ಬೆಳಗಾವಿ: ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸೇವೆಯನ್ನು ಬೆಳಗಾವಿ ವರೆಗೆ ವಿಸ್ತರಿಸಲಾಗಿದ್ದು, ಮಂಗಳವಾರ ಪ್ರಾಯೋಗಿಕ ಸಂಚಾರ ಆರಂಭಿಸಿತು.
ಇಲ್ಲಿನ ನಿಲ್ದಾಣಕ್ಕೆ ಮಧ್ಯಾಹ್ನ 1.30ಕ್ಕೆ ಆಗಮಿಸಿದ ರೈಲು, 2 ಗಂಟೆಗೆ ಹೊರಟಿತು. ಈ ರೈಲು ಬೆಳಗಾವಿ ನಿಲ್ದಾಣ ಪ್ರವೇಶಿಸುತ್ತಿದ್ದಂತೆ, ಅಲ್ಲಿ ನೆರೆದಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಜನರು ತಮ್ಮ ಮೊಬೈಲ್ಗಳಲ್ಲಿ ರೈಲಿನೊಂದಿಗೆ ಸೆಲ್ಫಿ ಮತ್ತು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು. ಬೋಗಿಗಳನ್ನು ಏರಿ, ಹವಾನಿಯಂತ್ರಿತ ರೈಲಿನಲ್ಲಿ ಕುಳಿತು ಖುಷಿಪಟ್ಟರು. ಬೆಳಗಾವಿ–ಬೆಂಗಳೂರು ಮಾರ್ಗದಲ್ಲಿ ರೈಲು ನಿಲುಗಡೆಯಾಗುವ ಸ್ಥಳ ಮತ್ತು ದರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವುದು ಕಂಡುಬಂತು.
ರೈಲು ನಿಲ್ದಾಣದ ವ್ಯವಸ್ಥಾಪಕ ಅನಿಲಕುಮಾರ್, ‘ಈ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಿದೆ. ನಿಯಮಿತವಾಗಿ ಸೇವೆ ಆರಂಭಿಸುವ ದಿನಾಂಕ ಘೋಷಣೆಯಾಗಬೇಕಿದೆ. ಹಾಗಾಗಿ ರೈಲಿನ ಸ್ವಾಗತಕ್ಕಾಗಿ ಇಂದು ಯಾವುದೇ ಕಾರ್ಯಕ್ರಮ ಆಯೋಜಿಸಿಲ್ಲ’ ಎಂದರು.
ರೈಲ್ವೆ ಜೋನಲ್ ಯೂಸರ್ಸ್ ಕನ್ಸಲ್ಟೇಟಿವ್ ಕಮಿಟಿ ಸದಸ್ಯ ಪ್ರಸಾದ ಕುಲಕರ್ಣಿ ಇತರರಿದ್ದರು.
ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಮಂಗಳವಾರ ಆಗಮಿಸಿದ ‘ವಂದೇ ಭಾರತ್’ ರೈಲಿನಲ್ಲಿ ಜನರು ಕುಳಿತು ಸಂಭ್ರಮಿಸಿದರು