ಬೆಂಗಳೂರು: ‘ಬ್ರಿಟನ್ನಿಂದ ರಾಜ್ಯಕ್ಕೆ ಬಂದಿದ್ದಾರೆ ಎಂದು ಪತ್ತೆಯಾದ 3,062 ಪ್ರಯಾಣಿಕರಲ್ಲಿ 2,292 ಜನರಿಗೆ ಮಾತ್ರ ಕೋವಿಡ್ ಪರೀಕ್ಷೆ ನಡೆಸಿರುವುದೇಕೆ’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನೆ ಮಾಡಿದೆ.
ರಾಜ್ಯ ಸರ್ಕಾರ ಸಲ್ಲಿಸಿದ್ದ ವಿವರ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಎಲ್ಲರಿಗೂ ಕೋವಿಡ್ ಪರೀಕ್ಷೆ ನಡೆಸದಿರಲು ಕಾರಣ ಏನು, 770 ಮಂದಿ ಕೋವಿಡ್ ಪರೀಕ್ಷೆಯಿಂದ ಹೊರಗಿರಿಸಿರುವುದು ಏಕೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ನಿರ್ದೇಶನ ನೀಡಿದೆ.
‘34 ಪ್ರಯಾಣಿಕರು ಮತ್ತು 14 ಮಂದಿ ಪ್ರಾಥಮಿಕ ಸಂಪರ್ಕಿತರಲ್ಲಿ ಕೋವಿಡ್ ದೃಢಪಟ್ಟಿದೆ. 176 ಜನರ ಕೋವಿಡ್ ಪರೀಕ್ಷಾ ವರದಿ ಬರಬೇಕಿದೆ. 75 ಪ್ರಯಾಣಿಕರು ಪತ್ತೆಯಾಗಿಲ್ಲ’ ಎಂದು ಸರ್ಕಾರ ವಿವರ ಸಲ್ಲಿಸಿತ್ತು.
‘ಕೋವಿಡ್ ಪರೀಕ್ಷಾ ವರದಿ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಪ್ರಯೋಗಾಲಯಗಳಿಂದ ₹49,200 ದಂಡ ವಸೂಲಿ ಮಾಡಲಾಗಿದೆ. ಇನ್ನೂ ₹9.9 ಕೋಟಿ ದಂಡ ವಸೂಲಿ ಪ್ರಕ್ರಿಯೆ ಪರಿಶೀಲನೆ ಹಂತದಲ್ಲಿದೆ’ ಎಂದು ಸರ್ಕಾರ ಇದೇ ವೇಳೆ ವಿವರಿಸಿದೆ.