ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪಾಳಯ ಬದಲಿಸಿದ ನಿತೀಶ್ ಕುಮಾರ್, ಮುಂಗಾಣ್ಕೆ ಇಲ್ಲದ ‘ಇಂಡಿಯಾ’ ಕೂಟ

Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಅವರ ಜೆಡಿಯು ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ತೆಕ್ಕೆಗೆ ಮರಳಿರುವುದು ವಿರೋಧ ಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ಕ್ಕೆ ದೊಡ್ಡ ಏಟು. ವಾಸ್ತವದಲ್ಲಿ ‘ಇಂಡಿಯಾ’ ಮೈತ್ರಿಕೂಟವು ಸ್ಪಷ್ಟ ರೂಪವೊಂದನ್ನು ಪಡೆದುಕೊಳ್ಳಲು ಇನ್ನೂ ಹೆಣಗಾಡುತ್ತಲೇ ಇದೆ. ಹೆಸರಿಗೆ ಈ ಮೈತ್ರಿಕೂಟ ಇದೆ ಹಾಗೂ ತನ್ನ ಉದ್ದೇಶಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಹೇಳಿಕೆಗಳನ್ನು ನೀಡಿದೆ ಎಂಬುದನ್ನು ಹೊರತುಪಡಿಸಿದರೆ ‘ಇಂಡಿಯಾ’ ಮೈತ್ರಿಕೂಟವು ಪರಿಪೂರ್ಣವಾಗಿ ಅಸ್ತಿತ್ವಕ್ಕೆ ಬಂದಿದ್ದೇ ಇಲ್ಲ. ತನ್ನ ಉದ್ದೇಶ ಹಾಗೂ ಗುರಿಯನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂಬ ಬಗ್ಗೆ ಗಂಭೀರವಾದ ಮಾತುಕತೆಗಳನ್ನು ಈ ಮೈತ್ರಿಕೂಟವು ಇನ್ನಷ್ಟೇ ಆರಂಭಿಸಬೇಕಿತ್ತು. ನಿತೀಶ್ ಕುಮಾರ್ ಅವರು ಈ ಮೈತ್ರಿಕೂಟದ ಪಾಲಿಗೆ ಒಂದು ಆಧಾರಸ್ತಂಭದಂತೆ ಇದ್ದರು. ಹಲವು ಪಕ್ಷಗಳನ್ನು ಒಂದು ವೇದಿಕೆಗೆ ಕರೆತರುವ ಹೊಣೆಯನ್ನು ಅವರು ವಹಿಸಿಕೊಂಡಿದ್ದರು. ಅವರೇ ಈಗ ‘ಇಂಡಿಯಾ’ ಮೈತ್ರಿಕೂಟದ ವಿರೋಧಿ ಪಾಳಯವನ್ನು ಸೇರಿರುವ ಕಾರಣ, ಮೈತ್ರಿಕೂಟವು ದುರ್ಬಲಗೊಂಡಂತೆ ಆಗಿದೆ. ನಿತೀಶ್ ಅವರಿಗೆ ಎನ್‌ಡಿಎ ಮೈತ್ರಿಕೂಟದ ಕಾರ್ಯವಿಧಾನ ಏನಿರುತ್ತದೆ ಎಂಬುದರ ಅರಿವು ಇದೆ. ಅಲ್ಲದೆ, ಅವರು ಅನುಭವಿಯೂ ಹೌದು, ಸಂಪನ್ಮೂಲ ಹೊಂದಿರುವ ನಾಯಕ ಕೂಡ ಹೌದು. ಬಿಹಾರವು ದೊಡ್ಡ ರಾಜ್ಯ, ಅದು 40 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆದ್ದುಕೊಳ್ಳುವುದು ಯಾವುದೇ ಮೈತ್ರಿಕೂಟಕ್ಕೆ ಮಹತ್ವದ ವಿಚಾರವೇ ಆಗಿರುತ್ತದೆ.

