ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣಕ್ಕೆ ಒತ್ತಡ: ವನ್ಯಜೀವಿ ಕಾರ್ಯಕರ್ತರ ಆಕ್ಷೇಪ

Last Updated 2 ನವೆಂಬರ್ 2022, 10:22 IST
ಅಕ್ಷರ ಗಾತ್ರ

ನವದೆಹಲಿ: ‘ಬೆಳಗಾವಿಯಿಂದ ಚೋರ್ಲಾ ಮೂಲಕ ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 748ಎಎ ಉನ್ನತೀಕರಣ ಯೋಜನೆಗೆ ಕೆಲವು ಜನಪ್ರತಿನಿಧಿಗಳು ತೀವ್ರ ಒತ್ತಡ ಹೇರುತ್ತಿರುವುದು ಸರಿಯಲ್ಲ. ಈ ಯೋಜನೆಯನ್ನು ಕೈಬಿಡಬೇಕು’ ಎಂದು ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಈ ಹೆದ್ದಾರಿಯು ಬೆಳಗಾವಿಯ ಪೀರನವಾಡಿಯಿಂದ ಆರಂಭವಾಗಿ ಕಿನಾಯೆ,ಜಾಂಬೋಟಿ, ಕಣಕುಂಬಿ, ಚೋರ್ಲಾ ಮೂಲಕ ಗೋವಾದ ಸ್ಯಾಂಕೀಲಿಮ್ ಎಂಬಲ್ಲಿ ಮುಕ್ತಾಯವಾಗುತ್ತದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಹೆದ್ದಾರಿಯನ್ನು ಉನ್ನತೀಕರಿಸಲು ₹220 ಕೋಟಿ ಮೀಸಲಿರಿಸಿದೆ.

ಯೋಜನಾ ಪ್ರದೇಶ ಅದರಲ್ಲೂ ಕರ್ನಾಟಕದಜಾಂಬೋಟಿಯಿಂದ ಚೋರ್ಲಾ ವರೆಗೆ (ಖಾನಾಪುರ, ಕಣಕುಂಬಿ)ದಟ್ಟ ಅರಣ್ಯಗಳ ಮೂಲಕ ಸಾಗುತ್ತದೆ. ಹುಲಿ, ಚಿರತೆ, ಕಾಟಿ, ಕೆನ್ನಾಯಿ, ಕರಡಿ, ಕಡವೆ, ಕಾಳಿಂಗ ಸರ್ಪ ಸೇರಿದಂತೆ ಅಪರೂಪದ ವನ್ಯಜೀವಿಗಳು ಇಲ್ಲಿವೆ. ಈಗಾಗಲೇ ಈ ಹೆದ್ದಾರಿಯಲ್ಲಿ ಕಾಟಿ, ಚಿರತೆ, ಕಾಳಿಂಗ ಸರ್ಪ ಸೇರಿದಂತೆ ಹಲವು ವನ್ಯಜೀವಿಗಳು ವಾಹನ ಅಪಘಾತಕ್ಕೆ ಬಲಿಯಾಗಿವೆ. ಹೀಗಾಗಿ, ಹೆದ್ದಾರಿ ವಿಸ್ತರಣೆಯನ್ನು ಕೈಬಿಡುವುದು ಸೂಕ್ತ ಎಂದು ವನ್ಯಜೀವಿ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಈ ಹೆದ್ದಾರಿ ಅಭಿವೃದ್ಧಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು 2010–11ರಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಹೆದ್ದಾರಿಯನ್ನು 3.5 ಮೀಟರ್‌ನಿಂದ 6.7 ಮೀಟರ್‌ಗೆ (1.2 ಮೀಟರ್ ಚರಂಡಿ ಸೇರಿ) ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿತ್ತು.‌ವನ್ಯಜೀವಿಗಳ ಸುಗಮ ಸಂಚಾರಕ್ಕೆ ಕೆಳಸೇತುವೆಗಳನ್ನು ನಿರ್ಮಿಸಬೇಕು ಎಂಬ ಷರತ್ತನ್ನೂ ವಿಧಿಸಿತ್ತು.ಹೆದ್ದಾರಿಯ ಪ್ರದೇಶ ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಷರತ್ತುಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿತ್ತು.ಗೋವಾ ರಾಜ್ಯದ ವ್ಯಾಪ್ತಿಯಲ್ಲಿ ಹೆದ್ದಾರಿಯು ಮಹದಾಯಿ ಅಭಯಾರಣ್ಯದ ಮೂಲಕ ಸಾಗುತ್ತಿದ್ದು ಹೆದ್ದಾರಿಯ ಉನ್ನತೀಕರಣ ಯೋಜನೆ ಹುಲಿಗಳ ಸಂರಕ್ಷಣೆಗೆ ಮಾರಕವಾಗಲಿದೆ ಎಂದೂ ಅವರು ಗಮನ ಸೆಳೆದಿದ್ದಾರೆ.

ಬದಲಿ ಮಾರ್ಗದ ಲಭ್ಯತೆ: ’ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸಲು ಬೆಳಗಾವಿ- ಖಾನಾಪುರ- ಅನಮೋಡ ಮೂಲಕ ಹೆದ್ದಾರಿ 748 ಅನ್ನು ಹೆದ್ದಾರಿ ಪ್ರಾಧಿಕಾರವೇ ₹1300 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡುತ್ತಿದೆ.ಬೆಳಗಾವಿಯಿಂದಖಾನಾಪುರದವರೆಗೆ ಶೇ 63 ಹಾಗೂ ಖಾನಾಪುರದಿಂದ ಗೋವಾ ಗಡಿಯ ವರೆಗೆ ಶೇ 70 ಕಾಮಗಾರಿ ಮುಗಿದಿದೆ. ಈ ಯೋಜನೆಗಿದ್ದ ಕಾನೂನಾತ್ಮಕ ತೊಡಕು ನಿವಾರಣೆಯಾಗಿದೆ. ಈ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಈ ಕಾಮಗಾರಿ ಪೂರ್ಣಗೊಳಿಸಿದರೆ ಚೋರ್ಲಾ ರಸ್ತೆಯಲ್ಲಿ ಸಂಚಾರ ದಟ್ಟಣೆ ತನ್ನಿಂತಾನೆ ಕಡಿಮೆಯಾಗಲಿದೆ.ಆದರೆ, ಅರಣ್ಯ (ಸಂರಕ್ಷಣಾ) ಕಾಯ್ದೆ 1980 ಹಾಗೂ ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಅಡಿ ಒಪ್ಪಿಗೆ ಪಡೆಯದೇ ಈ ಹೆದ್ದಾರಿ ವಿಸ್ತರಣೆ ಮಾಡುವುದಕ್ಕೆ ವಿರೋಧ ಇದೆ ಎಂದು ವನ್ಯಜೀವಿ ಕಾರ್ಯಕರ್ತ ರಾಮ್‌ ಹೇಳಿದರು.

‘ಬದಲಿ ಮಾರ್ಗಗಳು ಲಭ್ಯ ಇದ್ದರೆ ವನ್ಯಜೀವಿ ಕಾರಿಡಾರ್‌ಗಳ ಮೂಲಕ ಹೆದ್ದಾರಿ ಅಭಿವೃದ್ಧಿಪಡಿಸುವುದನ್ನು ತಪ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಹೆದ್ದಾರಿ ಪ್ರಾಧಿಕಾರ 2019ರಲ್ಲಿ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಪ್ರಕಾರ,ಎನ್‌ಎಚ್‌ 748ಎಎ ಉನ್ನತೀಕರಣ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ’ ಎಂದು ಅವರು ತಿಳಿಸಿದರು.

‘ಕಳಸಾ ಬಂಡೂರಿ ಯೋಜನೆಗಾಗಿ 50 ಹೆಕ್ಟೇರ್‌ ಅರಣ್ಯದ ಅವಶ್ಯಕತೆ ಇದೆ.ಉದ್ದೇಶಿತ ಈ ಯೋಜನೆಯು ಚೋರ್ಲಾ ಹೆದ್ದಾರಿ ಪಕ್ಕದಲ್ಲಿಯೇ ಸಾಗಲಿದ್ದು ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ನಾಶವಾಗಲಿದೆ. ಇದು ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಇದ‌ಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಬದಲಿ ಮಾರ್ಗದ ಲಭ್ಯತೆ ಇದ್ದರೂ ಹೆದ್ದಾರಿ ಉನ್ನತೀಕರಣ ಮಾಡಲು ಮುಂದಾಗಿರುವುದು ಸರಿಯಲ್ಲ. ಇದನ್ನು ಕೈಬಿಡಬೇಕು’ ಎಂದುವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT