ದೇಶದ ಜನರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಹಂತಗಳನ್ನು ಕಡಿಮೆ ಮಾಡುವುದರ ಜೊತೆಗೆ, ಹಲವು ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಗಣನೀಯವಾಗಿ ಕಡಿತಗೊಳಿಸುವ ನಿರ್ಧಾರವನ್ನು ಜಿಎಸ್ಟಿ ಮಂಡಳಿ ಕೈಗೊಂಡಿದೆ. ಇದೇ 22ರಿಂದ ಹೊಸ ತೆರಿಗೆಗಳು ಅನ್ವಯವಾಗಲಿವೆ. ಜನರ ಜೀವನವನ್ನು ಸುಧಾರಿಸಲು ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಈ ಸುಧಾರಣೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ತೆರಿಗೆ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಸರ್ಕಾರ ಕಂಪನಿಗಳಿಗೆ ತಿಳಿಸಿದೆ. ವಿವಿಧ ವಲಯಗಳ ಕಂಪನಿಗಳು ಕೂಡ ಜಿಎಸ್ಟಿ ಪರಿಷ್ಕರಣೆಯ ಕುರಿತಾಗಿ ಸಕಾರಾತ್ಮಕವಾಗಿ ಸ್ಪಂದಿಸಿವೆ. ಜನರು ಕೂಡ ತಮ್ಮ ಜೇಬಿನ ಮೇಲೆ ಬಿದ್ದಿರುವ ಹೊರೆ ಕೊಂಚವಾದರೂ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ನಾವು ಈಗ ಕದನ ಕಣ ಪ್ರವೇಶಿಸಿದ್ದೇವೆ... ಹೆಚ್ಚಿನ ಹಾಗೂ ತ್ವರಿತವಾದ ಸುಧಾರಣಾ ಕ್ರಮಗಳು ಬೇಡಿಕೆಯನ್ನು ಮತ್ತು ಹೂಡಿಕೆಯನ್ನು ಹೆಚ್ಚಿಸಲು ಇರುವ ಖಚಿತ ಮಾರ್ಗೋಪಾಯಗಳು. ಇವು ಅರ್ಥ ವ್ಯವಸ್ಥೆಯನ್ನು ಹಿಗ್ಗಿಸುತ್ತವೆ, ಜಗತ್ತಿನಲ್ಲಿ ಭಾರತದ ದನಿ ಇನ್ನಷ್ಟು ಗಟ್ಟಿಯಾಗಿ ಕೇಳುವಂತೆ ಮಾಡುತ್ತವೆ. ಆದರೆ, ಇನ್ನಷ್ಟು ಸುಧಾರಣೆಗಳ ಅಗತ್ಯ ಇದೆ.-ಆನಂದ ಮಹೀಂದ್ರ, ಮಹೀಂದ್ರ ಆ್ಯಂಡ್ ಮಹೀಂದ್ರ ಸಮೂಹದ ಅಧ್ಯಕ್ಷ
ಹಣಕಾಸು ಮತ್ತು ವಿತ್ತೀಯ ನೀತಿಗಳು ಒಂದಕ್ಕೊಂದು ಪೂರಕವಾಗಿ ಸಾಗುತ್ತಿವೆ. ಆರ್ಬಿಐ ರೆಪೊ ದರ ತಗ್ಗಿಸಿರುವುದು ಹಾಗೂ ಈಗ ಜಿಎಸ್ಟಿ ದರವನ್ನು ಸರ್ಕಾರ ಇಳಿಕೆ ಮಾಡಿರುವುದು ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿವೆ. ರೆಪೊ ದರ ಇಳಿಕೆಯ ಪ್ರಯೋಜನವು ವರ್ಗಾವಣೆ ಕಂಡಂತೆಲ್ಲ, ಮಾರುಕಟ್ಟೆಯಲ್ಲಿ ಬೇಡಿಕೆಯು ಸಹಜವಾಗಿಯೇ ಹೆಚ್ಚಳ ಕಾಣಲಿದೆ.-ಸದಾಫ್ ಸಯೀದ್, ಮುತ್ತೂಟ್ ಮೈಕ್ರೊಫೈನಾನ್ಸ್ನ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.