ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಲೋಕಾಯುಕ್ತ ವರದಿಗೆ ದಶಕ: ಕ್ರಮ ಇನ್ನೂ ಬಾಕಿ...

‘ಗಣಿಗಾರಿಕೆಯ ಸುತ್ತ’
Last Updated 24 ಜುಲೈ 2021, 20:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಅವರು, ಸರ್ಕಾರಕ್ಕೆ ವರದಿ ಸಲ್ಲಿಸಿ ದಶಕ ಕಳೆಯಲು ಎರಡೇ ದಿನ ಬಾಕಿ ಉಳಿದಿದೆ. ಆದರೆ, ಈವರೆಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ಆಗಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬಳ್ಳಾರಿ ಜಿಲ್ಲೆಯ ಗಣಿ ಮಾಲೀಕರಿಂದ ₹ 150 ಕೋಟಿ ಲಂಚ ಪಡೆದಿದ್ದಾರೆ ಎಂದು ಆಗ ವಿಧಾನ ಪರಿಷತ್‌ ಸದಸ್ಯರಾಗಿದ್ದ ಗಣಿ ಉದ್ಯಮಿ ಜಿ. ಜನಾರ್ದನ ರೆಡ್ಡಿ 2006ರಲ್ಲಿ ಆರೋಪಿಸಿದ್ದರು. ಈ ಘಟನೆಯ ಬಳಿಕ, 2000– 2006ರವರೆಗೆ ಬಳ್ಳಾರಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಹಾಗೂ ₹ 150 ಕೋಟಿ ಲಂಚದ ಆರೋಪ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಯು.ಎಲ್‌. ಭಟ್‌ ಆಯೋಗವನ್ನು ರಾಜ್ಯ ಸರ್ಕಾರ ನೇಮಿಸಿತ್ತು.ಆದರೆ, ವರ್ಷ ಕಳೆಯುವುದರೊಳಗೆ ಆಯೋಗವನ್ನು ರದ್ದು ಮಾಡಲಾಯಿತು.

2000–2006ರ ನಡುವಿನ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುವ ಜವಾಬ್ದಾರಿಯನ್ನು ಲೋಕಾಯುಕ್ತಕ್ಕೆ ವಹಿಸಿ 2007ರಲ್ಲಿ ಆದೇಶ ಹೊರಡಿಸಲಾಗಿತ್ತು. 2008ರಲ್ಲಿ ಲೋಕಾಯುಕ್ತರು ತಮ್ಮ ಮೊದಲ (ಮಧ್ಯಂತರ) ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಮತ್ತಷ್ಟು ಹೆಚ್ಚಿದೆ ಎಂಬ ಆರೋಪಗಳು ಕೇಳಿಬಂದವು. ಆಗ ಸಚಿವರಾಗಿದ್ದ ಜಿ. ಜನಾರ್ದನ ರೆಡ್ಡಿ, ವಿಧಾನಸಭೆಯಲ್ಲೇ ಕಾಂಗ್ರೆಸ್‌ ಸದಸ್ಯರ ವಿರುದ್ಧ ತೋಳೇರಿಸಿದ್ದು ವಿವಾದದ ಕಿಡಿ ಹೊತ್ತಿಸಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಈ ಬೆಳವಣಿಗೆಗಳಿಂದ ಒತ್ತಡಕ್ಕೆ ಸಿಲುಕಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖೆಯ ಅವಧಿಯನ್ನು 2010ರ ಜುಲೈವರೆಗೂ ವಿಸ್ತರಿಸಿ ಆದೇಶ ಹೊರಡಿಸಿದ್ದರು.

ಹತ್ತಾರು ಸಾವಿರ ಪುಟಗಳ ದಾಖಲೆಗಳೊಂದಿಗೆ, ಸಂತೋಷ್‌ ಹೆಗ್ಡೆ 2011ರ ಜುಲೈ 27ರಂದು ತಮ್ಮ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ವರದಿಯ ಪರಿಣಾಮವಾಗಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಗಾದಿ ಕಳೆದುಕೊಳ್ಳಬೇಕಾಯಿತು. ಲೋಕಾಯುಕ್ತ ವರದಿಯ ಶಿಫಾರಸುಗಳ ಜಾರಿಗೆ ಒತ್ತಾಯಿಸಿ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್‌. ಹಿರೇಮಠ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದರು.

ಸುಪ್ರೀಂಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆದು, ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ವಿಚಾರಣೆಗೆ ಆದೇಶ ಹೊರಬಿತ್ತು. ನಂತರ ಸಿಬಿಐ ತನಿಖೆ ನಡೆದು ಜನಾರ್ದನ ರೆಡ್ಡಿ ಸೇರಿದಂತೆ ಹಲವರು ಜೈಲು ಸೇರಬೇಕಾಯಿತು.

ಅಧಿಕಾರಿಗಳ ವಿರುದ್ಧ ಕ್ರಮ ಬಾಕಿ

ಗಣಿ ಉದ್ಯಮಿಗಳಿಂದ ಲಂಚ ಪಡೆದ ಆರೋಪ 700 ಮಂದಿ ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಇತ್ತು. ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್‌ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ 570 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು.

ಕೆಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಇಲಾಖಾ ವಿಚಾರಣೆ ಆರಂಭವಾಗುತ್ತಿದ್ದಂತೆ, ಆರೋಪಿತರು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಕೆಎಟಿ ಇಲಾಖಾ ವಿಚಾರಣೆಗೆ ತಡೆ ನೀಡಿತ್ತು. ಕಳೆದ ವಾರ ತಡೆಯನ್ನು ತೆರವುಗೊಳಿಸಿರುವ ಹೈಕೋರ್ಟ್‌, ತ್ವರಿತವಾಗಿ ಇಲಾಖಾ ವಿಚಾರಣೆ ಪೂರ್ಣಗೊಳಿಸುವಂತೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಿದೆ.

ಅದಿರು ರಫ್ತು ವಹಿವಾಟು ನಡೆಸುತ್ತಿದ್ದ ಸಂಸ್ಥೆಗಳಿಂದ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳ ಕುರಿತು ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಬೇಕೆಂಬ ಶಿಫಾರಸಿನ ಬಗ್ಗೆಯೂ ಪೂರ್ಣವಾಗಿ ಕ್ರಮ ಆಗಿಲ್ಲ.

ಬಾಗಲಕೋಟೆ

l ಡಿ.ಎಸ್.ಹೂಲಗೇರಿ, ರಾಯಚೂರು ಜಿಲ್ಲೆ ಲಿಂಗಸಗೂರು ಶಾಸಕ. ಅವರ ಕುಟುಂಬದ ಹೆಸರಲ್ಲಿ ಇಳಕಲ್ ತಾಲ್ಲೂಕಿನ ಬಲಕುಂದಿ, ಹಿರೇ ಕೊಡಗಲಿ ಬಳಿ ಗ್ರಾನೈಟ್ (ಕೆಂಪು ಕಲ್ಲು)ಗಣಿಗಾರಿಕೆ.

l ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರ ಕುಟುಂಬದ ಹೆಸರಲ್ಲಿ ರಾಯಚೂರು ಜಿಲ್ಲೆ ಮುದಗಲ್ ಬಳಿ ಗ್ರಾನೈಟ್ ಗಣಿಗಾರಿಕೆ.

l ಇಳಕಲ್ ಬಳಿ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಹೋದರ ದೇವಾನಂದ ಕಾಶಪ್ಪನವರ ಗ್ರಾನೈಟ್ ಗಣಿಗಾರಿಕೆ.

l ಮುಧೋಳ ತಾಲ್ಲೂಕಿನ ಲೋಕಾಪುರ ಬಳಿ ಮಾಜಿ ಶಾಸಕ ಬಿಜೆಪಿಯ ಪಿ.ಎಚ್.ಪೂಜಾರ ಸುಣ್ಣದಕಲ್ಲು ಗಣಿಗಾರಿಕೆ.

l ಲೋಕಾಪುರ ಬಳಿ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಶಿವಾನಂದ ಉದಪುಡಿ ಕುಟುಂಬ ಸುಣ್ಣದಕಲ್ಲು ಗಣಿಗಾರಿಕೆ.

l ಲೋಕಾಪುರ ಬಳಿ ಕಾಂಗ್ರೆಸ್ ಮುಖಂಡರಾದ ಕಮಲೇಶ ಸಾರವಾಡ, ಸುರೇಶ ಹಿರೇಮಠ, ಗುರುರಾಜ ಉದಪುಡಿ, ಬಿಜೆಪಿ ಮುಖಂಡರಾದ ಎಂ.ಎಂ.ವಿರಕ್ತಮಠ, ಕಲ್ಲಪ್ಪ ಸಬರದ, ಸಿ.ಎ.ಪಾಟೀಲ ಕುಟುಂಬದವರ ಸುಣ್ಣದಕಲ್ಲು ಗಣಿಗಾರಿಕೆ.

ರಾಯಚೂರು

l ಗ್ರಾನೈಟ್ ಗಣಿ: ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ (ಆನಂದ ಪಾಟೀಲ ಅವರಿಂದ ಲೀಸ್)

l ಲಿಂಗಸುಗೂರು ಶಾಸಕ ಡಿ.ಎಸ್‌.ಹೂಲಗೇರಿ (ಸಪ್ತಗಿರಿ ಗ್ರಾನೈಟ್‌, ಮುದಗಲ್‌)

l ಇಳಕಲ್ ಶಾಸಕ ದೊಡ್ಡನಗೌಡ ಪಾಟೀಲ (ಅಮರ ಗ್ರಾನೈಟ್ ಲೀಸ್‌ ಪಡೆದಿದ್ದಾರೆ)

ಕೊಪ್ಪಳ

l ಕ್ರಷರ್ ಘಟಕ: ಮಾಜಿ ಸಚಿವ ಬಸವರಾಜ ರಾಯರಡ್ಡಿ, ಸಹೋದರ ಶಿವಣ್ಣ ರಾಯರಡ್ಡಿ

l ಗ್ರಾನೈಟ್: ಶಾಸಕ ಹಾಲಪ್ಪ ಆಚಾರ್, ಅಳಿಯ ಬಸವರಾಜ ಗೌರಾ (ಕುಕನೂರ)

l ಕಲ್ಲು, ಕಡಿ, ಗ್ರಾನೈಟ್: ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಹೋದರ ರಾಜಶೇಖರ ಹಿಟ್ನಾಳ (ಕೆರೆಹಳ್ಳಿ)

ಕಲಬುರ್ಗಿ

l ಶಹಾಬಾದ್ ಫರಸಿ ಕಲ್ಲು: ವಿಧಾನಪರಿಷತ್ ಸದಸ್ಯ ಸುನೀಲ ವಲ್ಯಾಪುರ (ಹಲಕಟ್ಟಾ); ವಿನಯ ವಲ್ಯಾಪುರ, ಸುನೀಲ ವಲ್ಯಾಪುರ
ಪುತ್ರ (ಕದ್ದರಗಿ)

l ಕ್ವಾರಿ: ಜಿ.ಪಂ. ಮಾಜಿ ಸದಸ್ಯ ರವಿರಾಜು ಕೊರವಿ (ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅಳಿಯ)

ಗಣಿಗಾರಿಕೆಯ ಸುತ್ತ

l ಶಿವಮೊಗ್ಗ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಕ್ವಾರಿಗಳು ಇವೆ. ಇವುಗಳಲ್ಲಿ ಅರ್ಧದಷ್ಟು ಮಾತ್ರ ಪರವಾನಗಿ ಪಡೆದಿವೆ.

l 55 ಕ್ವಾರಿಗಳ ಸಮೀಕ್ಷೆಯಲ್ಲಿ ಹಲವು ನಿಯಮ ಮೀರಿ ಕಾರ್ಯ ನಿರ್ವಹಣೆ

l ದಂಡ ವಿಧಿಸಿದರೂ ಜನಪ್ರತಿನಿಧಿಗಳ ಮೂಲಕ ಒತ್ತಡ ತಂದು ವಿನಾಯಿತಿ

l ಶಿವಮೊಗ್ಗ ಜಿಲ್ಲೆಯಲ್ಲಿ ದಂಡದ ಬಾಕಿ ಮೊತ್ತ ₹ 200 ಕೋಟಿ

l ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆ ಸಕ್ರಿಯ

l ಅನಿಲ್‌ ಅಗರವಾಲ್‌ ಮಾಲೀಕತ್ವದ ವೇದಾಂತ ಸೇಸಾ ಗೋವಾ ಲಿಮಿಟೆಡ್‌, ಆರ್‌.ಪ್ರವೀಣ್‌ ಚಂದ್ರ ಮೈನ್ಸ್‌ ಹಾಗೂ ಜೆಎಸ್‌ಡಬ್ಲ್ಯುಕಂಪನಿಗಳು ಜಿಲ್ಲೆಯಲ್ಲಿ ಗಣಿ ಗುತ್ತಿಗೆ ಪಡೆದಿವೆ.

ವಿಸ್ತೃತ ವರದಿಗಾಗಿ ಈ ಲಿಂಕ್‌ ನೋಡಿ

***

‘ಲಾಭವೇಲೂಟಿಗೆಪ್ರೇರಣೆ’

2009–10ರ ಅವಧಿಯಲ್ಲಿ ಒಂದು ಟನ್‌ ಕಬ್ಬಿಣದ ಅದಿರಿಗೆ ₹ 6,000ದಿಂದ ₹ 7,000 ಬೆಲೆ ಇತ್ತು. ಆದರೆ, ಸರ್ಕಾರಕ್ಕೆ ಬರುತ್ತಿದ್ದ ರಾಜಧನ ಪ್ರತಿ ಟನ್‌ಗೆ ₹ 27 ಮಾತ್ರ! ಅಕ್ರಮ ಗಣಿಗಾರಿಕೆಯಿಂದ ಅದಿರು ತೆಗೆದರೆ ಅದೂ ಸಿಗುತ್ತಿರಲಿಲ್ಲ. ಕಲ್ಲು ಮತ್ತು ಮರಳು ಗಣಿಗಾರಿಕೆಯಲ್ಲೂ ಇದೇ ಸ್ಥಿತಿ ಇದೆ. ಅತಿಯಾದಲಾಭವೇಪ್ರಕೃತಿಯನ್ನು ಶೋಷಿಸಿ ಅಕ್ರಮ ಗಣಿಗಾರಿಕೆ ನಡೆಸುವಂತೆ ಪ್ರೇರೇಪಿಸುತ್ತಿದೆ.

ಅಕ್ರಮ ಗಣಿಗಾರಿಕೆ ತಡೆಯಲು ಕಾನೂನು ಮತ್ತು ವ್ಯವಸ್ಥೆಗಳಿವೆ. ಆದರೆ, ಗಣಿಗಾರಿಕೆ ನಿಯಂತ್ರಿಸಬೇಕಾದವರು ಮತ್ತು ಅದರಿಂದ ಲಾಭ ಪಡೆಯುತ್ತಿರುವರು ಕೈ ಜೋಡಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಬರಬೇಕಾದ ಸಾವಿರಾರು ಕೋಟಿ ತೆರಿಗೆ ವಂಚನೆ ಆಗುತ್ತಿದೆ. ರಾಜಕಾರಣಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿರುವುದರಿಂದ ಯಾರೂ ತುಟಿ ಬಿಚ್ಚುತ್ತಿಲ್ಲ. ಕಲ್ಲು ಮತ್ತು ಮರಳಿನ ಅಕ್ರಮ ಗಣಿಗಾರಿಕೆ ನಿಯಂತ್ರಿಸಲು ಕಬ್ಬಿಣದ ಅದಿರು ಗಣಿಗಾರಿಕೆಯಲ್ಲಿ ಜಾರಿಯಾದಂತಹ ಹೊಸ ವ್ಯವಸ್ಥೆ ಬರಬೇಕಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಜನರೇ ಧ್ವನಿ ಎತ್ತುವ ವಾತಾವರಣ ಸೃಷ್ಟಿಯಾಗಬೇಕು. ಆಗ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯ.

– ಎನ್‌. ಸಂತೋಷ್‌ ಹೆಗ್ಡೆ,ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹಾಗೂ ರಾಜ್ಯದ ನಿವೃತ್ತ ಲೋಕಾಯುಕ್ತ

***

‘ರಕ್ಷಣೆಯೇ ಸಮಸ್ಯೆಯಾದರೆ...’

ಕೆಆರ್‌ಎಸ್ ಸಂರಕ್ಷಣೆ ಸರ್ಕಾರಕ್ಕೆ ಏಕೆ ಸಮಸ್ಯೆಯಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಅಣೆಕಟ್ಟೆಯಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು ಎಂಬ ನಿಯಮ ಇದೆ. ಆದರೆ, ಅದನ್ನೇ ಬದಲಿಸಲು ಸರ್ಕಾರ ಚಿಂತಿಸುತ್ತಿರುವುದು ದುರಂತ. 1978ರಲ್ಲಿ ಸಂಡೂರಿನಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಪಾರ್ವತಿ ಕುಮಾರೇಶ್ವರ ದೇಗುಲಕ್ಕೆ ಧಕ್ಕೆ ಆಗದಂತೆ 5 ಕಿ.ಮೀ. ದೂರದಲ್ಲಿ ಗಣಿಗಾರಿಕೆ ನಡೆಸಲು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಸೂಚಿಸಿದ್ದರು. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 1 ಕಿ.ಮೀ.ಗೆ ಇಳಿಸಿದ್ದು ದುರದೃಷ್ಟ.

– ಎಸ್.ಆರ್.ಹಿರೇಮಠ,ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ

***

‘ಬೆಳೆ ಬೆಳೆಯುವುದು ಬಿಟ್ಟಿದ್ದೇವೆ’

ಲೋಕಾಪುರ ಸುತ್ತಲೂ ಗಣಿಯಿಂದ ಲೈಮ್‌ಸ್ಟೋನ್ (ಸುಣ್ಣದಕಲ್ಲು) ತೆಗೆಯಲು ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಉಪಯೋಗಿಸುತ್ತಾರೆ. ಸ್ಫೋಟದ ರಭಸಕ್ಕೆ ಕಲ್ಲುಗಳು ಸಿಡಿಯುತ್ತವೆ, ನಮ್ಮ ಜೀವಕ್ಕೂ ಅಪಾಯವಿದೆ. ಭೂಮಿ ಉಳುಮೆ ಮಾಡುವುದನ್ನೇ ನಿಲ್ಲಿಸಿದ್ದೇವೆ. ಬಹಳಷ್ಟು ನಷ್ಟ ಅನುಭವಿಸುತ್ತಿದ್ದೇವೆ. ದೂಳಿನಿಂದ ಉಸಿರಾಟಕ್ಕೂ ತೊಂದರೆ ಆಗಿದೆ.

–ತಿಪ್ಪಣ್ಣ ರುದ್ರಪ್ಪ ಮುದ್ದಾಪುರ, ವೆಂಕಟಾಪುರ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT