ನವದೆಹಲಿ: ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ‘ಆಪರೇಷನ್ ಗಂಗಾ’ ಹೆಸರಿನಲ್ಲಿ ವಾಪಸ್ ಕರೆತರಲಾಗುತ್ತಿದ್ದು,ನಾಳೆ ಏಳು ವಿಶೇಷ ವಿಮಾನಗಳು ದೆಹಲಿಗೆ ಬಂದಿಳಿಯಲಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ.
ಇಂಡಿಗೊ ಏರ್ಲೈನ್ಸ್ನ ಮೊದಲ ವಿಮಾನ ಮಂಗಳವಾರ ಸಂಜೆ ಹಂಗೇರಿರಾಜಧಾನಿ ಬುಡಾಪೆಸ್ಟ್ನಿಂದ ಟೇಕಾಫ್ ಆಗಲಿದ್ದು, ನಾಳೆ ಬೆಳಿಗ್ಗೆ 7:20 ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ.
ಇಂಡಿಗೊ ವಿಮಾನವು 216, ಏರ್ ಇಂಡಿಯಾ 250, ಏರ್ ಇಂಡಿಯಾ ಎಕ್ಸ್ಪ್ರೆಸ್ 180 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ.
ಉಕ್ರೇನ್ನಲ್ಲಿ ಸಿಲುಕಿರುವವರನ್ನು ಕರೆತರುವುದಕ್ಕಾಗಿ ಕೇಂದ್ರ ಸರ್ಕಾರ ದೇಶೀಯ ವಿವಿಧ ವಿಮಾನಯಾನ ಸಂಸ್ಥೆಗಳ 20 ವಿಮಾನಗಳನ್ನು ನಿಯೋಜನೆ ಮಾಡಿದೆ.
ಈಗಾಗಲೇ ಏರ್ ಇಂಡಿಯಾ, ಸ್ಪೈಸ್ಜೆಟ್, ಇಂಡಿಗೊ, ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಶೇಷ ವಿಮಾನಗಳನ್ನು ರುಮೇನಿಯಾ, ಹಂಗೆರಿಗೆ ಕಳುಹಿಸಲಾಗಿದೆ. ಈ ವಿಮಾನಗಳು ಬುಕಾರೆಸ್ಟ್ ಹಾಗೂ ಬುಡಾಪೆಸ್ಟ್ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸಲಿವೆ.