ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಮರೀಚಿಕೆ

Published 3 ಏಪ್ರಿಲ್ 2024, 0:02 IST
Last Updated 3 ಏಪ್ರಿಲ್ 2024, 0:02 IST
ಅಕ್ಷರ ಗಾತ್ರ

ಬೆಂಗಳೂರು: ವಿಸ್ತರಣೆಯಾಗದ ರಸ್ತೆಗಳು, ಇಕ್ಕಟ್ಟಾದ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳು, ದಟ್ಟಣೆಯಲ್ಲಿ ಸಿಲುಕಿ ಪರದಾಡುವ ಪ್ರಯಾಣಿಕರು, ಅತಿಕ್ರಮಗೊಂಡ ಪಾದಚಾರಿ ಮಾರ್ಗಗಳು ಹಾಗೂ ಶಬ್ದ–ವಾಯು ಮಾಲಿನ್ಯದಿಂದ ಕಿರಿಕಿರಿ ಅನುಭವಿಸುವ ಜನ...

ಹಲವು ಚುನಾವಣೆಗಳು ನಡೆದು, ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಬದಲಾದರೂ ಈ ಸಮಸ್ಯೆಗಳಿಗೆ ಮಾತ್ರ ಶಾಶ್ವತ ಪರಿಹಾರ ಸಿಗುತ್ತಿಲ್ಲ. ‘ದಟ್ಟಣೆ ಮುಕ್ತ ಬೆಂಗಳೂರು’ ಮಾಡುವ ಆಶ್ವಾಸನೆ ನೀಡಿ ಅಧಿಕಾರ ಹಿಡಿಯುವ ಜನಪ್ರತಿನಿಧಿಗಳು, ಅದಕ್ಕೆ ತಕ್ಕಂತೆ ಪ್ರಯತ್ನ ಮಾಡುತ್ತಿಲ್ಲವೆಂಬ ಆರೋಪವಿದೆ.

‘ಉದ್ಯಾನ ನಗರಿ’ ಖ್ಯಾತಿಯ ಬೆಂಗಳೂರಿಗೆ, ‘ದಟ್ಟಣೆ ನಗರ’ ಎಂಬ ಅಪಖ್ಯಾತಿಯೂ ಸೇರಿಕೊಂಡಿದೆ. ಈ ಕಳಂಕ ಅಳಿಸಲು ಸೂಕ್ತ ವೈಜ್ಞಾನಿಕ ಯೋಜನೆಗಳು ಜಾರಿಗೆ ಬಂದಿಲ್ಲ. ಆಳುವವರು, ತಾತ್ಕಾಲಿಕ ಪರಿಹಾರಗಳನ್ನಷ್ಟೇ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಪರಿಣಾಮ ಜನರು, ನಿತ್ಯವೂ ದಟ್ಟಣೆಯಲ್ಲಿ ಸಿಲುಕಿ ಹಿಡಿಶಾಪ ಹಾಕುತ್ತಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ‘ದಟ್ಟಣೆ‘ ವಿಷಯವನ್ನು ಪಕ್ಷದವರಿಗೆ ನೆನಪಿಸುವ ಸಾಧ್ಯತೆ ಇದೆ.

ಪರಿಹಾರ ಕಾಣದ ತಾಣಗಳು: ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ, ವೈಟ್‌ಫೀಲ್ಡ್, ಬೆಳ್ಳಂದೂರು, ಕೆ.ಆರ್. ಪುರ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಬೆಳಿಗ್ಗೆ–ಸಂಜೆ ‘ಸಂಚಾರ ದಟ್ಟಣೆ‘ ಕಾಯಂ. ಈ ಮಾರ್ಗಗಳಲ್ಲಿ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ಕೊರತೆ, ಕೆಲ ಮೇಲ್ಸೇತುವೆಗಳನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿರುವುದರಿಂದಲೂ ದಟ್ಟಣೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲವೆಂಬುದು ಜನರ ಅಭಿಪ್ರಾಯವಾಗಿದೆ.

ಇನ್ನು, ಯಲಹಂಕ ಉಪನಗರ, ವಿದ್ಯಾರಣ್ಯಪುರ, ಕೊಡಿಗೇಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಮೇಲ್ಸೇತುವೆಗಳು, ಕೆಳ ಸೇತುವೆಗಳು ಹಾಗೂ ರಸ್ತೆ ವಿಸ್ತರಣೆಗೆ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಯೋಜನೆಗಳ ಅನುಷ್ಠಾನ ಆಗುತ್ತಿಲ್ಲ. ಈ ಬಗ್ಗೆ ಜನರಲ್ಲಿ ಬೇಸರವಿದೆ.

‘ಪಾದಚಾರಿ‘ ಮಾರ್ಗ ಒತ್ತುವರಿ: ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬೈಯಪ್ಪನಹಳ್ಳಿ, ಎಚ್‌ಎಎ‌ಲ್, ವೈಟ್‌ಫೀಲ್ಡ್, ಕೆ.ಆರ್.ಪುರ, ರಾಜರಾಜೇಶ್ವರಿನಗರ ಸೇರಿದಂತೆ ನಗರದ ಜನದಟ್ಟಣೆಯ ಪ್ರದೇಶಗಳಲ್ಲಿನ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ. ಹೀಗಾಗಿ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗಿಳಿಯುತ್ತಾರೆ. ಇದು ದಟ್ಟಣೆಗೆ ಕಾರಣವಾಗುತ್ತದೆ. 

ತುಮಕೂರು ರಸ್ತೆಯಲ್ಲಿ ದಟ್ಟಣೆ ನಿಯಂತ್ರಣಕ್ಕಾಗಿ ನಿರ್ಮಿಸಿರುವ ಪೀಣ್ಯ ಮೇಲ್ಸೇತುವೆ ಆಗಾಗ್ಗೆ ದುರಸ್ತಿಗೆ ಬರುತ್ತದೆ. ದುರಸ್ತಿ ಸಂಬಂಧ 2022ರಿಂದ ವಾಹನಗಳ ಓಡಾಟ ಸಂಪೂರ್ಣ ಬಂದ್ ಆಗಿತ್ತು. ಈಗಲೂ ಭಾರಿ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳ ಸಂಚಾರಕ್ಕಷ್ಟೇ ಅವಕಾಶ ಮಾಡಿಕೊಡಲಾಗಿದೆ. ಯಾವ ಸಮಯದಲ್ಲಿ ಸೇತುವೆ ಬಂದ್ ಮಾಡುತ್ತಾರೆ ಎಂದೇ ಗೊತ್ತಾಗುವುದಿಲ್ಲ. ಈ ‘ಸೇತುವೆ ಸಮಸ್ಯೆ’ಗೆ ಶಾಶ್ವತ ಪರಿಹಾರ ಸಿಕ್ಕಂತೆ ಕಾಣುತ್ತಿಲ್ಲ. 

ಹೊರವರ್ತುಲ ರಸ್ತೆಯಲ್ಲೂ ದಟ್ಟಣೆ: ವೈಟ್‌ಫೀಲ್ಡ್, ಐಟಿಪಿಎಲ್ ಸೇರಿದಂತೆ ಹಲವು ಪ್ರದೇಶಗಳಿಗೆ ಹೊಂದಿಕೊಂಡಂತೆ ಹೊರ ವರ್ತುಲ ರಸ್ತೆ ನಿರ್ಮಿಸಲಾಗಿದ್ದು, ಅಲ್ಲಿಯೂ ದಟ್ಟಣೆ ಹೆಚ್ಚಾಗಿದೆ. ಪ್ರತಿಷ್ಠಿತ ಕಂಪನಿಗಳಿರುವ ಈ ಪ್ರದೇಶಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ದಟ್ಟಣೆ ಕಿರಿಕಿರಿ ತಪ್ಪುತ್ತಿಲ್ಲ. ಇದೇ ಕಾರಣದಿಂದ ಹೊರ ವರ್ತುಲ ರಸ್ತೆಗಳ ಕಂಪನಿಗಳ ಸಂಘ (ಒಆರ್‌ಆರ್‌ಸಿಎ), ಬೆಂಗಳೂರು ತೊರೆಯುವುದಾಗಿ ಎಚ್ಚರಿಕೆ ಸಹ ನೀಡಿತ್ತು. ಸಿಲ್ಕ್ ಬೋರ್ಡ್‌ ಜಂಕ್ಷನ್‌ ಹಾಗೂ ಸುತ್ತಮುತ್ತಲಿನ ದಟ್ಟಣೆಗೂ ಸದ್ಯಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಕೇಬಲ್‌ ಅಳವಡಿಕೆ, ಒಳಚರಂಡಿ ನಿರ್ಮಾಣ, ಕಾವೇರಿ ನೀರಿನ ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಹಲವೆಡೆ ರಸ್ತೆ ಅಗೆಯಲಾಗಿದೆ. ರಸ್ತೆಗೆ ಇಳಿಯುವ ಹೊಸ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮನೆಗೊಂದು ವಾಹನಕ್ಕಿಂತ, ವ್ಯಕ್ತಿಗೊಂದು ವಾಹನಗಳು ಕಂಡುಬರುತ್ತಿವೆ. ಪ್ರತಿ ವಾಹನದ ನೋಂದಣಿ ಪ್ರಕ್ರಿಯೆ ಮಾತ್ರ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ವಾಹನಗಳ ಸಂಖ್ಯೆಗೆ ತಕ್ಕಂತೆ ಸೌಕರ್ಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲವೆಂಬ ದೂರುಗಳಿವೆ.

ದಟ್ಟಣೆ ತಗ್ಗಿಸಲು ‘ಟನಲ್‌ ರಸ್ತೆ’ ಯೋಜನೆ ಮೊರೆ ಹೋಗಲಾಗಿದೆ. ‘ಇದು ಸಾಧ್ಯವೇ‘ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲ ಇಕ್ಕಟಾದ ರಸ್ತೆಗಳ ವಿಸ್ತರಣೆಗೆ ಯೋಜನೆಗಳು ಇದ್ದರೂ ಸಂಪೂರ್ಣವಾಗಿ ಅನುಷ್ಠಾನ ಆಗುತ್ತಿಲ್ಲ. ಬಹುತೇಕ ರಸ್ತೆಗಳ ವಿಸ್ತರಣೆಗೆ ಯೋಜನೆಗಳೇ ಇಲ್ಲ.

ತಾತ್ಕಾಲಿಕ ಪರಿಹಾರ 

ಭಾರತೀಯ ಮೋಟಾರು ವಾಹನಗಳ ಕಾಯ್ದೆ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ನಿಯಮಗಳನ್ನು ಜಾರಿಗೆ ತರಲು ಕೆಲಸ ಮಾಡುತ್ತಿರುವ ಸಂಚಾರ ಪೊಲೀಸರು ದಟ್ಟಣೆಗೆ ತಾತ್ಕಾಲಿಕ ಪರಿಹಾರ ಮಾತ್ರ ಕಂಡುಕೊಳ್ಳುತ್ತಿದ್ದಾರೆ. ರಸ್ತೆಗಳು ಪಾದಚಾರಿ ಮಾರ್ಗ ವೃತ್ತಗಳ ಅಭಿವೃದ್ಧಿ ಹೊಣೆ ಸ್ಥಳೀಯ ಸಂಸ್ಥೆಯದ್ದಾಗಿದೆ. ಆದರೆ ಆಳುವವರ ನಿರ್ಲಕ್ಷ್ಯದಿಂದ ಶಾಶ್ವತ ಪರಿಹಾರ ಇಲ್ಲದಂತಾಗಿದೆ. ದಟ್ಟಣೆ ನಿಯಂತ್ರಿಸುವ ಬಗ್ಗೆ ಪ್ರತಿ ಚುನಾವಣೆ ಸಂದರ್ಭದಲ್ಲೂ ಭರವಸೆ ನೀಡುವ ಜನಪ್ರತಿನಿಧಿಗಳು ಗೆದ್ದ ನಂತರ ಈ ಬಗ್ಗೆ ಮಾತನಾಡುವುದಿಲ್ಲ. ತಾವೇ ದಟ್ಟಣೆಯಲ್ಲಿ ಸಿಲುಕಿದರೂ ‘ಇದು ದೊಡ್ಡ ಸಮಸ್ಯೆಯಲ್ಲ‘ ಎಂಬಂತೆ ವರ್ತಿಸುತ್ತಿದ್ದಾರೆ. ದಿನದ ದುಡಿಮೆ ನಂಬಿ ಬದುಕುವ ಜನರಿಗೆ ಮಾತ್ರ ದಟ್ಟಣೆಯೇ ದೊಡ್ಡ ಶಾಪವಾಗಿದೆ. ದಟ್ಟಣೆ ನಿಯಂತ್ರಿಸಲು ಪೊಲೀಸರು ತಂತ್ರಜ್ಞಾನಗಳ ಸಹಾಯ ಪಡೆದಿದ್ದಾರೆ. ಇಂಥ ತಾತ್ಕಾಲಿಕ ಕ್ರಮಗಳಿಂದ ದಟ್ಟಣೆಗೆ ಪರಿಹಾರ ಸಿಗುತ್ತಿಲ್ಲ.

‘ಸೊರಗುತ್ತಿರುವ ಮೊಡೆರಾಟೊ‘

ನಗರದ ಹಲವು ವೃತ್ತಗಳಲ್ಲಿ ದಟ್ಟಣೆ ನಿಯಂತ್ರಿಸಲು ‘ವಾಹನಗಳ ದಟ್ಟಣೆ ಆಧರಿಸಿ ಸ್ವಯಂಚಾಲಿತ ಸಿಗ್ನಲ್ ನಿರ್ವಹಣೆ ತಂತ್ರಜ್ಞಾನ (ಮೊಡೆರಾಟೊ)’ ವ್ಯವಸ್ಥೆ ಅಳವಡಿಸಲಾಗಿದ್ದು ಇದಕ್ಕೆ ಈವರೆಗೂ ಚಾಲನೆ ಸಿಕ್ಕಿಲ್ಲ. ಜಪಾನ್‌ನಲ್ಲಿ ಜಾರಿಯಲ್ಲಿರುವ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಇದು. ಬಹುತೇಕ ವೃತ್ತಗಳಲ್ಲಿ ಸುಧಾರಿತ ಸಿಗ್ನಲ್‌ ದೀಪಗಳು ಹಾಗೂ ಉಪಕರಣಗಳನ್ನು ಜೋಡಿಸಲಾಗಿದೆ. ಅವುಗಳನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿದೆ.

‘ಅತೀ ಹೆಚ್ಚು ದಟ್ಟಣೆ: ಬೆಂಗಳೂರು ಮೊದಲು’

ವಿಶ್ವ ಹಾಗೂ ಭಾರತದ ಸಂಚಾರ ದಟ್ಟಣೆ ಬಗ್ಗೆ ಅಧ್ಯಯನ ನಡೆಸಿದ್ದ ಲಂಡನ್‌ನ ‘ಟಾಮ್ ಟಾಮ್’ ಸಂಸ್ಥೆಯು 2023ನೇ ಸಾಲಿನ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ) ಹಾಗೂ ಇತರೆ ಪ್ರದೇಶಗಳಲ್ಲಿ ಅತಿ ಹೆಚ್ಚು ದಟ್ಟಣೆಯಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ವಿಶ್ವದ ನಗರಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪುಣೆ ನವದೆಹಲಿ ಮುಂಬೈ ಕ್ರಮವಾಗಿ ಎರಡು ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT