ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ: ವೃದ್ಧನಿಗೆ ಸಿಕ್ಕಿತು ಸೂರು ಭಾಗ್ಯ

ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿಯ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ
Last Updated 11 ಆಗಸ್ಟ್ 2022, 19:52 IST
ಅಕ್ಷರ ಗಾತ್ರ

ಹೆಬ್ರಿ: ಸರಿಯಾದ ಸೂರು ಇಲ್ಲದೆ ನಕ್ಸಲ್‌ ಬಾಧಿತ ಪ್ರದೇಶದಲ್ಲಿ ವಾಸಿಸುತ್ತಿದ್ದ 72ರ ವರ್ಷದ ವೃದ್ಧ ತೆಂಗಮಾರು ನಾರಾಯಣ ಗೌಡ ಅವರಿಗೆ ಹೆಬ್ರಿ ನಕ್ಸಲ್ ನಿಗ್ರಹ ಪಡೆಯ ಇನ್‌ಸ್ಪೆಕ್ಟರ್ ಸತೀಶ್ ಬಿ.ಎಸ್. ನೇತೃತ್ವದಲ್ಲಿ ಸಿಬ್ಬಂದಿ ಅವಿರತ ಶ್ರಮ ಹಾಕಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ನಕ್ಸಲ್‌ ನಿಗ್ರಹ ಪಡೆಯ ಎಸ್ಪಿ ಪ್ರಕಾಶ್ ಅಮ್ರಿತ್ ನಿಕ್ಕಮ್ ಅವರು ಗುರುವಾರ ಮನೆಯನ್ನು ನಾರಾಯಣ ಗೌಡ ಅವರಿಗೆ ಹಸ್ತಾಂತರಿಸಿದ್ದು, ಪೊಲೀಸರ ಸಾಮಾಜಿಕ ಕಾಳಜಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಹತ್ತಾರು ಕಿ.ಮೀ. ದೂರಕ್ಕೆ ಮನೆ ನಿರ್ಮಾಣದ ಸಾಮಗ್ರಿ ಸಾಗಿಸಿ ಮನೆಯನ್ನು ನಿರ್ಮಿಸಲಾಗಿದೆ.

ಈ ಸಾಹಸದ ಹಿಂದೆ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ರಾಘವೇಂದ್ರ ಕಾಂಚನ್ ಹಾಗೂ ಗಣಪತಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಸುಮಾರು ₹55 ಸಾವಿರ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದೆ. ಈ ಪ್ರಯತ್ನಕ್ಕೆ ಪ್ರಕಾಶ್‌ ಅಮ್ರಿತ್‌ ನಿಕ್ಕಮ್‌ ಶಹಬ್ಬಾಸ್ ಹೇಳಿದ್ದಾರೆ.

ತೆಂಗಮಾರುನಲ್ಲಿ ವಾಸಿಸುತ್ತಿರುವ ನಾರಾಯಣಗೌಡ ನಾಟಿವೈದ್ಯರಾಗಿದ್ದು, ಅವಿವಾಹಿತರು. 55 ವರ್ಷಗಳಿಂದ ಈ ಪ್ರದೇಶದಲ್ಲೇ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದು. ಈಚೆಗೆ ಸಂಬಂಧಿಕರ ಒಡನಾಟವೂ ಇಲ್ಲ. ಕಾಡುತ್ಪತ್ತಿ ಇವರ ಜೀವಾಳ. ವೃದ್ಧಾಪ್ಯದಲ್ಲಿ ಇರುವ ಅವರ ಅಸಹಾಯಕ ಪರಿಸ್ಥಿತಿಯನ್ನು ಗಮನಿಸಿ ಎಲ್ಲ ಎಎನ್‌ಎಫ್ ಸಿಬ್ಬಂದಿ ಸಮಾನ ಯೋಚನೆ ಮಾಡಿ, ಎಲ್ಲರೂ ಆರ್ಥಿಕ ಸಹಾಯ ನೀಡಿದ್ದಾರೆ.

ಸಿಬ್ಬಂದಿಗೆ ಬಹುಮಾನ: ನಮ್ಮ ಸಿಬ್ಬಂದಿಯ ಮಾನವೀಯ ಕಾರ್ಯ ನಿಜವಾಗಿಯೂ ಅಭಿನಂದನೀಯ. ಮನೆ ಕಟ್ಟಲು ಬೇಕಿದ್ದ ಕಚ್ಚಾ ಸಾಮಗ್ರಿಯ ಪೂರೈಕೆಯನ್ನು ಅತ್ಯಂತ ಸಾಹಸಮಯವಾಗಿ ಸಾಗಾಟ ಮಾಡಿ ಹೊತ್ತು ತಂದಿರುವುದು ಅವರ ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.ಇದಕ್ಕಾಗಿ₹20ಸಾವಿರಬಹುಮಾನವನ್ನುಸಿಬ್ಬಂದಿಗೆನೀಡಲಾಗುವುದು ಎಂದು ಪ್ರಕಾಶ್ ಅಮ್ರಿತ್ ನಿಕಮ್ ಹೇಳಿದ್ದಾರೆ.

ಮನೆ ನಿರ್ಮಾಣಕ್ಕೆ ಸ್ಥಳೀಯರಾದ ಆನಂದ ಗೌಡ, ನಾರಾಯಣಗೌಡ, ಪ್ರಶಾಂತ್, ಸುಧಾಕರ್, ಅರುಣ್ ಕುಮಾರ್ ಹಾಗೂ ರಾಜುಗೌಡ ಎಂಬುವರು ಗಾರೆ ಕೆಲಸಕ್ಕೆ ಸಹಕರಿಸಿರುತ್ತಾರೆ.

ಮನೆಯ ಕೀ ಅನ್ನು ನಾರಾಯಣ ಗೌಡರಿಗೆ ಹಸ್ತಾಂತರಿಸದ ಬಳಿಕ ಮನೆಗೆ ಬೇಕಿದ್ದ ಅಗತ್ಯ ವಸ್ತುಗಳನ್ನು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ನೀಡಿದರು. ಇನ್‌ಸ್ಪೆಕ್ಟರ್‌ ಸತೀಶ್ ಬಿ.ಎಸ್, ಪಿಎಸ್ಐಗಳಾದ ವಸಂತ ಅಕ್ಕಸಾಲಿ, ವೀರೇಶ್ ಬೂದಿಹಾಳ, ಹೆಬ್ರಿ ಠಾಣಾಧಿಕಾರಿ ಸುದರ್ಶನ ದೊಡ್ಡಮನಿ, ಸಿಬ್ಬಂದಿ ರಾಘವೇಂದ್ರ ಕಾಂಚನ್, ಗಣಪತಿ ಹಾಗೂ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಇದ್ದರು.

ನಕ್ಸಲರು ಮುಖ್ಯವಾಹಿನಿಗೆ ಬನ್ನಿ

ಇನ್ನೂ ಎಂಟು ನಕ್ಸಲಿಯರು ಸಕ್ರಿಯವಾಗಿದ್ದು ಅವರೆಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ನಕ್ಸಲ್ ಪ್ಯಾಕೇಜ್‌ನಲ್ಲಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು. ಸ್ವಂತ ಕೆಲಸಕ್ಕೆ ಕೂಡ ಧನಸಹಾಯ ಮಾಡಲಾಗುವುದು. 2017ರ ನಂತರ ಈ ಭಾಗದಲ್ಲಿ ಯಾವುದೇ ನಕ್ಸಲ್ ಚಟುವಟಿಕೆ ನಡೆದಿಲ್ಲ. ಶರಣಾಗತಿ ಬಯಸಿದವರಿಗೆ ಸೂಕ್ತ ಪರಿಹಾರ ಸರ್ಕಾರ ಒದಗಿಸುತ್ತದೆ ಎಂದು ಎಸ್ಪಿ ನಿಖಿಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT