ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಪ್ರಭಾವಿ ದಾಳಿ ಸಂಘಟಿಸಿರುವ ಮೊಹಮ್ಮದ್ ಸಿರಾಜ್ ಪ್ರದರ್ಶನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷವಾಗಿ ಕೊಂಡಾಡಿದ್ದಾರೆ.
205 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಕೋಲ್ಕತ್ತ ಗೆಲುವಿಗೆ ಅಂತಿಮ ಮೂರು ಓವರ್ಗಳಲ್ಲಿ 59 ರನ್ಗಳ ಅಗತ್ಯವಿತ್ತು. ಆಗಲೇ ಯಜುವೇಂದ್ರ ಚಾಹಲ್ ಓವರ್ವೊಂದರಲ್ಲಿ 20 ರನ್ ಚಚ್ಚಿದ ಆ್ಯಂಡ್ರೆ ರಸೆಲ್, ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದರು.
ಈ ನಡುವೆ 19ನೇ ಓವರ್ ಎಸೆದ ಮೊಹಮ್ಮದ್ ಸಿರಾಜ್, ರಸೆಲ್ ಅಬ್ಬರಕ್ಕೆ ಕಡಿವಾಣ ಹಾಕಿದರು. ಅಲ್ಲದೆ ಕೇವಲ ಒಂದು ರನ್ ಮಾತ್ರ ಬಿಟ್ಟುಕೊಟ್ಟರು. ಪದೇ ಪದೇ ಸಿಂಗಲ್ ನಿರಾಕರಿಸಿದರೂ ರಸೆಲ್ ಯೋಜನೆ ಫಲಿಸಲಿಲ್ಲ. ಅಂತಿಮ ಎಸೆತದಲ್ಲಿ ಒಂಟಿ ರನ್ ಮಾತ್ರ ಗಳಿಸಿದ್ದರು.
ಇದನ್ನೂ ಓದಿ:IPL 2021: ಸುಲಭ ರನೌಟ್ ಅವಕಾಶ ಕೈಚೆಲ್ಲಿದ ಆ್ಯಂಡ್ರೆ ರಸೆಲ್
ಈ ಕುರಿತು ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಪ್ರವಾಸದ ಬಳಿಕ ಮೊಹಮ್ಮದ್ ಸಿರಾಜ್ ಸಂಪೂರ್ಣ ವಿಭಿನ್ನ ಬೌಲರ್ ಆಗಿ ಮಾರ್ಪಟ್ಟಿದ್ದಾರೆ. ರಸೆಲ್ ವಿರುದ್ಧ ಸಿರಾಜ್ ಓವರ್ ಅತ್ಯುತ್ತಮವಾಗಿತ್ತು. ಎದುರಾಳಿಗಳಿಗೆ ಗೆಲುವಿನ ಅವಕಾಶವನ್ನು ತಡೆಹಿಡಿದರು ಎಂದು ಶ್ಲಾಘಿಸಿದ್ದಾರೆ.
ಹರ್ಷಲ್ ಪಟೇಲ್ ಹಾಗೂ ಕೈಲ್ ಜೇಮಿಸನ್ ಸಹ ಅತ್ಯುತ್ತಮ ದಾಳಿ ಸಂಘಟಿಸಿದರು ಎಂದು ವಿರಾಟ್ ಹೇಳಿದರು.
ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ಭಾರತದ ಐತಿಹಾಸಿಕ ಸರಣಿ ಗೆಲುವಿನಲ್ಲಿ ಮೊಹಮ್ಮದ್ ಸಿರಾಜ್ ನಿರ್ಣಾಯಕ ಪಾತ್ರ ವಹಿಸಿದ್ದರು. ಅಲ್ಲದೆ ಆಸೀಸ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆಯನ್ನು ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.