ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಬೆಳವಣಿಗೆಗೆ ವಿ.ವಿ. ಕಾರ್ಯ ಶ್ಲಾಘನೀಯ

ಗುವಿವಿಯಲ್ಲಿ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
Last Updated 13 ಜನವರಿ 2023, 14:34 IST
ಅಕ್ಷರ ಗಾತ್ರ

ಕಲಬುರಗಿ: ಕಳೆದ ನಾಲ್ಕು ದಶಕಗಳಿಂದ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಸಾಹಿತ್ಯ, ಸಂಸ್ಕೃತಿ, ಕವಿತೆ, ಕಲೆ, ಬುಡಕಟ್ಟು ಸಮುದಾಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಹಿತ್ಯ ಸೃಷ್ಟಿ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ. ಭಾಷೆಗಾಗಿಯೇ ಸ್ಥಾಪನೆಯಾದ ವಿ.ವಿ. ಸಹ ಇಂತಹ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಗುಲಬರ್ಗಾ ವಿ.ವಿ. ಪ್ರಸಾರಾಂಗದ ಕಾರ್ಯ ಶ್ಲಾಘನೀಯ ಎಂದು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ಬೆಟ್ಟಕೋಟೆ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿ.ವಿ. ಪ್ರಸಾರಾಂಗ ವಿಭಾಗದಿಂದ ಶುಕ್ರವಾರ ವಿ.ವಿ. ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ಲೇಖಕರು, ಕಲಾವಿದರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ರಾಜದಲ್ಲಿ 34 ಸರ್ಕಾರಿ ಸೇರಿದಂತೆ ಒಟ್ಟು 50 ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಯಾವ ವಿ.ವಿ.ಯೂ ಪ್ರತಿ ವರ್ಷ ಲೇಖಕರಿಂದ ಕೃತಿಗಳನ್ನು ತರಿಸಿಕೊಂಡು ಸಮಿತಿಯ ಮೂಲಕ ಆಯ್ಕೆ ಮಾಡಿಸುವುದಿಲ್ಲ. ಗುಲಬರ್ಗಾ ವಿ.ವಿ. ಆ ಕೆಲಸವನ್ನು ತನ್ನ ಪವಿತ್ರ ಕಾರ್ಯವೆಂದೇ ಮಾಡುತ್ತಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಸಾರಾಂಗದ ನಿರ್ದೇಶಕ ಪ್ರೊ. ಎಚ್‌.ಟಿ. ಪೋತೆ, ‘ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಾ.ಮಾ. ನಾಯಕ ಅವರು ವಿಶ್ವವಿದ್ಯಾಲಯದಿಂದಲೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆರಂಭಿಸಿದರು. ಏಕೆಂದರೆ ಆಗ ಸರ್ಕಾರ ನೀಡುವ ರಾಜ್ಯೋತ್ಸವ ಹಾಗೂ ಇತರ ಪ್ರಶಸ್ತಿಗಳ ಆಯ್ಕೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಸಾಧಕರನ್ನು ಕಡೆಗಣಿಸಲಾಗುತ್ತಿತ್ತು. ಈ ಭಾಗದವರು ಬೆಂಗಳೂರು ತಲುಪುವಷ್ಟರಲ್ಲಿ ಪ್ರಶಸ್ತಿ ಬೇರೆಯವರ ಪಾಲಾಗಿರುತ್ತಿತ್ತು. ಅದನ್ನು ತಪ್ಪಿಸಲು ಮತ್ತು ಇಲ್ಲಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ನಾಯಕ ಅವರು ಆರಂಭಿಸಿದ ಈ ರೂಢಿಯನ್ನು ಇಲ್ಲಿಯವರೆಗೆ ಚಾಚೂತಪ್ಪದೇ ಪಾಲಿಸಿಕೊಂಡು ಬರಲಾಗಿದೆ. ಕುಲಪತಿ ಪ್ರೊ. ದಯಾನಂದ ಅಗಸರ, ಕುಲಸಚಿವ ಡಾ.ಬಿ. ಶರಣಪ್ಪ, ವಿತ್ತಾಧಿಕಾರಿ ಪ್ರೊ. ರಾಜನಾಳಕರ್ ಲಕ್ಷ್ಮಣ ಅವರ ಸಹಕಾರವೂ ಇದೆ’ ಎಂದು ಸ್ಮರಿಸಿದರು.

ಶೇ 90ರಷ್ಟು ಕಲ್ಯಾಣ ಕರ್ನಾಟಕದ ಪ್ರತಿಭೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೇಖಕರು, ಕವಿಗಳಾದ ಲಕ್ಷ್ಮಿ ಮುದೇನೂರ, ಬಸವರಾಜ ಐಗೋಳ, ಬಸವರಾಜ ದಯಾಸಾಗರ, ಡಾ. ವಿಜಯಕುಮಾರ ಸಿ. ಪರುತೆ, ಎಂ.ಬಿ. ಕಟ್ಟಿ, ಶ್ರೀಶೈಲ ನಾಗರಾಳ, ಮಂಗಲಾ ವಿ. ಕಪರೆ, ಲಕ್ಷ್ಮಿಕಾಂತ ಸಿ. ಪಂಚಾಳ, ವೇಷ್ಗಾರು ರಾಮಾಂಜನೇಯ, ಸಂಗಮನಾಥ ರೇವತಗಾಂವ, ಪ್ರೊ.ವಿ.ಟಿ. ಕಾಂಬಳೆ, ಶರಣಪ್ಪ ಸೈದಾಪೂರ, ರಾಜಶೇಖರ ಟಿ. ಬಸನಾಯಕ, ವಿಠ್ಠಲರಾವ್ ಗಾಯಕ್ವಾಡ್, ಪ್ರೊ. ಸುರೇಶ ಜಂಗೆ, ಸತೀಶಕುಮಾರ್ ಎಂ. ಡೊಂಗ್ರೆ, ಅಂಬುಜಾ ಎನ್. ಮಳಖೇಡಕರ್, ಜಗದೀಶ ಶರಣಪ್ಪ ಹೊನ್ಕಲ್, ಶರಣಮ್ಮ ಪಿ. ಸಜ್ಜನ, ಸಂಗಮೇಶ ಎಸ್. ಚಿಲ್ಲಶೆಟ್ಟಿ, ಸುರೇಶ ಸಿ. ಮ್ಯಾಳಗಿ, ಅಭಿಜಿತ ಎಸ್‌.ಕೆ, ವಿಜಯಕುಮಾರ್ ಎಸ್, ಮಹೇಶಕುಮಾರ್ ಡಿ. ತಳವಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಡಾ. ಜೈಶೇನಪ್ರಸಾದ ರೇವಣಪ್ಪ ಅವರಿಗೆ ಚಿನ್ನದ ಪದಕ, ಶರಣಬಸವ ಕೆ. ಗುಡದಿನ್ನಿ ಅವರಿಗೆ ಬೆಳ್ಳಿ ಪದಕ, ಆನಂದ ಎಸ್. ಗೊಬ್ಬಿ ಅವರಿಗೆ ಕಂಚಿನ ಪದಕವನ್ನು ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಸಿಂಡಿಕೇಟ್ ಸದಸ್ಯ ಪ್ರೊ.ಕೆ. ಲಿಂಗಪ್ಪ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಪ್ರೊ. ವಾಘಮೋರೆ ಶಿವಾಜಿ, ಕುಲಸಚಿವ ಡಾ. ಬಿ. ಶರಣಪ್ಪ, ವಿತ್ತಾಧಿಕಾರಿ ಪ್ರೊ. ರಾಜನಾಳಕರ್ ಲಕ್ಷ್ಮಣ ಭಾಗವಹಿಸಿದ್ದರು.

‘ವಿದ್ಯಾಮೃತ ಪ್ರಶಸ್ತಿ ಸ್ಥಾಪನೆ’

ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸಾಧಕರಿಗೆ ಬರುವ ವರ್ಷದಿಂದ ಗುಲಬರ್ಗಾ ವಿ.ವಿ. ವಿದ್ಯಾಮೃತ ಪ್ರಶಸ್ತಿ ಆರಂಭಿಸಲಿದೆ ಎಂದು ಕುಲಪತಿ ಪ್ರೊ. ದಯಾನಂದ ಅಗಸರ ಪ್ರಕಟಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪ್ರಸಾರಾಂಗ ಸಲಹಾ ಸಮಿತಿ ಹಾಗೂ ಸಿಂಡಿಕೇಟ್‌ನಲ್ಲಿ ಪ್ರಶಸ್ತಿ ಸ್ಥಾಪನೆ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದ್ದು, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ದಿಗ್ಗಜರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಯ್ಕೆ ಸಮಿತಿಯಲ್ಲಿ ಬಾಹ್ಯಾಕಾಶ ವಿಜ್ಞಾನಿ ಕೆ. ಕಸ್ತೂರಿ ರಂಗನ್, ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ. ವೆಂಕಟೇಶ, ಜೋಗನ್ ಶಂಕರ್ ಸದಸ್ಯರಾಗಿರಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT