ಇಂದೊರ್:‘ನಮ್ಮ ವೇಗದ ಬೌಲರ್ಗಳು ಆಟದ ಅತ್ಯುನ್ನತ ಮಟ್ಟದಲ್ಲಿದ್ದಾರೆ. ಅವರು ಎಂತಹದೇ ಪಿಚ್ನಲ್ಲಿ ಬೌಲಿಂಗ್ ಮಾಡಿದರೂ, ಅದು ಉತ್ತಮ ಪಿಚ್ ಎನ್ನುವಂತ ಗೋಚರಿಸುತ್ತದೆ. ಸದ್ಯ ಜಸ್ಪ್ರೀತ್ ಬೂಮ್ರಾ ತಂಡದಲ್ಲಿಲ್ಲ. ಆದರೂ ಇದು ಯಾವುದೇ ನಾಯಕನಿಗೆ ಕನಸಿನ ಸಂಯೋಜನೆಯೇ ಸರಿ’ ಎಂದುಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಶ್ಲಾಘಿಸಿದ್ದಾರೆ.
ಬಾಂಗ್ಲಾದೇಶ ಎದುರಿನ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 130 ರನ್ ಅಂತರದ ಗೆಲುವು ಸಾಧಿಸಿದೆ. ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆದ ಪಂದ್ಯದ ಎರಡೂ ಇನಿಂಗ್ಸ್ನಲ್ಲಿ ಪ್ರವಾಸಿ ಪಡೆಯನ್ನು ಭಾರತ ಆಲೌಟ್ ಮಾಡಿತ್ತು. ಒಟ್ಟು 20 ವಿಕೆಟ್ ಪೈಕಿ 14 ವಿಕೆಟ್ಗಳನ್ನು ವೇಗಿಗಳೇ ಕಬಳಿಸಿರುವುದು ವಿಶೇಷ.
ಮೊಹಮದ್ ಶಮಿ ಒಟ್ಟು 7 ವಿಕೆಟ್,ಉಮೇಶ್ ಯಾದವ್ 4 ವಿಕೆಟ್ ಹಾಗೂ ಇಶಾಂತ್ ಶರ್ಮಾ 3 ವಿಕೆಟ್ ಪಡೆದಿದ್ದರು.
ಪಂದ್ಯದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೊಹ್ಲಿ,‘ಬಲಿಷ್ಠ ವೇಗದ ವಿಭಾಗವನ್ನು ಹೊಂದುವುದು ಯಾವುದೇ ತಂಡಕ್ಕೆ ಪ್ರಮುಖ ಸಂಗತಿ. ಅಂಕಿ ಸಂಖ್ಯೆಗಳು ಮತ್ತು ದಾಖಲೆಗಳು ಎದುರಲ್ಲಿವೆ. ಯಾರು ಬೇಕಾದರೂ ಅವನ್ನು ನೋಡಬಹುದಾಗಿದೆಯಾದರೂ ನಾವು ಅದನ್ನು ಗಮನಿಸುವುದಿಲ್ಲ’ ಎಂದು ಹೇಳಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ ಮಯಂಕ್ ಅಗರವಾಲ್ 243 ರನ್ ಸಿಡಿಸಿದ್ದರು. ದ್ವಿಶತಕ ಸಿಡಿಸಿದ ಬಳಿಕ ಮಯಂಕ್ರತ್ತ ಪೆವಿಲಿಯನ್ನತ್ತ ಎರಡು ಬೆರಳು(ದ್ವಿಶಕತ ಎಂಬರ್ಥದಲ್ಲಿ) ತೋರಿಸಿದರು. ಈ ವೇಳೆ ಅಲ್ಲಿದ್ದ ವಿರಾಟ್, ತಮ್ಮ ಮೂರು ಬೆರಳುಗಳನ್ನು ತೋರಿಸಿ‘ತ್ರಿಶತಕ ಪೂರೈಸು’ ಎಂಬರ್ಥದಲ್ಲಿ ಸಂಭಾಷಣೆ ನಡೆಸಿದ್ದರು. ಅದು ಸುದ್ದಿಯಾಗಿತ್ತು.
ಇದನ್ನೂ ಓದಿ:ಇಂದೋರ್ ಟೆಸ್ಟ್: ಮಯಂಕ್ ಅಗರವಾಲ್ ‘ಡಬಲ್’ ಕಮಾಲ್
ಆ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, ‘ಅದರರ್ಥ ಬಹಳ ಸರಳ. ಯುವ ಆಟಗಾರರು ಟೆಸ್ಟ್ ಕ್ರಿಕೆಟ್ನಲ್ಲಿ ಆಡಲಿಳಿದಾಗ, ಶತಕದಂತಹ ದೊಡ್ಡ ಮೊತ್ತ ಪೇರಿಸಲು ನನಗೆ ಎಷ್ಟು ಸಮಯ ಬೇಕಾಯಿತು ಎಂಬುದು ಗೊತ್ತು. ಹೆಚ್ಚು ರನ್ ಗಳಿಸುವುದರ ಮಹತ್ವ ನನಗೆ ತಿಳಿದಿದೆ. ಹಾಗಾಗಿ ಹಿರಿಯ ಆಟಗಾರನಾಗಿ ಅವರನ್ನು(ಯುವಕರನ್ನು) ಮುಂದುವರಿಯಲು ಬಿಡುವುದು ಅಗತ್ಯವಾದುದು’ ಎಂದರು,
ಸದ್ಯ ಭಾರತ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದ್ದು, ಎರಡನೇ ಹಾಗೂ ಅಂತಿಮ ಪಂದ್ಯ ಕೊಲ್ಕತ್ತದ ಈಡನ್ ಗಾರ್ಡನ್ಸ್ನಲ್ಲಿ ನವೆಂಬರ್ 22ರಂದು ನಡೆಯಲಿದೆ. ಇದು ಭಾರತದಲ್ಲಿ ನಡೆಯಲಿರುವ ಮೊದಲ ಹಗಲು–ರಾತ್ರಿ ಪಂದ್ಯವಾಗಿರುವುದರಿಂದ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.