ಮೈಸೂರು: ‘ಹಿಂದುಳಿದ, ಅಸಂಘಟಿತ ಸಮುದಾಯಗಳ ಹಿತಾಸಕ್ತಿಯನ್ನು ಕಾಂಗ್ರೆಸ್ ಕಡೆಗಣಿಸಿದೆ. ಸಿದ್ದರಾಮಯ್ಯ ನಿಜವಾಗಿ ಚೊಂಬು ಕೊಟ್ಟಿರುವುದು ಈ ಸಮುದಾಯಗಳಿಗೆ’ ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ಆರ್. ರಘು ಕೌಟಿಲ್ಯ ಟೀಕಿಸಿದರು.
‘ಬಿಜೆಪಿ ಸರ್ಕಾರವು ಹಿಂದುಳಿದ ವರ್ಗಗಳ ನಿಗಮಗಳಿಗೆ ಹಿಂದಿನ ಅವಧಿಯಲ್ಲಿ ₹500 ಕೋಟಿ ಅನುದಾನ ಕೊಟ್ಟಿತ್ತು. ಸಿದ್ದರಾಮಯ್ಯ ಸರ್ಕಾರ ಮೊದಲ ಬಜೆಟ್ನಲ್ಲಿ ಅದನ್ನು ₹170 ಕೋಟಿಗೆ ಇಳಿಸಿತ್ತು. ಈ ವರ್ಷ ಈ ನಿಗಮಗಳಿಗೆ ಸರ್ಕಾರ ಬಿಡಿಗಾಸು ಅನುದಾನ ಬಿಡುಗಡೆ ಮಾಡಿಲ್ಲ. ಈ ವರ್ಗದ ಜನರ ಹಣವನ್ನೂ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 75 ಸಾವಿರದಿಂದ 1 ಲಕ್ಷ ಹಿಂದುಳಿದ ವರ್ಗಗಳ ಮತದಾರರಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪರ ಮತ ಚಲಾಯಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಸಮಾವೇಶ: ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶವು ಏ.21ರಂದು ಬೆಳಿಗ್ಗೆ 11ಕ್ಕೆ ವಸ್ತು ಪ್ರದರ್ಶನ ಮೈದಾನದ ಆವರಣದಲ್ಲಿ ನಡೆಯಲಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ’ ಎಂದರು.
ಪಕ್ಷದ ಮುಖಂಡರಾದ ಬಾಬು ಪತ್ತಾರ, ಚನ್ನಕೇಶವ, ಚಲುವರಾಜ್, ರಂಗಾಚಾರ್, ರಶ್ಮಿ, ಜಗದೀಶ್ ಪಾಲ್ಗೊಂಡರು.