ತ್ಯಾಗರ್ತಿ: ‘ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳಿಲ್ಲದೇ ನೇರವಾಗಿ ಜನರಿಗೆ ತಲುಪುವಂತಹ ಯೋಜನೆಯಾಗಿದ್ದು ಬಂಗಾರಪ್ಪ ಅವರ ಮಗಳಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವೆ. ತಮ್ಮ ಆಶೀರ್ವಾದ ಬೇಡುವೆ’ ಎಂದು ಗೀತಾ ಶಿವರಾಜ್ಕುಮಾರ್ ಕೋರಿದರು.
ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತಂದು ಗ್ರಾಮೀಣ ಪ್ರದೇಶದ ರೈತರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರಂತೆ ನಾನೂ ನಿಮ್ಮ ಸೇವೆಗೆ ಸಿದ್ಧಳಾಗಿದ್ದು ಒಂದು ಅವಕಾಶವನ್ನು ಕಲ್ಪಿಸಿಕೊಡಿ’ ಎಂದು ಮತ ಯಾಚಿಸಿದರು.
ಸಾಗರ ಶಾಸಕರಾದ ಗೋಪಾಲಕೃಷ್ಣ ಮಾತನಾಡಿ, ‘ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೆ ತಂದು ಪ್ರತಿ ರೈತರ ಅಭಿವೃಧ್ಧಿಗೆ ಶ್ರಮಿಸಿದರು. ಆಶ್ರಯ, ಆರಾಧನಾ, ಅಕ್ಷಯ ಯೋಜನೆಯಡಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಿದ್ದರು. ಅದರಂತೆ ಇಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿಗಳನ್ನು ಈಡೇರಿಸಿದೆ’ ಎಂದು ಹೇಳಿದರು.
ಮುಖಂಡರಾದ ಚೇತನ್ರಾಜ್ ಕಣ್ಣೂರು, ಸೋಮಶೇಖರ್ ಲಾವಿಗೆರೆ, ಶಿವರಾಜ್ಕುಮಾರ್, ದುನಿಯಾ ವಿಜಯ್, ಕಲಸೆ ಚಂದ್ರಪ್ಪ, ಜ್ಯೋತಿ, ರೇಖಾ ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು.