ಕಾರವಾರ: ತಾಲ್ಲೂಕಿನ ಕದ್ರಾ ಜಲಾಶಯವು ಬುಧವಾರ ಗರಿಷ್ಠ ಮಟ್ಟ ತಲುಪಿದ್ದು, ಈ ಮಳೆಗಾಲದಲ್ಲಿ ಮೊದಲ ಬಾರಿ ಕಾಳಿ ನದಿಗೆ ನೀರು ಹರಿಸಲಾಯಿತು.
ಜಲಾಶಯದ ಆರು ಕ್ರೆಸ್ಟ್ಗೇಟ್ಗಳನ್ನು ತೆರೆದು 40 ಸಾವಿರ ಕ್ಯುಸೆಕ್ ನೀರನ್ನು ಹೊರ ಹಾಕಲಾಯಿತು. 34.50 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಈ ವರ್ಷ 32.50 ಮೀಟರ್ ನೀರು ಸಂಗ್ರಹಿಸಲು ಜಿಲ್ಲಾಡಳಿತ ಮತ್ತು ಕರ್ನಾಟಕ ವಿದ್ಯುತ್ ನಿಗಮದ ಜಂಟಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಜಲಾಶಯವು ಭರ್ತಿಯಾಗುತ್ತಿದ್ದಂತೆ ಮಧ್ಯಾಹ್ನ 3.30ರ ಸುಮಾರಿಗೆ ನದಿಗೆ ನೀರು ಹರಿಸಲಾಯಿತು.
ಕಾಳಿ ನದಿ ಪಾತ್ರದಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯಕ್ಕೆ ಮತ್ತಷ್ಟು ಹೆಚ್ಚಿನ ಒಳಹರಿವು ಬರುತ್ತಿದೆ. ಅಲ್ಲದೇ ಕದ್ರಾ ಜಲಾಶಯದ ಮೇಲ್ಭಾಗದಲ್ಲಿರುವ ಸೂಪಾ, ಕೊಡಸಳ್ಳಿ, ತಟ್ಟಿಹಳ್ಳ ಹಾಗೂ ಬೊಮ್ಮನಹಳ್ಳಿ ಜಲಾಶಯಗಳಿಗೂ ಉತ್ತಮ ಒಳಹರಿವು ಇದೆ.
ಸೂಪಾ ಜಲಾಶಯವು ಭರ್ತಿಯಾಗಲು ಇನ್ನೂ 28.10 ಮೀಟರ್ (ಬುಧವಾರದ ಮಾಹಿತಿಯಂತೆ) ನೀರು ಸಂಗ್ರಹವಾಗಬೇಕಿದೆ. ಅದರ ಹಿನ್ನೀರು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಬುಧವಾರ 38,940 ಕ್ಯುಸೆಕ್ ಒಳಹರಿವು ದಾಖಲಾಯಿತು.