ಆನವಟ್ಟಿ: ಸಮೀಪದ ತಿಮ್ಮಾಪುರ ಗ್ರಾಮದ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಗೆ ಪದೇ-ಪದೇ ನಾಗರ ಹಾವೊಂದು ಬರುತ್ತಿದ್ದು, ಮಕ್ಕಳು ಹಾಗೂ ಅಂಗನವಾಡಿ ಸಿಬ್ಬಂದಿ ಆತಂಕದಲ್ಲಿ ಕಾಲಕಳೆಯುವಂತಾಗಿದೆ.
ಸೋಮವಾರ ಕಟ್ಟಡದ ಚಾವಣಿಯಿಂದ ದೊಡ್ಡಗಾತ್ರದ ನಾಗರ ಹಾವು ಗೋಡೆ ಮೇಲಿಂದ ಇಳಿಯುತ್ತಿದ್ದುದನ್ನು ನೋಡಿ ಮಕ್ಕಳು ಭಯಪಟ್ಟಿದ್ದಾರೆ. ತಕ್ಷಣ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಮಕ್ಕಳನ್ನು ಮನೆಗೆ ಕಳುಹಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.
ಹಳೆ ಕಟ್ಟಡವಾದ ಕಾರಣ ಇಲಿಗಳು ಇದ್ದು, ಅವುಗಳಿಗಾಗಿ ನಾಗರ ಹಾವು ಆಗಾಗ ಬರುತ್ತದೆ.ನೂತನ ಕಟ್ಟಡ ಸಿದ್ಧವಾಗಿದ್ದು, ತಕ್ಷಣ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನೂತನ ಕಟ್ಟಡದಲ್ಲೇ ಅಂಗನವಾಡಿ ಪ್ರಾರಂಭಿಸಬೇಕು. ಹಳೆಯ ಕಟ್ಟಡವನ್ನು ನೆಲಸಮ ಮಾಡಲು ಕ್ರಮಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
‘ಸದ್ಯ ಅಂಗನವಾಡಿ ಉದ್ಘಾಟನೆ ಆಗುವವರೆಗೂ ಕಾಯುವುದು ಬೇಡ. ಅಧಿಕಾರಿಗಳು, ಸ್ಥಳೀಯ ಮುಖಂಡರ ಸಲಹೆ ಪಡೆದು ನೂತನ ಕಟ್ಟಡದಲ್ಲೇ ಅಂಗನವಾಡಿ ಪ್ರಾರಂಭಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ’ ಎಂದು ಅಂಗನವಾಡಿ ಶಿಕ್ಷಕಿ ಲಕ್ಷ್ಮೀ ಮಾಹಿತಿ ನೀಡಿದರು.
ಆನವಟ್ಟಿಯ ತಿಮ್ಮಾಪುರ ಗ್ರಾಮದ ಶಿಥಿಲಾವಸ್ಥೆಯ ಅಂಗನವಾಡಿ ಕಟ್ಟಡದ ಗೋಡೆಯಿಂದ ಇಳಿದು ಬರುತ್ತಿರುವ ನಾಗರಹಾವು.