ಕಾರವಾರ: ಕೈಗಾ ಭಾಗದಿಂದ ಮಲ್ಲಾಪುರದತ್ತ ಭಾನುವಾರ ಬರುತ್ತಿದ್ದ ಕಾರಿನ ಬಾನೆಟ್ಗೆ ಅಚಾನಕ್ ಆಗಿ ನುಗ್ಗಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವು ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸತತ ನಾಲ್ಕು ಗಂಟೆ ಕಾರ್ಯಾಚರಣೆ ಮಾಡಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
ಜೈಸಿಂಗ್ ಎಂಬುವವರು ಮಧ್ಯಾಹ್ನ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಆಗ ಕುಚೇಗಾರ್ ಹತ್ತಿರ ಕಾಳಿಂಗ ಸರ್ಪವು ಅವರ ಬಾನೆಟ್ನೊಳಗೆ ನುಗ್ಗಿತ್ತು. ಅವರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಸಿಬ್ಬಂದಿ ಸದಾನಂದ ಗುನಗಿ ಮತ್ತು ಬಿಲಾಲ್ ಶೇಖ್ ಮುನ್ನೆಚ್ಚರಿಕೆ ವಹಿಸಿ ಹಾವಿಗೆ ಏನೂ ತೊಂದರೆಯಾಗದಂತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಜತ್ ಗೋವೇಕರ್, ಪರಶುರಾಮ್, ಮಧುಕುಮಾರ್, ನಾಗರಾಜ್, ರಾಜೇಶ್, ರಾಘವೇಂದ್ರ, ಸಂದೀಪ್ ಇದ್ದರು.