ಹಾವೇರಿ: ‘ಬಸವರಾಜ ಬೊಮ್ಮಾಯಿ ದೊಡ್ಡ ನಾಯಕರಾಗಿದ್ದು, ದೇಶಕ್ಕೆ ಅವರ ಸೇವೆ ಅವಶ್ಯವಿದೆ. ಅವರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತದಾರರಲ್ಲಿ ಮನವಿ ಮಾಡಿದರು.
ರಾಣೆಬೆನ್ನೂರಿನಲ್ಲಿ ಬುಧವಾರ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರಾರ್ಥ ಬೃಹತ್ ರೋಡ್ ಶೋ ನಡೆಸಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಸೇರಿದ್ದಕ್ಕೆ ಧನ್ಯವಾದ ತಿಳಿಸುವೆ. ನಾನು ನಿಮ್ಮೆಲ್ಲರಿಗೂ ಆಭಾರಿಯಾಗಿರುವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ದೇಶವನ್ನು ಶಕ್ತಿಶಾಲಿಯನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಈ ಬಾರಿ ಕೇಂದ್ರದಲ್ಲಿ 400 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿದ್ದೇವೆ. ಬಸವರಾಜ ಬೊಮ್ಮಾಯಿ ಒಳ್ಳೆಯ ನಾಯಕರಿದ್ದಾರೆ. ದೇಶಕ್ಕೆ ಅವರ ಸೇವೆ ಅಗತ್ಯವಿದ್ದು, ಅವರನ್ನು ಹೆಚ್ಚಿನ ಮತಗಳಿಂದ ಆರಿಸಿ ಕಳುಹಿಸಿ ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು ರಾಣೆಬೆನ್ನೂರಿನ ಕುರುಬಗೇರಿ ಕ್ರಾಸ್ನಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಅಶೋಕ್ ಸರ್ಕಲ್ವರೆಗೂ ನಡೆದ ಬೃಹತ್ ರೋಡ್ ಶೋನಲ್ಲಿ ಅಮಿತ್ ಪಾಲ್ಗೊಂಡಿದ್ದರು.
ರೋಡ್ ಶೋನಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಬಿಜೆಪಿ ಜಿಲ್ಲಾ ಘಟಕದ ಅದ್ಯಕ್ಷ ಅರುಣಕುಮಾರ್ ಪೂಜಾರ್, ಮಾಜಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ರಾಣೆಬೆನ್ನೂರಿನಲ್ಲಿ ರೋಡ್ ಶೋ ಮುಗಿಸಿ ಅಮಿತ್ ಶಾ ಹುಬ್ಬಳ್ಳಿಗೆ ತೆರಳಿದರು.