ಪಣಂಬೂರು ಕಡಲಕಿನಾರೆಯಲ್ಲಿ ಶುಕ್ರವಾರದಿಂದ ಜಾನಪದ ಕಡಲೋತ್ಸವ ಆಯೋಜನೆಗೊಂಡಿದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರತಿನಿತ್ಯ ಸಾವಿರಾರು ಮಂದಿ ಕಿನಾರೆಗೆ ಭೇಟಿ ನೀಡುತ್ತಿದ್ದರು. ಭಾನುವಾರದಂದು ಈ ಉತ್ಸವದ ಕೊನೆಯ ದಿನವಾಗಿತ್ತು. ವಾರಾಂತ್ಯದ ದಿನವಾದ್ದರಿಂದ ಹೆಚ್ಚಿನ ಜನಸಂದಣಿ ಇತ್ತು. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದುದರಿಂದ ಸಾಹಸಿ ಕ್ರೀಡೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಯುವಕರು ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಿ ವೀಕ್ಷಣಾ ವೇದಿಕೆ ನಿರ್ಮಿಸಿದ್ದ ಸ್ಥಳದಿಂದ ದೂರದಲ್ಲಿ ಸಮುದ್ರಕ್ಕೆ ಇಳಿದು ಈಜಾಡುತ್ತಿದ್ದರು. ಈ ವೇಳೆ ಭಾರಿ ಅಲೆಯೊಂದು ಅವರನ್ನು ಕಡಲ ಒಡಲೊಳಗೆ ಎಳೆದೊಯ್ದಿತ್ತು ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದರು.