ಮೈಸೂರು: ಕ್ರಿಸ್ಮಸ್ ರಜೆ ಮತ್ತು ವರ್ಷಾಂತ್ಯದ ಹಿನ್ನೆಲೆಯಲ್ಲಿ ಮೈಸೂರು ಭಾಗದ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಜನರ ದಂಡು ಕಂಡುಬರುತ್ತಿದ್ದು, ಪ್ರವಾಸೋದ್ಯಮ ಗರಿಗೆದರಿದೆ.
ಹೋಟೆಲ್, ಲಾಡ್ಜ್ ಹಾಗೂ ರೆಸಾರ್ಟ್ಗಳಲ್ಲಿನ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದು, ಸದ್ಯ ಕೊಠಡಿಗಳು ಲಭ್ಯವಿಲ್ಲ. ಹೊರ ಜಿಲ್ಲೆ, ರಾಜ್ಯಗಳಿಂದ ಕಾಯ್ದಿರಿಸದೇ ಬರುವವರು ವಾಸ್ತವ್ಯಕ್ಕೆ ಪರದಾಡುವಂತಾಗಿದೆ.
ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ದಸರಾ ವಸ್ತುಪ್ರದರ್ಶನ, ಕಾರಂಜಿ ಕೆರೆ, ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ತಾಣಗಳ ಸುತ್ತಮುತ್ತ ಸಂಜೆಯ ವೇಳೆ ಟ್ರಾಫಿಕ್ ಜಾಮ್ ಕಂಡುಬರುತ್ತಿದೆ. ವಿವಿಧ ಶಾಲೆಗಳಿಂದ ಬಸ್ಗಳು ಮೊದಲಾದ ವಾಹನಗಳಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆತರುತ್ತಿರುವುದು ಕಾಣಸಿಗುತ್ತಿದೆ. ಕೇರಳ, ತಮಿಳುನಾಡು ಮೊದಲಾದ ರಾಜ್ಯಗಳ ಪ್ರವಾಸಿಗರು ಕೂಡ ಬರುತ್ತಿದ್ದಾರೆ. ಕೋವಿಡ್ ಭೀತಿಯ ಕರಿನೆರಳು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ.
ಪ್ರವಾಸಿಗರ ಅನುಕೂಲಕ್ಕಾಗಿ ಮೃಗಾಲಯ ಹಾಗೂ ಕಾರಂಜಿಕೆರೆಯನ್ನು ವಾರದ ರಜಾ ದಿನವಾದ ಮಂಗಳವಾರವೂ ಮುಕ್ತವಾಗಿಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಗರ ಹಾಗೂ ಸುತ್ತಮುತ್ತಲಿನ ಹೋಟೆಲ್ಗಳ ಕೊಠಡಿಗಳು ಹೊಸ ವರ್ಷಾಚರಣೆವರೆಗೂ ಭರ್ತಿಯಾಗಿವೆ. ಹೊರ ರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆಸಿ.ನಾರಾಯಣಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ
ಮಂಡ್ಯ ಜಿಲ್ಲೆಯ ಕೆಆರ್ಎಸ್ ಬೃಂದಾವನ, ರಂಗನತಿಟ್ಟು, ಶ್ರೀರಂಗಪಟ್ಟಣ ಮೊದಲಾದ ಕಡೆಗಳಲ್ಲಿ ಶನಿವಾರದಿಂದಲೇ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ರಂಗನತಿಟ್ಟು ಪಕ್ಷಿಧಾಮವನ್ನು ಬೆಳಿಗ್ಗೆ 6ರಿಂದಲೇ ವೀಕ್ಷಣೆಗೆ ಮುಕ್ತವಾಗಿರಿಸಲಾಗಿದೆ. ಪಕ್ಷಿಧಾಮಕ್ಕೆ ಭಾನುವಾರ ವಿದೇಶಿ ಪ್ರವಾಸಿಗರು ಸೇರಿ 4,885 ಮಂದಿ ಭೇಟಿ ನೀಡಿದ್ದು, ಒಂದೇ ದಿನ ₹5.99ಲಕ್ಷ ಆದಾಯ ಬಂದಿದೆ. ಇದು ಇದುವರೆಗಿನ ದಾಖಲೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ನದ್ದೇ ಸಮಸ್ಯೆ ಆಗಿದೆ. ಶ್ರೀರಂಗಪಟ್ಟಣದಲ್ಲಿ ವಸತಿಗೃಹಗಳು ಬಹುತೇಕ ಭರ್ತಿಯಾಗಿವೆ. ರೆಸಾರ್ಟ್ಗಳನ್ನು ಸಾಕಷ್ಟು ಮುಂಚೆಯೇ ಪ್ರವಾಸಿಗರು ಕಾಯ್ದಿರಿಸಿದ್ದು, ಸದ್ಯ ಕೊಠಡಿಗಳು ಸಿಗುತ್ತಿಲ್ಲ.
ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳೂ ಪ್ರವಾಸಿಗರಿಂದ ತುಂಬಿರುವುದು ಕಂಡುಬಂತು. ಹೋಂಸ್ಟೇಗಳು, ರೆಸಾರ್ಟ್ಗಳು ಹಾಗೂ ಹೋಟೆಲ್ಗಳ ಕೊಠಡಿಗಳು ಶನಿವಾರದಿಂದಲೇ ಭರ್ತಿಯಾಗಿದ್ದವು. ಮುಂಗಡ ಕಾಯ್ದಿರಿಸದ ಪ್ರವಾಸಿಗರು ತಂಗಲು ಪರದಾಡಿದರು. ನೆರೆಯ ಕೇರಳದಲ್ಲಿ ಕೋವಿಡ್ ಹೆಚ್ಚಿದ್ದರಿಂದ ಕೊನೆ ಕ್ಷಣದಲ್ಲಿ ಅಲ್ಲಿನ ಪ್ರವಾಸವನ್ನು ರದ್ದುಗೊಳಿಸಿದ ಅನೇಕರು ಕೊಡಗಿನತ್ತ ಬಂದರು. ಬಹುತೇಕ ಕಡೆ ಉಂಟಾದ ಸಂಚಾರ ದಟ್ಟಣೆಯಿಂದ ಪ್ರವಾಸಿರೊಂದಿಗೆ ಸ್ಥಳೀಯರೂ ತೊಂದರೆ ಅನುಭವಿಸಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾ ಹೋಟೆಲ್, ರೆಸಾರ್ಟ್ಸ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರಪ್ರಸಾದ್, ‘ಕೊಡಗು ಜಿಲ್ಲೆಯಲ್ಲಿ ಹೋಟೆಲ್, ರೆಸಾರ್ಟ್ ಹಾಗೂ ಹೋಂಸ್ಟೇಗಳಲ್ಲಿ 35ಸಾವಿರಕ್ಕೂ ಅಧಿಕ ರೂಂಗಳಿದ್ದು, ಎಲ್ಲವೂ ಭರ್ತಿಯಾಗಿವೆ. ಸೋಮವಾರದ ಪ್ರವಾಸಿಗರ ದಟ್ಟಣೆ ನೋಡಿದರೆ 5 ವರ್ಷದ ಹಿಂದಿನ ಸ್ಥಿತಿಗೆ ಕೊಡಗಿನ ಪ್ರವಾಸೋದ್ಯಮ ಮರಳಿದೆ ಎನಿಸುತ್ತಿದೆ. ಸೋಮವಾರ ಒಂದೇ ದಿನ ಒಂದು ಲಕ್ಷ ಮಂದಿ ಬಂದಿರುವ ಅಂದಾಜಿದೆ’ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯಲ್ಲೂ ಪ್ರವಾಸಿಗರ ದಂಡು ಕಂಡುಬಂದಿದೆ. ಬಂಡೀಪುರದಲ್ಲಿ ಸಫಾರಿಗೆ ಬೇಡಿಕೆ ಹೆಚ್ಚಿದೆ. ಹಿಮವದ್ ಗೋಪಾಲ ಸ್ವಾಮಿ ಹಾಗೂ ಮಹದೇಶ್ವರ ಬೆಟ್ಟವೂ ಪ್ರವಾಸಿಗರಿಂದ ತುಂಬಿತ್ತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.