ಬ್ರಹ್ಮಾವರ: ಸಾಲಿಗ್ರಾಮ ಪೇಟೆಯಲ್ಲಿ ಅಪೂರ್ಣಗೊಂಡ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ. ಇದರಿಂದ ವಾಹನ ಸವಾರರು, ಪಾದಾಚಾರಿಗಳಿಗೆ ನಡೆದಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡು ಹಲವಾರು ದಶಕಗಳು ಕಳೆದರೂ, ಸಾಲಿಗ್ರಾಮ ಮುಖ್ಯ ಪೇಟೆಯಲ್ಲಿ ಸರ್ವಿಸ್ ರಸ್ತೆ ಮಾತ್ರ ಇನ್ನೂ ಆಗಿಲ್ಲ. ಕಾಟಾಚಾರಕ್ಕೆ ಒಂದೆರಡು ದಿನ ಕೆಲಸ ಮಾಡಿ ಮತ್ತೆ ಪ್ರತಿಭಟನೆಯ ನಂತರ ಮತ್ತೆರಡು ದಿನ ಕೆಲಸ ಮಾಡಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿರುವ ನವಯುಗ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿನ ತನಕವೂ ಕೆಲಸವಾಗಿಲ್ಲ.
ಚರಂಡಿ ವ್ಯವಸ್ಥೆ ಇಲ್ಲದೇ, ನೀರು ಅಪೂರ್ಣಗೊಂಡ ಸರ್ವಿಸ್ ರಸ್ತೆಯಲ್ಲೇ ನಿಲ್ಲುತ್ತಿದೆ. ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು ನೀರಿನಲ್ಲೇ ಸಾಗಬೇಕಾಗಿದ್ದು, ಪಾದಚಾರಿಗಳು ಪ್ರತಿನಿತ್ಯ ಮಳೆಯ ನೀರಿನೊಂದಿಗೆ ರಸ್ತೆಯ ನೀರನ್ನು ಮೈಗೆ ಚಿಮುಕಿಸಿಕೊಂಡು ಸಾಗುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.