ಬೆಂಗಳೂರು: ’ಬಿಬಿಎಂಪಿಯಲ್ಲಿ ಪ್ರತಿ ವಾರ್ಡ್ ಅಭಿವೃದ್ಧಿಗೆ ತಲಾ ₹60 ಲಕ್ಷ ಮೀಸಲಿಡಲಾಗಿದೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ನಡೆಯುವ ವಾರ್ಡ್ ಸಮಿತಿ ಸಭೆಯಲ್ಲಿ ಚರ್ಚಿಸಿ, ಈ ಅನುದಾನದ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ 198 ವಾರ್ಡ್ಗಳ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಶುಕ್ರವಾರ ನೋಡಲ್ ಅಧಿಕಾರಿಗಳೊಂದಿಗೆ ಆನ್ಲೈನ್ನಲ್ಲಿ ಸಭೆ ನಡೆಸಿದ ಅವರು, ‘₹60 ಲಕ್ಷದ ಪೈಕಿ, ಆಯಾ ವಾರ್ಡ್ನಲ್ಲಿ ಪಾದಚಾರಿ ಮಾರ್ಗ ದುರಸ್ತಿಗೆ ₹20 ಲಕ್ಷ, ರಸ್ತೆ ಗುಂಡಿ ದುರಸ್ತಿಗೆ ₹20 ಲಕ್ಷ ಹಾಗೂ ಕೊಳವೆ ಬಾವಿಗಾಗಿ ₹20 ಲಕ್ಷ ಮೀಸಲಿಡಲಾಗಿದೆ. ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು ಅನುದಾನವನ್ನು ಈ ಕಾರ್ಯಗಳಿಗೆ ವಿನಿಯೋಗಿಸಬೇಕು’ ಎಂದರು.
‘ವಾರ್ಡ್ ಸಮಿತಿ ಸಭೆಯಲ್ಲಿಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರ ಪೊಲೀಸ್ ಅಧಿಕಾರಿಗಳು, ವಾರ್ಡ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಸ್ಥಳೀಯರು ಪಾಲ್ಗೊಳ್ಳಬೇಕು. ಸಭೆಯಲ್ಲಿ ಪ್ರಸ್ತಾಪವಾದ ದೂರುಗಳು ಅಥವಾ ಸಮಸ್ಯೆಗಳನ್ನು ಪಟ್ಟಿ ಮಾಡಿ ಇತ್ಯರ್ಥಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ನಾಗರಿಕರ ಸಹಭಾಗಿತ್ವ:‘ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ‘ನಗರದ ಶುಚಿತ್ವಕ್ಕಾಗಿ ನಾಗರಿಕರ ಸಹಭಾಗಿತ್ವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ವಲಯ, ವಿಭಾಗ, ವಾರ್ಡ್ ಮಟ್ಟದಲ್ಲಿ ಸಂಯೋಜಕರು, ಬ್ಲಾಕ್ ಮಟ್ಟದಲ್ಲಿ ಶುಚಿಮಿತ್ರ ಹಾಗೂ ಲೇನ್ ಮಟ್ಟದಲ್ಲಿ ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗುತ್ತಿದೆ’ ಎಂದು ಗೌರವ್ ಗುಪ್ತ ಹೇಳಿದರು.
ಸಭೆಯಲ್ಲಿ ವಿಶೇಷ ಆಯುಕ್ತರು, ವಲಯ ಜಂಟಿ ಆಯುಕ್ತರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಜನಾಗ್ರಹ ತಂಡ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.