ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ವಿಪತ್ತು ನಿರ್ವಹಿಸಲು ಕಂಟ್ರೋಲ್ ರೂಂ ಆರಂಭಿಸಲು ಶಿವಮೊಗ್ಗ ಡಿಸಿ ಸೂಚನೆ

ತಾಲ್ಲೂಕುಮಟ್ಟದ ಅಧಿಕಾರಿಗಳ ಜತೆ ಕೋವಿಡ್ ನಿರ್ವಹಣೆ, ಮಾನ್ಸೂನ್ ಸಿದ್ಧತೆಗಳ ಕುರಿತು ವೀಡಿಯೊ ಸಂವಾದ
Last Updated 3 ಜೂನ್ 2021, 12:04 IST
ಅಕ್ಷರ ಗಾತ್ರ

ಶಿವಮೊಗ್ಗ: ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದ್ದು, ವಿಪತ್ತುಗಳನ್ನು ನಿರ್ವಹಿಸಲು ದಿನದ 24 ತಾಸು ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕುಮಟ್ಟದ ಅಧಿಕಾರಿಗಳ ಜತೆ ಕೋವಿಡ್ ನಿರ್ವಹಣೆ, ಮಾನ್ಸೂನ್ ಸಿದ್ಧತೆಗಳ ಕುರಿತು ನಡೆಸಿದ ವೀಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ಕೃಷಿ ಚಟುವಟಿಕೆ ಆರಂಭಿಸಲು ಪೂರಕವಾಗಿ ಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳ ದುರಸ್ತಿಯಂತಹ ಅಂಗಡಿಗಳಿಗೆ ಸೀಮಿತ ಅವಧಿಯ ಮಿತಿಗೆ ಒಳಪಟ್ಟು ತೆರೆಯಲು ಅವಕಾಶ ನೀಡಬಹುದು. ಅಗತ್ಯ ವಸ್ತುಗಳ ಸಗಟು ವ್ಯಾಪಾರಿಗಳು ಚಿಲ್ಲರೆ ವ್ಯಾಪಾರಿಗಳಿಗೆ ನೇರವಾಗಿ ಸಾಮಾಗ್ರಿ ಪೂರೈಕೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದರು.

ಮುಂಗಾರು ಅವಧಿಗೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನೆರೆ ಹಾವಳಿಯಿಂದ ಹಾನಿಯಾಗುವ ಗ್ರಾಮಗಳನ್ನು ಗುರುತಿಸಬೇಕು. ಭೂಕುಸಿತ ಸಂಭವಿಸಬಹುದಾದ ಸ್ಥಳಗಳು, ನೆರೆ ನೀರಿಗೆ ಮುಳುಗಬಹುದಾದ ಕಿರು ಸೇತುವೆಗಳು, ನೀರು ನಿಲ್ಲಬಹುದಾದ ತಗ್ಗು ಪ್ರದೇಶಗಳನ್ನು ಗುರುತಿಸಬೇಕು. ಜಲಾಶಯಗಳು, ಕೆರೆಕಟ್ಟೆಗಳ ನೀರಿನ ಮಟ್ಟದ ಮೇಲೆ ನಿಗಾ ಇರಿಸಬೇಕು. ನಗರ ಪ್ರದೇಶದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಗಿಡಗಂಟಿಗಳು, ಕಸಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡುವ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು ಎಂದರು.

ಕಂಟೈನ್‍ಮೆಂಟ್ ವಲಯಗಳಲ್ಲಿ ಬಿಗಿ ಕ್ರಮ:ಕೋವಿಡ್ ಪಾಸಿಟಿವಿಟಿ ಗಣನೀಯವಾಗಿ ಕಡಿಮೆಯಾಗುವ ತನಕ ಕಂಟೈನ್‍ಮೆಂಟ್ ವಲಯಗಳನ್ನು ಕಟ್ಟುನಿಟ್ಟಿನಿಂದ ನಿಭಾಯಿಸಬೇಕು. ಕನಿಷ್ಠ 14 ದಿನಗಳು ಕಂಟೈನ್‍ಮೆಂಟ್ ವಲಯವನ್ನು ನಿರ್ವಹಣೆ ಮಾಡಬೇಕು. ಅದಕ್ಕಿಂತ ಮೊದಲು ತೆರವುಗೊಳಿಸಬಾರದು. ಇಂತಹ ವಲಯಗಳಲ್ಲಿ ಕೊರೊನಾ ತಪಾಸಣೆ ವ್ಯವಸ್ಥಿತವಾಗಿ ನಡೆಸಬೇಕು. ಸಂಚಾರಿ ವಾಹನದ ವ್ಯವಸ್ಥೆ ಮಾಡಬೇಕು. ಪಾಸಿಟಿವ್ ವ್ಯಕ್ತಿಗಳನ್ನು ಮನೆ ಐಸೋಲೇಷನ್‍ಗೆ ಅವಕಾಶ ನೀಡದೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ನಲ್ಲೇ ಇರಿಸಬೇಕು. ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳಲ್ಲಿ ಮನೆ ಐಸೋಲೇಷನ್‍ಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಹಾಗೆ ಮಾಡಬಾರದು ಎಂದು ಸೂಚಿಸಿದರು.

ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೊರೊನಾದಿಂದ ಚೇತರಿಸಿಕೊಳ್ಳುವ ಮಕ್ಕಳ ಆರೋಗ್ಯದ ಮೇಲೆ ಆಶಾ ಕಾರ್ಯಕರ್ತರು 6 ವಾರಗಳ ನಿಗಾ ವಹಿಸಬೇಕು. ಪಾಸಿಟಿವ್ ಬಂದ ಪಾಲಕರ ಮಕ್ಕಳ ಮೇಲೂ ನಿಗಾ ಅಗತ್ಯ. ಯಾವುದೇ ಮಕ್ಕಳಿಗೆ 3 ದಿನಗಳಿಂದ ಜ್ವರ ನಿರಂತರವಾಗಿ ಬರುತ್ತಿದ್ದರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT