ತಾರೆ. ತಮ್ಮೊಂದಿಗೆ ಮಕ್ಕಳನ್ನೂ ಕರೆತರುತ್ತಾರೆ. ಡಿಡಿಪಿಐ ನೇತೃತ್ವದಲ್ಲಿ ಸಮಗ್ರ ಮಾಹಿತಿ ಕಲೆಹಾಕಿದರೆ, ಮಕ್ಕಳಿಗೆ ಹೆಚ್ಚಿನ ಶೈಕ್ಷಣಿಕ ಸೌಕರ್ಯ ಒದಗಿಸಬಹುದು’ ಎಂದರು.
ಬಿಇಒ ಪ್ರಭಾವತಿ ಪಾಟೀಲ, ‘ಸಂಘ–ಸಂಸ್ಥೆಗಳ ನೆರವಿನೊಂದಿಗೆ ಮಹಾರಾಷ್ಟ್ರದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಲು ಟೆಂಟ್ ಶಾಲೆ ತೆರೆಯಲಾಗಿದೆ. ಈ ಅವರಿಗೆ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ ಒದಗಿಸಲಾಗುವುದು. ತಾತ್ಕಾಲಿಕವಾಗಿ ಬೋಧನೆ ಮಾಡಲು ಮರಾಠಿ ಭಾಷಾ ಶಿಕ್ಷಕರನ್ನು ನಿಯೋಜಿಸಲಾಗುವುದು’ ಎಂದರು.