ಬೆಂಗಳೂರು: ‘ವಕೀಲರ ಹಿತರಕ್ಷಣೆಗಾಗಿ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿಯೇ ಮಸೂದೆ ಮಂಡಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಕೀಲ ವಾಹಿನಿ ಬಳಗದ ‘ವಕೀಲ ವಾಹಿನಿ’ ದ್ವಿಭಾಷಾ ಮಾಸ ಪತ್ರಿಕೆಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಬೆಂಗಳೂರು ವಕೀಲರ ಸಂಘದ ಆಶಯದಂತೆ ಈ ಕಾಯ್ದೆ ತರಲಾಗುವುದು’ ಎಂದು ಭರವಸೆ ನೀಡಿದರು.
‘ಅಲ್ಲದೆ, ಬೆಂಗಳೂರು ವಕೀಲರ ಸಂಘ ಹೈಕೋರ್ಟ್ನಲ್ಲಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಮೇಲೆ ಮುಖ್ಯ ನ್ಯಾಯಮೂರ್ತಿ ನೀಡಿರುವ ನಿರ್ದೇಶನದಂತೆ ವಕೀಲರಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಶೀಘ್ರದಲ್ಲಿ ಆರೋಗ್ಯ ವಿಮೆ ಜಾರಿಗೊಳಿಸಲಾಗುವುದು’ ಎಂದರು.
‘ರಾಜ್ಯ ಸರ್ಕಾರ ರೂಪಿಸುವ ಕಾಯ್ದೆಗಳಲ್ಲಿರುವ ಸಣ್ಣಪುಟ್ಟ ಲೋಪಗಳಿಗೆ ತಿದ್ದುಪಡಿ ತರುವ ಅಗತ್ಯವಿದೆ. ಅದಕ್ಕೆ ನಿಮ್ಮಲ್ಲರ ಸಹಾಯ ಬೇಕಾಗಿದೆ’ ಎಂದು ಹಿರಿಯ ವಕೀಲರಿಗೆ ಬೊಮ್ಮಾಯಿ ಹೇಳಿದರು.
‘ವಕೀಲರು ಜನರ ಧ್ವನಿಯಾಗಿ ಕೆಲಸ ಮಾಡುವವರು. ನೀವು ಹೊರತರುವ ‘ವಕೀಲ ವಾಹಿನಿ’ ಮಾಸ ಪತ್ರಿಕೆ ಯಶಸ್ಸು ಕಾಣಲಿದೆ’ ಎಂದೂ ಮುಖ್ಯಮಂತ್ರಿ ಆಶಿಸಿದರು.