ಮಾಧ್ಯಮಕ್ಕೆ ಮಂತ್ರಿ ಮಾಡುವ ಶಕ್ತಿಯಿದೆ:
‘2009ರಲ್ಲಿ ರಾಜ್ಯದಿಂದ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಆರು ಸಂಸದರಲ್ಲಿ ಎಸ್.ಎಂ. ಕೃಷ್ಣ, ವೀರಪ್ಪ ಮೊಯಿಲಿ ಸಚಿವರಾದರು. ನನಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆಗಲೇ ಇಬ್ಬರು ಸಚಿವರಾಗಿದ್ದರಿಂದ ನನಗೆ ಸಚಿವ ಸ್ಥಾನ ಸಿಗುವುದಿಲ್ಲವೆಂದು ಗೆಳೆಯರ ಜೊತೆ ಬೌದ್ಧ ಗಯಾದತ್ತ ಹೊರಟಿದ್ದೆ. ಬೇಸರದಿಂದ ಖರ್ಗೆ ಹೋಗಿದ್ದಾರೆ ಎಂಬ ರೀತಿಯಲ್ಲಿ ಪತ್ರಿಕೆಗಳಲ್ಲಿ ಸುದ್ದಿಗಳು ಬಂದವು. ತಕ್ಷಣ ಗುಲಾಂನಬಿ ಆಜಾದ್ ಕರೆ ಮಾಡಿ, ‘ದೆಹಲಿಯಲ್ಲಿ ಇರುವುದು ಬಿಟ್ಟು ಅಲ್ಲಿಗೆ ಏಕೆ ಹೋಗಿದ್ದೀರಿ ಬನ್ನಿ’ ಎಂದು ಕರೆದರು. ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅನ್ಯಾಯ ಮಾಡಿದರು’ ಎಂಬ ರೀತಿಯಲ್ಲಿಯೂ ನನ್ನ ಬಗ್ಗೆ ಸುದ್ದಿಗಳನ್ನು ಬರೆಯಲಾಗಿತ್ತು. ಆ ಮೇಲೆ ನನಗೆ ಸಚಿವ ಸ್ಥಾನ ಸಿಕ್ಕಿತ್ತು. ಹೀಗಾಗಿ, ಮಾಧ್ಯಮಗಳಿಗೆ ಮಂತ್ರಿ ಮಾಡುವ ಶಕ್ತಿಯಿದೆ’ ಎಂದು ನೆನಪಿಸಿಕೊಂಡರು.