ತಾನು ‘ಇಂಡಿಯಾ’ ಮೈತ್ರಿಕೂಟವನ್ನು ತೊರೆಯುವಂತಹ ಪರಿಸ್ಥಿತಿ ಸೃಷ್ಟಿಯಾದುದಕ್ಕೆ ಕಾಂಗ್ರೆಸ್ ಕಾರಣ ಎಂದು ಜೆಡಿಯು ಆರೋಪಿಸಿದೆ. ಕಾಲಹರಣ ಮಾಡಿದ, ಅದರಲ್ಲೂ ಮುಖ್ಯವಾಗಿ ಈಚೆಗೆ ನಡೆದ ವಿಧಾನಸಭಾ ಚುನಾವಣೆಗಳವರೆಗೆ ಸುಮ್ಮನೆ ಕುಳಿತಿದ್ದ ದೋಷವನ್ನು ಕಾಂಗ್ರೆಸ್ ಹೊರಬೇಕು ಎಂಬುದು ನಿಜ. ಆ ಚುನಾವಣೆ ನಡೆದ ನಂತರವೂ ಮೈತ್ರಿಕೂಟದ ನಾಯಕತ್ವದ ರೂಪುರೇಷೆಗಳನ್ನು ಅಂತಿಮಗೊಳಿಸುವ ವಿಚಾರದಲ್ಲಿ ಹಾಗೂ ಪಾಲುದಾರ ಪಕ್ಷಗಳ ನಡುವೆ ಸೀಟು ಹಂಚಿಕೆಯ ವಿಚಾರದಲ್ಲಿ ಹೆಚ್ಚಿನ ಪ್ರಗತಿಯೇನೂ ಆಗಿರಲಿಲ್ಲ. ‘ಇಂಡಿಯಾ’ ಮೈತ್ರಿಕೂಟದ ಸಂಚಾಲಕ ಆಗುವ ಬಯಕೆಯನ್ನು ನಿತೀಶ್ ಹೊಂದಿದ್ದರು. ಆ ವಿಚಾರದಲ್ಲಿ ಅನಿಶ್ಚಿತತೆ ಮನೆ ಮಾಡಿದ್ದಾಗ, ನಿತೀಶ್ ಅವರು ಇನ್ನೊಂದು ಪಾಳಯದತ್ತ ಕಣ್ಣು ಹಾಯಿಸಲು ಆರಂಭಿಸಿದ್ದಿರಬಹುದು. ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದನ್ನು ಅವರು ಪರಿಗಣಿಸಿ ತಮ್ಮ ನಡೆ ತೀರ್ಮಾನಿಸಿದ್ದಿರಬಹುದು. ಪದೇ ಪದೇ ನಿಲುವು ಬದಲಾಯಿಸುವುದಕ್ಕೆ ಹಾಗೂ ತತ್ವಗಳಿಗೆ ಹೆಚ್ಚಿನ ಮಹತ್ವ ನೀಡದೇ ಇರುವುದಕ್ಕೆ ನಿತೀಶ್ ಮೊದಲಿನಿಂದಲೂ ಹೆಸರಾದವರು. ಮೈತ್ರಿಕೂಟಗಳನ್ನು ನಿತೀಶ್ ಅವರಷ್ಟು ಸಲೀಸಾಗಿ ಬದಲಾಯಿಸಿದ ಇನ್ನೊಬ್ಬ ಹಿರಿಯ ರಾಜಕಾರಣಿ ದೇಶದ ರಾಜಕೀಯದಲ್ಲಿ ಇಲ್ಲ. ಬಿಜೆಪಿಯು ಅವಕಾಶವನ್ನು ಬಳಸಿಕೊಂಡಿತು. ಬಿಹಾರದ ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಪುರಸ್ಕಾರ ಘೋಷಿಸಿತು. ಹಲವು ರಾಜಕಾರಣಿಗಳು ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ, ವರ್ತಮಾನದ ಅಗತ್ಯಗಳಿಗೆ ಸ್ಪಂದಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ತಮ್ಮ ಎದುರು ಇರುವ ಅವಕಾಶವೊಂದನ್ನು ಬಳಸಿಕೊಳ್ಳಲು ಅವರು ಹಿಂದೆ ಮುಂದೆ ನೋಡುವುದಿಲ್ಲ. ಅವಕಾಶವಾದಿ ರಾಜಕಾರಣವನ್ನು ನಿತೀಶ್ ಅವರು ಬಹಳ ಚೆನ್ನಾಗಿ ಒಗ್ಗಿಸಿಕೊಂಡಿದ್ದಾರೆ. ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಹಾಗೂ ಶಾಶ್ವತ ಮಿತ್ರರು ಇಲ್ಲ ಎಂಬ ಮಾತು ನಿಜವಾಗಿದ್ದರೂ, ನಿತೀಶ್ ಅವರ ರಾಜಕಾರಣವು ತೀರಾ ಅತಿರೇಕದ ಒಂದು ಮಾದರಿ. ಆದರೆ ಅದು ಇತರ ಹಲವು ವಿಚಾರಗಳಲ್ಲಿ ಅವರ ಹೆಸರಿಗೆ ಕಳಂಕ ತಂದಿದೆ.

‘ಇಂಡಿಯಾ’ ಮೈತ್ರಿಕೂಟವು ಇನ್ನೂ ಹಲವೆಡೆ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಇಲ್ಲ ಎಂದು ಹೇಳಿದ್ದಾರೆ. ಆದರೆ ಅವರ ಈ ಮಾತೇ ಅಂತಿಮ ಆಗಲಿಕ್ಕಿಲ್ಲ. ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಸೀಟು ಹಂಚಿಕೆ ಇರುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. ಇತರ ಕೆಲವು ರಾಜ್ಯಗಳಲ್ಲಿಯೂ ‘ಇಂಡಿಯಾ’ ಕೂಟವು ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಚುನಾವಣೆ ಎದುರಾಗುವುದಕ್ಕೆ ಇನ್ನು ಕೆಲವೇ ವಾರಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಮೈತ್ರಿಕೂಟವು ಮುಂಗಾಣ್ಕೆ ಇಲ್ಲದೆ ಬಿಕ್ಕಟ್ಟಿಗೆ ಸಿಲುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT