ಲಖನೌ: ರಾಜ್ಯಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಲು ಉತ್ತರ ಪ್ರದೇಶ ಸರ್ಕಾರವು ಅನುಮತಿ ನೀಡಿಲ್ಲ. ಅವರು ಸೀತಾಪುರ ಅಥವಾ ಲಖಿಂಪುರಕ್ಕೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಇಲ್ಲಿನ ಪೊಲೀಸ್ ಕಮಿಷನರ್ ಹೇಳಿದ್ದಾರೆ.
'ಲಖಿಂಪುರ ಭೇಟಿಗಾಗಿ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶ ಸರ್ಕಾರವು ಇನ್ನೂ ಅನುಮತಿ ನೀಡಿಲ್ಲ ಹಾಗೂ ಅವರಿಗೆ ಇಲ್ಲಿಗೆ ಬರದಂತೆ ತಿಳಿಸಲಾಗಿದೆ' ಎಂದು ಲಖನೌ ಪೊಲೀಸ್ ಕಮಿಷನರ್ ಡಿ.ಕೆ.ಠಾಕೂರ್ ತಿಳಿಸಿದ್ದಾರೆ.
ದೇಶದಲ್ಲಿ ಈಗ ಸರ್ವಾಧಿಕಾರಿ ಆಡಳಿತವಿದೆ. ನಿನ್ನೆಯಿಂದಲೂ ನಮಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡದಂತೆ ತಿಳಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
'ಜಿಲ್ಲಾಧಿಕಾರಿ ಅವರಿಂದ ಲಿಖಿತ ಪತ್ರ ಬಂದಿದ್ದು, ಸ್ಥಳದಲ್ಲಿ ನಿಷೇಧಾಜ್ಞೆ ಇದೆ ಹಾಗೂ ಅವರ ಭೇಟಿಯಿಂದಾಗಿ ಸಮಸ್ಯೆ ಸೃಷ್ಟಿಯಾಗಬಹುದು. ಹೀಗಾಗಿ ಅವರ ಭೇಟಿಗೆ ಅವಕಾಶ ಕೊಡುವುದಿಲ್ಲ' ಎಂದಿದ್ದಾರೆ.
ಭಾನುವಾರ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರ ಮೇಲೆ ಎಸ್ಯುವಿ ಹರಿಸಿ ನಾಲ್ವರ ಹತ್ಯೆ ಮತ್ತು ನಂತರದ ಹಿಂಸಾಚಾರದಲ್ಲಿ ನಾಲ್ಕು ಮಂದಿ ಸಾವಿಗೀಡಾದ ಘಟನೆ ನಡೆದಿದೆ. ಹಿಂಸಾಚಾರ ಮರುಕಳಿಸುವ ಸಾಧ್ಯತೆಯ ಮೇರೆಗೆ ಲಖಿಂಪುರ–ಖೇರಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಸೋಮವಾರ ಸೀತಾಪುರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.