ಹೊಸದುರ್ಗ: ರೈತ ವಿರೋಧಿ ಕಾನೂನು ವಾಪಸ್ ಪಡೆಯುವಂತೆ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಪರವಾಗಿ ಹಿರಿಯ ಸಾಹಿತಿ ಹಂಪನಾ ಹೋಗಿದ್ದು ಅಭಿನಂದನಾರ್ಹ. ಆದರೆ, ಪೊಲೀಸರು ಹಂಪನಾ ಅವರನ್ನು ವಿಚಾರಣೆ ಮಾಡಿರುವುದು ಖಂಡನೀಯ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಚಳಿ, ಮಳೆ, ಬಿಸಿಲೆನ್ನದೆ ರೈತರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಒಂದು ತಿಂಗಳಿಂದ ಹೊಸದಾಗಿ ಜಾರಿಗೊಳಿಸಲಿರುವ ಮೂರು ರೈತವಿರೋಧಿ ಕಾನೂನುಗಳನ್ನು ವಾಪಾಸ್ ಪಡೆಯಲು ಸಂಘಟಿತ ಹೋರಾಟ ಮಾಡುತ್ತಿದ್ದಾರೆ. ಎಲ್ಲ ರಾಜಿ- ಸಂಧಾನಗಳು ಮುರಿದುಬಿದ್ದಿವೆ. ಈ ನಾಡಿನ ಬೆನ್ನೆಲುಬು ರೈತರು ಎಂದು ವಿವರಿಸಬೇಕಾಗಿಲ್ಲ. ನಮಗೆ ಅನ್ನ ಕೊಡುವ ರೈತರನ್ನು ಯಾರೂ ಉಪೇಕ್ಷೆ ಮಾಡಬಾರದು.