ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ: ಇಂದು ಎಂಟನೇ ಸುತ್ತಿನ ಮಾತುಕತೆ

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ಸರ್ಕಾರದ ನಡುವೆ ಇಂದು ಎಂಟನೇ ಸುತ್ತಿನ ಮಾತುಕತೆ ನಡೆಯಲಿದೆ. ಕಾಯ್ದೆಗಳನ್ನು ಹಿಂಪಡೆಯಲು ಸರ್ಕಾರ ನಿರಾಕರಿಸುತ್ತಿದೆ. ಆದರೆ ಇವುಗಳಿಂದ (ಕಾಯ್ದೆಗಳಿಂದ) ನಮ್ಮ ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜನವರಿ 26ರ ಒಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲವಾದಲ್ಲಿ ಗಣರಾಜ್ಯೋತ್ಸವದಂದು ದೆಹಲಿಗೆ ನುಗ್ಗುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಅದರಂತೆ ರಾಜಧಾನಿಯ ಹೊರವಲಯದಲ್ಲಿ ಗುರುವಾರ ಟ್ರಾಕ್ಟರ್ ತಾಲೀಮು ಆರಂಭವಾಗಿದೆ.
‘ಸರ್ಕಾರದ ಬಳಿ ಹೊಸ ಪ್ರಸ್ತಾಪವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂತಹ ಯಾವುದೇ ವಿಚಾರವಿಲ್ಲ. ಇಂದು ನಡೆಯುವ ಯಶಸ್ವಿ ಟ್ರಾಕ್ಟರ್ ರ್ಯಾಲಿ ಮೇಲಿನ ಮಾಧ್ಯಮಗಳ ಗಮನವನ್ನು ಬೇರೆಡೆಗೆ ಸೆಳೆಯುವುದು ಇದರ ಉದ್ದೇಶವಾಗಿದೆ’ ಎಂದು ಸ್ವರಾಜ್ ಇಂಡಿಯಾ ಪಕ್ಷ ಹಾಗೂ ರೈತ ನಾಯಕ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಜನವರಿ 4ರಂದು ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಈ ವೇಳೆ ಸೆಪ್ಟೆಂಬರ್ನಲ್ಲಿ ಸರ್ಕಾರ ಅಂಗೀಕರಿಸಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರೈತರು ಒತ್ತಾಯಿಸಿದ್ದರು. ಆದರೆ, ಅದು ಸಾಧ್ಯವಿಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನಿರಾಕರಿಸಿದ್ದರು.
‘ನಾವು ಮತ್ತೊಮ್ಮೆ ನೆನಪಿಸುತ್ತೇವೆ. ಕಾಯ್ದೆಗಳು ಸಂಪೂರ್ಣವಾಗಿ ರದ್ದಾಗಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಪಡೆಯುವುದು ಎಲ್ಲ ರೈತರ ಹಕ್ಕಾಗಬೇಕು’ ಎಂದು ರೈತ ನಾಯಕ ದರ್ಶನ್ ಪಾಲ್ ಹೇಳಿದ್ದಾರೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿಯ ಕಾರ್ಯದರ್ಶಿ ಆವಿಕ್ ಸಹಾ, ‘ರೈತರ ಹೋರಾಟ ಮುಂದುವರಿಯಲಿದೆ. ನಮ್ಮ ಬೇಡಿಕೆಗಳು ಈಡೇರಿಕೆಯಾಗದಿದ್ದರೆ, ಸರ್ಕಾರದ ಅಧಿಕೃತ ಪರೇಡ್ಗೆ ತೊಂದರೆಯಾಗದಂತೆ ಗಣರಾಜ್ಯೋತ್ಸವ ಆಚರಿಸಲು ನಾವು ರಾಜಧಾನಿ ಪ್ರವೇಶಿಸಲಿದ್ದೇವೆ’ ಎಂದಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.