ನವದೆಹಲಿ: ವಿಶ್ವದ ಅತಿದೊಡ್ಡ ಟ್ವೆಂಟಿ-20 ಕ್ರಿಕೆಟ್ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ(ಐಪಿಎಲ್) ಭಾರತದ ಕೀಪರ್ ಕೀಪರ್ ಬ್ಯಾಟ್ಸ್ಮನ್ಗಳು ನಾಯಕರಾಗಿ ಹೊರಹೊಮ್ಮಲು ಮಹೇಂದ್ರ ಸಿಂಗ್ ಧೋನಿ ಸ್ಫೂರ್ತಿಯಾಗಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ 2021ನೇ ಸಾಲಿನಲ್ಲಿ ಎಂಟುಫ್ರಾಂಚೈಸಿಗಳ ಪೈಕಿ ನಾಲ್ಕು ತಂಡಗಳಿಗೆ ವಿಕೆಟ್ ಕೀಪಿಂಗ್ ಬ್ಯಾಟ್ಸ್ಮನ್ಗಳು ನಾಯಕತ್ವ ಜವಾಬ್ದಾರಿಯನ್ನು ವಹಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ, ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೆಎಲ್ ರಾಹುಲ್ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮತ್ತು ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸುತ್ತಿದ್ದಾರೆ.
'ಕ್ಯಾಪ್ಟನ್ ಆಗಲು ಸಾಮರ್ಥ್ಯವುಳ್ಳ ವಿಕೆಟ್ ಕೀಪರ್ಗಳನ್ನು ಬೆಳೆಸುವುದರಲ್ಲಿ ಧೋನಿ ಅವರ ಆರನೇ ಇಂದ್ರಿಯ ಜೊತೆಗೆ ಏನಾದರೂ ಸಂಬಂಧವಿದೆ ಎಂಬುದರಲ್ಲಿ ನಮಗೆ ಖಾತ್ರಿಯಿದೆ. ಅವರು ನಿಸ್ಸಂಶಯವಾಗಿಯೂ ಅದ್ಭುತ ನಾಯಕ. ಅವರ ಹೆಜ್ಜೆಗಳನ್ನು ಅನುಸರಿಸಲು ಸಾಕಷ್ಟು ಆಟಗಾರರು ಬಯಸುತ್ತಾರೆ' ಎಂದು ಬಟ್ಲರ್ ವಿವರಿಸಿದ್ದಾರೆ.
ವಿಕೆಟ್ ಹಿಂದುಗಡೆಯಿಂದ ಪಂದ್ಯವನ್ನು 360 ಡಿಗ್ರಿಯಲ್ಲಿ ಗ್ರಹಿಸುವ ಲಾಭವನ್ನು ಪಡೆಯುತ್ತಾರೆ ಎಂದು ಸ್ವತಃ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಆಗಿರುವ ಬಟ್ಲರ್ ತಿಳಿಸಿದ್ದಾರೆ.
ವಿಕೆಟ್ ಕೀಪರ್ಗಳು ಅದ್ಭುತ ವೀಕ್ಷಣೆಯನ್ನು ಹೊಂದಿರುತ್ತಾರೆ. ವಿಕೆಟ್ ಹೇಗೆ ವರ್ತಿಸುತ್ತಿದೆ, ಬೌಲರ್ಗಳು ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದರಿಂದ ಹಿಡಿದು ನಿರ್ಣಯ ಕೈಗೊಳ್ಳುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದಿದ್ದಾರೆ.
ನೂತನ ನಾಯಕ ಸಂಜು ಸ್ಯಾಮ್ಸನ್ ಅಡಿಯಲ್ಲಿ ರಾಜಸ್ಥಾನ ರಾಯಲ್ಸ್ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಬಟ್ಲರ್ ವ್ಯಕ್ತಪಡಿಸಿದರು. ಅಲ್ಲದೆ ಸಹ ಆಟಗಾರ ಬೆನ್ ಸ್ಟೋಕ್ಸ್, ರಾಜಸ್ಥಾನ ಪಾಲಿಗೆ 'ಎಕ್ಸ್-ಫಾಕ್ಟರ್' ಆಗಲಿದ್ದಾರೆ ಎಂದಿದ್ದಾರೆ.
ಈ ಬಾರಿ ನಾವು ಅನೇಕ ವೈವಿಧ್ಯತೆಯನ್ನು ಹೊಂದಿದ್ದೇವೆ. ಬೆನ್ ಸ್ಟೋಕ್ಸ್ ಹಾಗೂ ಕ್ರಿಸ್ ಮೊರಿಸ್ ಅವರಂತಹ ವಿಶ್ವದರ್ಜೆಯ ಆಲ್ರೌಂಡರ್ ಮತ್ತು ಹೊಸ ನಾಯಕರನ್ನು ಹೊಂದಿದ್ದೇವೆ. ಸಂಜು ಅತ್ಯುತ್ತಮ ಆಟಗಾರನಾಗಿದ್ದು, ದೀರ್ಘ ಸಮಯದಿಂದ ಫ್ರಾಂಚೈಸಿ ಜೊತೆಗಿದ್ದಾರೆ. ಸಂಜು ತುಂಬಾ ಶಾಂತಚಿತ್ತ ಆಟಗಾರನಾಗಿದ್ದು, ತಮಾಷೆಯನ್ನು ಇಷ್ಟಪಡುತ್ತಾರೆ. ಅವರ ನಾಯಕತ್ವದಲ್ಲಿ ಸಾಕಷ್ಟು ಅಭಿಲಾಷೆಯಿದ್ದು, ತಂಡಕ್ಕಾಗಿ ಉತ್ತಮ ನಿರ್ವಹಣೆ ನೀಡುವ ಭರವಸೆಯಿದೆ ಎಂದಿದ್ದಾರೆ.
ಶ್ರೀಲಂಕಾದ ಮಾಜಿ ದಿಗ್ಗಜ ಕುಮಾರ ಸಂಗಕ್ಕರ ತಂಡದ ನಿರ್ದೇಶಕರಾಗಿರುವುದು ಆರ್ಆರ್ ತಂಡಕ್ಕೆ ನೆರವಾಗಲಿದೆ ಎಂದವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.