ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಗೋಕಾಕ್ ಚಳವಳಿ, ಇದು ಕುಪ್ಪಳ್ಳಿ ಕಹಳೆ: ಸಂಗೀತ ನಿರ್ದೇಶಕ ಹಂಸಲೇಖ ಅಭಿಮತ

ಕವಿಶೈಲದಿಂದ ತೀರ್ಥಹಳ್ಳಿಗೆ ಕಾಲ್ನಡಿಗೆ
Last Updated 15 ಜೂನ್ 2022, 7:13 IST
ಅಕ್ಷರ ಗಾತ್ರ

ಶಿವಮೊಗ್ಗ: ಕನ್ನಡದ ನಡ (ಸೊಂಟ) ಮುರಿಯುವ ನಡೆ ಕನ್ನಡ ನಾಡಿನಲ್ಲಿ ಶುರುವಾಗಿದೆ. ನಾವು ಭಾಷಾಂಧರೂ ಅಂದರೂ ಸರಿ ಈ ನಡೆಯ ವಿರುದ್ಧ ತಮಿಳರನ್ನು ಅನುಸರಿಸಿ ಹೋರಾಟ ಸಂಘಟಿಸಬೇಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಠ್ಯಕ್ರಮ ಪರಿಷ್ಕರಣೆ ಹಾಗೂ ರಾಷ್ಟ್ರಕವಿ ಕುವೆಂಪುಗೆ ಅಪಮಾನ ಖಂಡಿಸಿ ಬುಧವಾರ ಕುಪ್ಪಳ್ಳಿಯ ಕವಿಶೈಲದಿಂದ ತೀರ್ಥಹಳ್ಳಿಗೆ ಆರಂಭವಾದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಅವರ ಭಾಷೆಗೆ ಕೊಂಚ ಯಡವಟ್ಟಾದರೂ ಸರಿ ಆಳುವವರು, ವಿರೋಧದವರು ಎಲ್ಲ ಒಟ್ಟಾಗಿ ಸೇರಿಬಿಡುತ್ತಾರೆ. ಇಲ್ಲಿಯೂ ನಮಗೆ ಈಗ ಪಕ್ಷ ಇಲ್ಲ. ಕವಿ ಪಕ್ಷ, ಕನ್ನಡ ಪಕ್ಷದ ಹೋರಾಟದ ಹಾದಿ ಇಲ್ಲಿಂದಲೇ ಶುರುವಾಗಿದೆ ಎಂದರು.

ಬಸವ ಅಂದರೆ ಕನ್ನಡ. ಕುವೆಂಪು ಅಂದರೆ ಕನ್ನಡ. ಬಸವ ಅಂದರೆ ಕರುನಾಡು. ಕುವೆಂಪು ಅಂದರೆ ಕರ್ನಾಟಕ. ಈ ಎರಡಕ್ಕೂ ಅಪಮಾನ ಆದ ಮೇಲೆ ನಾವು ಇಲ್ಲಿದ್ದು ಏನು ಮಾಡುವುದು ಎಂದು ಪ್ರಶ್ನಿಸಿದ ಹಂಸಲೇಖ, ಅವತ್ತು ಗೋಕಾಕ್ ಚಳವಳಿ. ಇವತ್ತು ಕುಪ್ಪಳ್ಳಿ ಕಹಳೆ. ಇದು ನಾಡಿನಾದ್ಯಂತ ಮೊಳಗಲಿದೆ ಎಂದರು.

ನಮ್ಮ ನಾಡೇ ಒಂದು ಗೀತೆ. ನಮ್ಮ ನಾಡೆ ಒಂದು ಧ್ವಜ. ಅವೆರಡಕ್ಕೂ ಅಪಮಾನ ಆಗಿ ಕನ್ನಡಕ್ಕೆ ಕುತ್ತು ಬಂದ ಮೇಲೆ ಸುಮ್ಮನಿರುವುದು ಹೇಗೆ. ಕನ್ನಡಕ್ಕೆ ಮಹಾಮನೆ ಕಲ್ಯಾಣ. ಕವಿಶೈಲ ಗುರುಮನೆ. ಹೀಗಾಗಿ ಗುರುಮನೆಯಿಂದಲೇ ಹೋರಾಟದ ಕಹಳೆ ಊದುತ್ತಿದ್ದೇವೆ ಎಂದು ಹೇಳಿದರು.

ಕನ್ನಡ ಪ್ರಜ್ಞೆಗೆ ಅಪಮಾನ: ಸಿದ್ದರಾಮಯ್ಯ

ಪಠ್ಯಕ್ರಮ ಪರಿಷ್ಕರಣೆಗೆ ಈ ಸರ್ಕಾರ ಮಾಡಿದ ಅನಧಿಕೃತ ನೇಮಕಾತಿ. ನಂತರ ಆದೇಶ ಉಲ್ಲಂಘಿಸಿ ಮಾಡಿದ ಅಕ್ರಮ ಪಠ್ಯ ಪರಿಷ್ಕರಣೆಯನ್ನು ಈ ಸರ್ಕಾರ ಸಕ್ರಮಗೊಳಿಸಿದ ರೀತಿಯಿಂದ ಇಡೀ ಕನ್ನಡ ಪ್ರಜ್ಞೆಗೆ ಅಪಮಾನವಾಗಿದೆ ಎಂದು ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಾಡಿನ ಕನ್ನಡ ಪ್ರಜ್ಞೆ, ಬಹುತ್ವ ಭಾರತದ ಸಂಕೇತವಾದ ನಾಡಗೀತೆ. ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಈ ಅಮೂಲ್ಯ ನುಡಿಯನ್ನು ತಿರುಚಿರುವುದು ಬರೀ ರಾಷ್ಟ್ರಕವಿಗೆ ಮಾತ್ರವಲ್ಲ ಇಡೀ ಕನ್ನಡಕ್ಕೆ ಕನ್ನಡ ಬದುಕಿಗೆ ಮಾಡಿರುವ ಅಪಮಾನ. ಅಂತಹ ವ್ಯಕ್ತಿಯನ್ನು ಪಠ್ಯಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದು ಸರ್ಕಾರದ ಬೇಜವಾಬ್ದಾರಿ ನಡೆ ಎಂದು ಹೇಳಿದರು.

ನಮ್ಮ ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಶಿಕ್ಷಣವನ್ನು ಕೊಡುವುದು ಬಿಟ್ಟು ದೇಶ ಭಕ್ತಿಯ ಹೆಸರಿನಲ್ಲಿ ವಿಕಾರಗಳನ್ನು, ದ್ವೇಷವನ್ನು ಪ್ರಚೋದಿಸುವ ಪಠ್ಯಗಳನ್ನು ನಾವು ಬೋಧಿಸಬೇಕೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅದಕ್ಕೋಸ್ಕರ ನಾವೆಲ್ಲರೂ ಪಕ್ಷಾತೀತವಾಗಿ ಸಂಘಟಿತರಾಗಿ ಪಯಣ ಆರಂಭಿಸಿದ್ದೇವೆ ಎಂದರು.

ಕುವೆಂಪು ಕನ್ನಡ ಮಾತ್ರವಲ್ಲದೇ ಇಡೀ ಭಾರತದ ಪ್ರಜ್ಞೆಯ ಪ್ರತೀಕ. ಸರ್ಕಾರಕ್ಕೆ ನಿಜವಾಗಲೂ ಆತ್ಮಸಾಕ್ಷಿ ಇದ್ದರೆ ಈ ಪಠ್ಯವನ್ನು ಹಿಂಪಡೆದು ಹಿಂದಿನ ಪಠ್ಯ ಮುಂದುವರೆಸಲಿ. ಆ ಮೇಲೆ ಬೇಕಿದ್ದರೆ ನಿಜವಾದ ಶಿಕ್ಷಣ ತಜ್ಞರನ್ನು ನೇಮಕ ಮಾಡಿ ಪರಿಷ್ಕರಣೆಗೆ ಮುಂದಾಗಲಿ. ಅದಕ್ಕೆ ಸಹಮತ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.

ಕವಿಶೈಲದಿಂದ ತೀರ್ಥಹಳ್ಳಿವರೆಗಿನ ಪಾದಯಾತ್ರೆಯನ್ನು ಪಕ್ಷಾತೀತವಾಗಿ ಆರಂಭಿಸಿದ್ದೇವೆ ಹೊರತು ಕಾಂಗ್ರೆಸ್ ಪಕ್ಷದ ಬ್ಯಾನರ್‌ನಲ್ಲಿ ಅಲ್ಲ. ಇದರಲ್ಲಿ ಸಾಹಿತಿಗಳು, ಪತ್ರಕರ್ತರು, ರೈತ ಸಂಘ, ದಲಿತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳವರು ಪಾಲ್ಗೊಂಡಿದ್ದಾರೆ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ ಇದೇ ವೇಳೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT