ತೆಲಸಂಗ: ಸಮೀಪದ ಬನ್ನೂರ ಗ್ರಾಮದ ಗಜಾನಂದ ಶಿವಣ್ಣ ಪೂಜಾರಿ ಎಂಬ ರೈತ ಭಾರಿ ಮಳೆ ಹಾಗೂ ವ್ಯತಿರಿಕ್ತ ಹವಾಮಾನದಿಂದ ಹಾಳಾದ ಎರಡುಎಕರೆಯಲ್ಲಿನ ದ್ರಾಕ್ಷಿಗಿಡಗಳನ್ನು ಕಡಿದು ಹಾಕಿದ್ದಾರೆ.
‘ಐದು ವರ್ಷಗಳಿಂದ ಒಂದಿಲ್ಲೊಂದು ತೊಂದೆರೆಗೆ ಒಳಗಾಗಿ ಬೆಳೆ ಕೈಹಿಡಿಯಲಿಲ್ಲ. ಲಕ್ಷಾಂತರ ರೂಪಾಯಿ ಹಾಕಿಯೂ ಫಲ ದೊರೆಯದಿದ್ದರಿಂದ ಇದು ಅನಿವಾರ್ಯ’ ಎಂದು ತಿಳಿಸಿದರು.
‘ಒಂದು ವರ್ಷ ಮಳೆ ಬರಲಿಲ್ಲ. ಇನ್ನೊಂದು ವರ್ಷ ಬೆಳೆ ಬಂದಾಗ ಅಕಾಲಿಕ ಮಳೆ ಸುರಿದು ಎಲ್ಲವೂ ಹಾಳಾಯಿತು. ಕಳೆದ ವರ್ಷ ಮಳೆ– ಗಾಳಿಗೆ ದ್ರಾಕ್ಷಿ ಮಣ್ಣು ಪಾಲಾಯಿತು. ಅಳಿದುಳಿದ ದ್ರಾಕ್ಷಿ ಕೋವಿಡ್ ಲಾಕ್ಡೌನ್ನಿಂದಾಗಿ ಮಾರಾಟವಾಗಲಿಲ್ಲ. ಪ್ರಸಕ್ತ ವರ್ಷದ ಆರಂಭದಲ್ಲಿಯೇ ಹವಾಮಾನ ವೈಪರೀತ್ಯದಿಂದಾಗಿ ಎಲೆಗಳು ಉದುರಿದವು, ಹಣ್ಣಾಗಲಿಲ್ಲ. ಇದ್ದೂ ಇಲ್ಲದಂತಿರುವ ಬೆಳೆಗೆ ಕೊಡಲಿ ಹಾಕಬೇಕಾಗಿದೆ’ ಎಂದು ದುಃಖ ತೋಡಿಕೊಂಡರು.
‘ಇದು ನನ್ನೊಬ್ಬನ ಕಥೆಯಲ್ಲ. ಈ ಬಾಗದ ದ್ರಾಕ್ಷಿ ಬೆಳೆಯುವ ಪ್ರತಿಯೊಬ್ಬ ರೈತನ ಸ್ಥಿತಿಯಾಗಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.