ಮಂಗಳೂರು: ಬೆಂಗಳೂರಿನಿಂದ ಮಂಗಳೂರು ಮೂಲಕ ಕಾರವಾರಕ್ಕೆ ದೈನಂದಿನ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಿದ್ದು, ಇದೀಗ ಪ್ರಯಾಣಿಕರ ಕೊರತೆ ಎದುರಾಗಿದೆ. ವಾರದ ಹಿಂದಷ್ಟೇ ಶುರುವಾಗಿರುವ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಂತ ವಿರಳವಾಗಿದೆ.
ಸೆಪ್ಟೆಂಬರ್ 24 ರಂದು ಶುರುವಾದ ಕಾರವಾರ–ಮಂಗಳೂರು–ಬೆಂಗಳೂರು (ರೈ.ಸಂ. 6586) ರೈಲಿನಲ್ಲಿ ಇದೇ 24 ರಂದು 18 ಮಂದಿ, 25 ರಂದು 15 ಜನರು, 26 ರಂದು 20 ಪ್ರಯಾಣಿಕರು, 27 ರಂದು 21 ಹಾಗೂ 28 ರಂದು 18 ಮಂದಿ ಮಾತ್ರ ಪ್ರಯಾಣಿಸಿದ್ದಾರೆ.
ಬೆಂಗಳೂರು–ಮಂಗಳೂರು– ಕಾರವಾರ (ರೈ.ಸಂ. 6585) ರೈಲು ಇದೇ 25 ರಿಂದ ಸಂಚಾರ ಆರಂಭಿಸಿದೆ. ಆದರೆ ಮೊದಲ ದಿನ 23 ಮಂದಿ, ಇದೇ 26 ರಂದು 27 ಜನರು, 27 ರಂದು 18 ಮಂದಿ ಹಾಗೂ 28 ರಂದು 12 ಜನರು ಮಾತ್ರ ಸಂಚಾರ ನಡೆಸಿದ್ದಾರೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಈ ರೈಲುಗಳಲ್ಲಿ ಸಂಚರಿಸುವವರಿಗೆ ಕೌಂಟರ್ಗಳಲ್ಲಿ ಟಿಕೆಟ್ ನೀಡುತ್ತಿಲ್ಲ. ಬದಲಾಗಿ ಆನ್ಲೈನ್ನಲ್ಲಿಯೇ ಟಿಕೆಟ್ ಬುಕ್ ಮಾಡಬೇಕಿದ್ದು, ಪ್ರಯಾಣಿಕರು ರೈಲಿನ ಬದಲು ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಅದಕ್ಕಾಗಿ ಸ್ಥಳದಲ್ಲಿಯೇ ಟಿಕೆಟ್ ನೀಡಲು ಕೌಂಟರ್ಗಳನ್ನು ಆರಂಭಿಸಿದಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ರೈಲು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.