ಸೊರಬ: ಸಚಿವ ಮಧು ಬಂಗಾರಪ್ಪ ಅವರು ತಮ್ಮ ಜನ್ಮದಿನದ ಅಂಗವಾಗಿ ಶನಿವಾರ ಬಂಗಾರ ಧಾಮಕ್ಕೆ ತೆರಳಿ ತಂದೆ ಎಸ್.ಬಂಗಾರಪ್ಪ ಹಾಗೂ ತಾಯಿ ಶುಕುಂತಲಾ ಬಂಗಾರಪ್ಪ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ಮಧು ಬಂಗಾರಪ್ಪ ಅವರ ಭಾವ, ನಟ ಶಿವರಾಜ್ ಕುಮಾರ್ ಹಾಗೂ ಅಕ್ಕ ಗೀತಾ ಶಿವರಾಜ್ ಕುಮಾರ್ ಮತ್ತು ಬೆಂಬಲಿಗರು ಜೊತೆಯಲ್ಲಿದ್ದರು.
ಮನರಂಜನೆ ಅಂಗವಾಗಿ ಶಹನಾಯಿ ಹಾಗೂ ಡೊಳ್ಳು ನೃತ್ಯ ಏರ್ಪಡಿಸಲಾಗಿತ್ತು. ಮಧು ಬಂಗಾರಪ್ಪ ಅವರು ಡೊಳ್ಳು ನೃತ್ಯದಲ್ಲಿ ಸ್ವತಃ ತಾಳ ಬಾರಿಸುವ ಮೂಲಕ ಹೆಜ್ಜೆ ಹಾಕಿದರು.
ಮಧು ಬಂಗಾರಪ್ಪ ಅವರು ತಮ್ಮ ತಂದೆ ಎಸ್.ಬಂಗಾರಪ್ಪ ಅವರ ಸಮಾಧಿ ಸ್ಥಳವನ್ನು ಅದ್ಭುತವಾಗಿ ನಿರ್ಮಿಸಿದ್ದಾರೆ. ಈ ಕ್ಷೇತ್ರ ಸಕಾರಾತ್ಮಕ ಶಕ್ತಿ ನೀಡುವಂತಿದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ಶಿವರಾಜ್ ಕುಮಾರ್ ಅವರು ‘ಮುತ್ತಣ್ಣ’ ಚಲನಚಿತ್ರದ ‘ನನ್ನ ತಂಗಿಯ ಮದುವೆ’ ಗೀಹಾಡಿ ಹಾಡುತ್ತಾ ಕುಣಿಯುತ್ತಿದ್ದಂತೆ ಅಭಿಮಾನಿಗಳು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಸಚಿವ ಮಧು ಬಂಗಾರಪ್ಪ ಅವರನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಸನ್ಮಾನಿಸಿ ಶುಭ ಕೋರಿದರು.
ಹಾಪ್ ಕಾಮ್ಸ್ ಜಿಲ್ಲಾ ಅಧ್ಯಕ್ಷ ಕೆ.ವಿ.ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಲಿಂಗಗೌಡ, ಫಯಾಜ್ ಅಹಮ್ಮದ್, ಎಚ್.ಗಣಪತಿ, ಉಮಾಪತಿ, ಭರತ್ ತಾಳಗುಪ್ಪ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್, ಸಂಜಯ್ ಉಪಸ್ಥಿತರಿದ್ದರು.