ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಜಂಟಿ ಆಯುಕ್ತರ ಸೋಗಿನಲ್ಲಿ ವಂಚನೆ!

*ಸರ್ಕಾರಿ ನಿವೃತ್ತ ಅಧಿಕಾರಿಗಳು ಗುರಿ * ಅಕ್ರಮ ಸಂಪತ್ತು ಗಳಿಕೆ ಬಗ್ಗೆ ಬೆದರಿಕೆ
Last Updated 21 ಫೆಬ್ರುವರಿ 2020, 22:55 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯ ತೆರಿಗೆ (ಐ.ಟಿ) ಇಲಾಖೆ ಜಂಟಿ ಆಯುಕ್ತರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಲ್ಲಿ ನಾಗೇಂದ್ರ ಅಲಿಯಾಸ್ ಮಂಜುನಾಥ್ ನಾಯಕ್ (40) ಎಂಬಾತನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

‘ಮೈಸೂರಿನ ನಿವಾಸಿಯಾದ ಮಂಜುನಾಥ್‌, ಸದ್ಯ ನಂದಿನಿ ಲೇಔಟ್‌ನಲ್ಲಿ ನೆಲೆಸಿದ್ದಾನೆ. ಸ್ನಾತಕೋತ್ತರ ಪದವಿ ಮುಗಿಸಿರುವ ಈತ, ಎಲ್‍ಐಸಿ ಏಜೆಂಟ್‌. ವರ್ಷದಿಂದ ಬೆಂಗಳೂರು ಸೇರಿ ವಿವಿಧೆಡೆ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ, ತನ್ನನ್ನು ಐಟಿ ಇಲಾಖೆ ಜಂಟಿ ಆಯುಕ್ತ ಎಂದು ಪರಿಚಯಿಸಿಕೊಂಡು ಹಣ ದೋಚಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ನಿಮ್ಮ ವಿರುದ್ಧ ಅಕ್ರಮ ಸಂಪತ್ತು ಗಳಿಕೆ ದೂರು ಬಂದಿದ್ದು, ಮನೆ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಲಿದೆ. ದಾಳಿಯಾದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ಅಧಿಕಾರಿಗಳನ್ನು ನಾಗೇಂದ್ರ ಹೆದರಿಸುತ್ತಿದ್ದ. ಕೇಳಿದಷ್ಟು ಹಣ ನೀಡಿದರೆ ಯಾವುದೇ ಸಮಸ್ಯೆಯಾಗದು ಎಂದು ಹೇಳಿ, ಹಣ ಪಡೆದು ಪರಾರಿಯಾಗುತ್ತಿದ್ದ’ ಎಂದರು.

ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳನ್ನು ಗುರಿಯಾಗಿಸಿ ಈತ ವಂಚಿಸುತ್ತಿದ್ದ. ಎಲ್‍ಐಸಿ ಹಣ ಪಡೆಯುವ ವೇಳೆ ಇಂಥ ಅಧಿಕಾರಿಗಳ ಮಾಹಿತಿ ಸಂಗ್ರಹಿಸುತ್ತಿದ್ದ ಆರೋಪಿ, ಅವರಿಗೆ ಕರೆ ಮಾಡಿ ‘ನಿಮ್ಮ ಆಸ್ತಿ ವಿವರ ನನ್ನ ಬಳಿಯಿದೆ. ಅದಕ್ಕೆ ಲೆಕ್ಕ ಕೊಡಿ. ಇಲ್ಲದಿದ್ದರೆ ದಾಳಿ ಎದುರಿಸಬೇಕಾಗುತ್ತದೆ ಎನ್ನುತ್ತಿದ್ದ. ಆತಂಕಗೊಂಡ ಕೆಲ ಅಧಿಕಾರಿಗಳು ಆತನಿಗೆ ಹಣ ನೀಡಿದ್ದಾರೆ ಎನ್ನಲಾಗಿದೆ. ಹಣ ಕಳೆದು
ಕೊಂಡಿರುವ ಅಧಿಕಾರಿಗಳು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಂಚನೆಗೆ ಒಳಗಾದ ಆರ್‌ಟಿಒ ಅಧಿಕಾರಿ ಆನಂದಯ್ಯ ದೂರಿನ ಆಧಾರದಲ್ಲಿ ನಾಗೇಂದ್ರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ದ್ದರು. ಆನಂದಯ್ಯ ಅವರನ್ನು ಗರುಡ ಮಾಲ್‍ನ ಕಾಫಿ ಡೇಯಲ್ಲಿ ನಾಗೇಂದ್ರ ಭೇಟಿಯಾಗಿದ್ದ. ಈ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೊಲೀಸರಿಗೆ ಆತ ಬೆಂಗಳೂರಿನಲ್ಲೇ ಸಿಕ್ಕಿಬಿದ್ದಿದ್ದಾನೆ.

‘ಆರೋಪಿ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ತಾನು ವಂಚಿಸಿದ ಅಧಿಕಾರಿಗಳ ಕುರಿತು ಬಾಯಿ ಬಿಡುತ್ತಿಲ್ಲ’ ಎಂದು ಪೊಲೀಸರು ತಿಳಿಸಿದರು.

ಆರ್‌ಟಿಒ ಅಧಿಕಾರಿಯಿಂದ ₹ 5 ಲಕ್ಷ ಪಡೆದಿದ್ದ ಆರೋಪಿ!
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಆರ್‌ಟಿಒ ಅಧಿಕಾರಿ ಆನಂದಯ್ಯ ಅವರಿಗೆ ಫೆ. 17ರಂದು ಸಂಜೆ ಕರೆ ಮಾಡಿದ್ದ ನಾಗೇಂದ್ರ, ‘ನಿಮ್ಮ ವಿರುದ್ಧ ಐಟಿ ಇಲಾಖೆಗೆ ದೂರು ಬಂದಿದೆ. ನಿಮ್ಮ ಮನೆಯ ಮೇಲೆ ದಾಳಿ ಮಾಡಬೇಕಾಗುತ್ತದೆ’ ಎಂದು ಬೆದರಿಸಿದ್ದ. ‘ನನ್ನಿಂದ ನೆರವು ಬೇಕಿದ್ದರೆ ₹ 15 ಲಕ್ಷ ಕೊಡಬೇಕು. ನಿಮಗೆ ನಿರಕ್ಷೇಪಣಾ ಪತ್ರ (ಎನ್‍ಒಸಿ) ಫಾರಂ ಕೊಡುತ್ತೇನೆ’ ಎಂದಿದ್ದ.

‘ಅಷ್ಟು ಹಣ ನೀಡಲು ಸಾಧ್ಯವಿಲ್ಲ’ ಎಂದು ಆನಂದಯ್ಯ ಹೇಳಿದ್ದರು. ಅಗ ಆರೋಪಿ ₹ 8 ಲಕ್ಷ ಕೊಡುವಂತೆ ಸೂಚಿಸಿದ್ದ. ಕೊನೆಗೆ ₹ 5 ಲಕ್ಷ ಕೊಡಲು ಆನಂದಯ್ಯ ಒಪ್ಪಿದ್ದರು. ಫೆ. 18ರಂದು ಬೆಳಿಗ್ಗೆ ಮತ್ತೆ ಕರೆ ಮಾಡಿದ ಆರೋಪಿ, ‘ಇಂದೇ ಹಣ ತೆಗೆದುಕೊಂಡು ಬರಬೇಕು. ಇಲ್ಲದಿದ್ದರೆ ದಾಳಿ ನಡೆಯಲಿದೆ’ ಎಂದು ಹೆದರಿಸಿದ್ದ.

ಐಟಿ ಕಚೇರಿ ಬಳಿ ಬರುವುದಾಗಿ ಆನಂದಯ್ಯ ಹೇಳಿದಾಗ, ‘ನೀವು ಕಚೇರಿಗೆ ಬರುವುದು ಬೇಡ. ಇದು ಗೋಪ್ಯ ವಿಷಯ. ಗರುಡಮಾಲ್‍ನಲ್ಲಿರುವ ಕಾಫಿ ಡೇಗೆ ಬನ್ನಿ’ ಎಂದಿದ್ದ. ಅಂದು ಮಧ್ಯಾಹ್ನ 3 ಗಂಟೆಗೆ ಗರುಡಮಾಲ್‍ಗೆ ಬಂದ ಆನಂದಯ್ಯಅವರಿಂದ ₹ 5 ಲಕ್ಷ ಪಡೆದುಕೊಂಡ ನಾಗೇಂದ್ರ, ‘ಎನ್‌ಒಸಿ ಫಾರಂ ಕೊಡುತ್ತೇನೆ’ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಅಶೋಕ ನಗರ ಠಾಣೆಯಲ್ಲಿ ಆನಂದಯ್ಯ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT