ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಳ ಅಂತರದಲ್ಲಿ ಜಾಫರ್ ಷರೀಫ್ ದಾಖಲೆ

ಮೊದಲ ಚುನಾವಣೆಯಲ್ಲೇ ಶೇ 79.97ರಷ್ಟು ಮತ ಗಳಿಸಿ ಗೆಲುವು ಸಾಧಿಸಿದ್ದ ಷರೀಫ್
Published 13 ಏಪ್ರಿಲ್ 2024, 5:04 IST
Last Updated 13 ಏಪ್ರಿಲ್ 2024, 5:04 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರವು ರೂಪುಗೊಳ್ಳುವುದಕ್ಕೆ ಮುಂಚೆ ಕನಕಪುರ ಕ್ಷೇತ್ರವಾಗಿತ್ತು. ಕ್ಷೇತ್ರವನ್ನು ಪ್ರತಿನಿಧಿಸಿದವರಲ್ಲಿ ದಾಖಲೆಯ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ನ ಸಿ.ಕೆ. ಜಾಫರ್ ಷರೀಪ್ ಹೆಸರು ಅಚ್ಚಳಿಯದೆ ಉಳಿದಿದೆ. ಅವರ ದಾಖಲೆಯನ್ನು ಇದುವರೆಗೆ ಯಾರೂ ಸರಿಟ್ಟಿಲ್ಲ.

ಅಂದಿನ ಕನಕಪುರ ಲೋಕಸಭಾ ಕ್ಷೇತ್ರಕ್ಕೆ 1971ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಷರೀಫ್ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ  (ಐಎನ್‌ಸಿ) ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನಿಂದಲೇ ಮೊದಲ ಸಲ ಸಂಸದರಾಗಿ ಆಯ್ಕೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯ ಎಂ.ವಿ. ರಾಜಶೇಖರನ್ ಅವರು, ಅಂದು ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ಪಕ್ಷ ತೊರೆದು ನ್ಯಾಷನಲ್ ಕಾಂಗ್ರೆಸ್ ಒರಿಜಿನಲ್‌ನಿಂದ (ಎನ್‌ಸಿಒ) ಸ್ಪರ್ಧಿಸಿದ್ದರು. ಅಬ್ದುಲ್ ರಷೀದ್ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿದ್ದರು.

ತೀವ್ರ ಹಣಾಹಣಿಯಿಂದ ಕೂಡಿದ್ದ ಚುನಾವಣೆಯಲ್ಲಿ ಷರೀಫ್ ಅವರು 2,43,987 ಮತಗಳನ್ನು ಪಡೆದು ಅಭೂತಪೂರ್ವ ಗೆಲುವು ಸಾಧಿಸಿದರು. ಸಮೀಪ ಸ್ಪರ್ಧಿ ರಾಜಶೇಖರನ್ 57,468 ಮತಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿ 3,631 ಮತಗಳನ್ನು ಗಳಿಸಿದ್ದರು. 4,84,298 ಮತದಾರರ ಪೈಕಿ, 3,13,659 ಮಂದಿ ಹಕ್ಕು ಚಲಾಯಿಸಿದ್ದರು. ಇದರಲ್ಲಿ 3,05,086 ಮತಗಳು ಮಾನ್ಯವಾಗಿದ್ದವು.

ಚಲಾವಣೆಯಾದ ಒಟ್ಟು ಮತಗಳಲ್ಲಿ ಷರೀಫ್ ಅವರು ಶೇ 79.97 ಮತ, ರಾಜಶೇಖರನ್ ಶೇ 18.84 ಹಾಗೂ ಅಬ್ದುಲ್ ಶೇ 1.19ರಷ್ಟು ಪ್ರಮಾಣದ ಮತಗಳನ್ನು ಪಡೆದಿದ್ದರು. ಷರೀಫ್ ಅವರು ಶೇ 61.14ರಷ್ಟು ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಕ್ಷೇತ್ರ ಇದುವರೆಗೆ ಸಾರ್ವತ್ರಿಕ ಮತ್ತು ಉಪ ಚುನಾವಣೆ ಸೇರಿ 16 ಚುನಾವಣೆಗಳನ್ನು ಕಂಡಿದೆ. ಆದರೆ, ಇದುವರೆಗೆ ಷರೀಫ್ ಅವರಷ್ಟು ಮತಗಳನ್ನು ಯಾರೂ ಪಡೆದಿಲ್ಲ.

ದೇಶದಲ್ಲೇ ದೊಡ್ಡ ಕ್ಷೇತ್ರ: ಕನಕಪುರವು ದೇಶದ ಅತಿ ದೊಡ್ಡ ಲೋಕಸಭಾ ಕ್ಷೇತ್ರವಾಗಿತ್ತು. ಕನಕಪುರ, ಸಾತನೂರು, ರಾಮನಗರ, ಚನ್ನಪಟ್ಟಣ,  ಮಾಗಡಿ, ಬೆಂಗಳೂರಿನ ಉತ್ತರಹಳ್ಳಿ, ಆನೇಕಲ್ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ಸೇರಿ 8 ವಿಧಾನಸಭಾ ಕ್ಷೇತ್ರಗಳು ಕನಕಪುರದ ವ್ಯಾಪ್ತಿಗೆ ಬರುತ್ತಿದ್ದವು.

2008ರಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯಾದಾಗ ಕನಕಪುರವು ಬೆಂಗಳೂರು ಗ್ರಾಮಾಂತರವಾಗಿ ಬದಲಾಯಿತು. ಕ್ಷೇತ್ರ ಇದೀಗ ರಾಮನಗರ ಜಿಲ್ಲೆಯ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ಜಿಲ್ಲೆಯ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಹಿಂದಿನ ಸಾತನೂರು ಕ್ಷೇತ್ರವನ್ನು  ಕನಕಪುರ, ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ವಿಲೀನಗೊಳಿಸಲಾಯಿತು.

ಎಂ.ವಿ. ರಾಜಶೇಖರನ್‌
ಎಂ.ವಿ. ರಾಜಶೇಖರನ್‌

‘ಷರೀಫ್ ನಿಷ್ಠೆಗೆ ಒಲಿದಿದ್ದ ಟಿಕೆಟ್’ ‘70ರ ದಶಕದಲ್ಲಿ ಕಾಂಗ್ರೆಸ್ ಇಬ್ಬಾಗವಾಯಿತು. ಆಗ ಹುಟ್ಟಿಕೊಂಡ ಸಂಸ್ಥಾ ಕಾಂಗ್ರೆಸ್‌ (ಎನ್‌ಸಿಒ) ನೇತೃತ್ವವನ್ನು ನಿಜಲಿಂಗಪ್ಪ ಅವರು ವಹಿಸಿದ್ದರು. ಷರೀಫ್ ಅವರು ನಿಜಲಿಂಗಪ್ಪ ಅವರೊಂದಿಗೆ ಹೋಗದೆ ಇಂದಿರಾ ಅವರಿಗೆ ತಮ್ಮ ನಿಷ್ಠೆ ತೋರಿಸಿ ಮೆಚ್ಚುಗೆಗೆ ಪಾತ್ರರಾದರು. ಆಗ ಇಂದಿರಾ ಅವರು ನಿಜಲಿಂಗಪ್ಪ ಅವರ ಅಳಿಯ ರಾಜಶೇಖರನ್ ವಿರುದ್ಧ ಕನಕಪುರದಲ್ಲಿ ಷರೀಫ್ ಅವರಿಗೆ ಟಿಕೆಟ್ ಕೊಟ್ಟು ನಿಲ್ಲಿಸಿದ್ದರು. ಮೊದಲ ಚುನಾವಣೆಯಲ್ಲೇ ಷರೀಫ್ ಅವರು ದಾಖಲೆಯ ಮತಗಳನ್ನು ಪಡೆದು ಸಂಸತ್ ಪ್ರವೇಶಿಸಿದ್ದರು. ಮುಂದೆ ಪ್ರಭಾವಿ ಮುಸ್ಲಿಂ ನಾಯಕರಾಗಿ ಬೆಳೆದ ಅವರು ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಹಲವು ಯೋಜನೆಗಳನ್ನು ತಂದರು’ ಎಂದು ಕಾಂಗ್ರೆಸ್ ಮುಖಂಡ ಕೆ. ಶೇಷಾದ್ರಿ ಶಶಿ ಅವರು ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT