ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿ ಚುನಾಯಿತ ಸ್ಥಾನ ಕಳೆದುಕೊಂಡ ಪ್ರಮುಖರು ಇವರು

Published 21 ಡಿಸೆಂಬರ್ 2023, 13:41 IST
Last Updated 21 ಡಿಸೆಂಬರ್ 2023, 13:41 IST
ಅಕ್ಷರ ಗಾತ್ರ

ನವದೆಹಲಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ ನ್ಯಾಯಾಲಯದ ಶಿಕ್ಷೆಗೆ ಗುರಿಯಾದ ತಮಿಳುನಾಡಿನ ಡಿಎಂಕೆ ಮುಖಂಡ ಪೊನ್ಮುಡಿ ಸಚಿವ ಸ್ಥಾನದ ಜತೆಗೆ, ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಇವರಂತೆಯೇ ಈವರೆಗೂ ಹಲವರು ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ತಮ್ಮ ಚುನಾಯಿತ ಸ್ಥಾನವನ್ನು ಕಳೆದುಕೊಂಡ ಉದಾಹರಣೆಗಳಿವೆ. 

ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ನಂತರ 1988ರಿಂದ ಈ ವರೆಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ 40ಕ್ಕೂ ಹೆಚ್ಚು ಸಂಸದರು ಅನರ್ಹಗೊಂಡಿದ್ದಾರೆ. ಕ್ರಿಮಿನಲ್‌ ಪ್ರಕರಣದಲ್ಲಿ ಸಂಸದರು ಮತ್ತು ಶಾಸಕರಿಗೆ ನ್ಯಾಯಾಲಯವು ಎರಡು ಅಥವಾ ಎರಡಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ, ಈ ಕಾಯ್ದೆ ಪ್ರಕಾರ ಸಹಜವಾಗಿಯೇ ಅವರು ಅನರ್ಹಗೊಳ್ಳುತ್ತಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ, ಅವರ ಮೊಮ್ಮಗ ರಾಹುಲ್ ಗಾಂಧಿ, ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್, ಎಐಎಡಿಂಕೆ ಮುಖ್ಯಸ್ಥ ಜಯಲಲಿತಾ ಸೇರಿದಂತೆ ಹಲವರು ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿ ತಮ್ಮ ಸದಸ್ಯತ್ವ ಸ್ಥಾನವನ್ನು ಕಳೆದುಕೊಂಡವರಲ್ಲಿ ಪ್ರಮುಖರು.

ಇಂದಿರಾ ಗಾಂಧಿ

1975ರಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ, ಇಂದಿರಾ ಗಾಂಧಿಯವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿ ದೇಶವೇ ತಿರುಗಿ ನೋಡುವಂತಹ ತೀರ್ಪು ನೀಡಿದ್ದರು. ಆ ದಿಟ್ಟ ತೀರ್ಪು ತುರ್ತು ಪರಿಸ್ಥಿತಿಯ ಘೋಷಣೆಗೆ ನೇರವಾಗಿ ಕಾರಣವಾಯಿತು ಎಂದು ಹೇಳಲಾಗುತ್ತದೆ.

ಚುನಾವಣಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ದೋಷಿ ಎಂದು ಘೋಷಿಸಿದ್ದ ನ್ಯಾಯಮೂರ್ತಿ, ಜನಪ್ರತಿನಿಧಿ ಕಾಯಿದೆಯ ಅಡಿಯಲ್ಲಿ 6 ವರ್ಷಗಳ ಕಾಲ ಯಾವುದೇ ಚುನಾಯಿತ ಹುದ್ದೆಯಲ್ಲಿ ಮುಂದುವರಿಯದಂತೆ ತಡೆ ಹಾಕಿದ್ದರು.

ರಾಹುಲ್ ಗಾಂಧಿ

2019ರಲ್ಲಿ ಮೋದಿ ಉಪನಾಮವನ್ನು ವ್ಯಂಗ್ಯ ಮಾಡಿದ್ದ ಆರೋಪ ಮೇಲೆ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ, ರಾಹುಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಸೂರತ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದರಿಂದ, ರಾಹುಲ್ ಅವರನ್ನು ಅನರ್ಹಗೊಳಿಸಿದ ಆದೇಶವನ್ನು ಲೋಕಸಭೆ ಹಿಂಪಡೆದಿದೆ.

ಲಾಲೂ ಪ್ರಸಾದ್

ಮೇವು ಹಗರಣ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರು 2013ರಲ್ಲಿ ತನ್ನ ಲೋಕಸಭಾ ಸದಸ್ಯತ್ವ ಸ್ಥಾನವನ್ನು ಕಳೆದುಕೊಂಡಿದ್ದರು. ಅವರು ಬಿಹಾರದ ಸರನ ಕ್ಷೇತ್ರದ ಪ್ರತಿನಿಧಿಯಾಗಿದ್ದರು.

ಜೆ. ಜಯಲಲಿತಾ

ಎಐಎಡಿಎಂಕೆ ಮುಖ್ಯಸ್ಥೆಯಾಗಿದ್ದ ಜೆ.ಜಯಲಲಿತಾ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ 2014ರ ಸೆಪ್ಟೆಂಬರ್‌ನಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದರಿಂದ ಅವರು ಚುನಾಯಿತ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಜಯಲಲಿತಾ ತಮಿಳುನಾಡು ಮುಖ್ಯಮಂತ್ರಿ ಆಗಿದ್ದರು.

ಪಿ.ಪಿ.ಮಹಮ್ಮದ್ ಫೈಜಲ್

ಲಕ್ಷದ್ವೀಪದ ಸಂಸದರಾಗಿದ್ದ ಪಿ.ಪಿ.ಮಹಮ್ಮದ್ ಫೈಜಲ್ ಅವರು ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾದ ತಕ್ಷಣವೇ 2023ರ ಜನವರಿಯಲ್ಲಿ ಅವರು ತನ್ನ ಚುನಾಯಿತ ಸ್ಥಾನವನ್ನು ಕಳೆದುಕೊಂಡರು. 

ಫೈಜಲ್ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಕೇರಳ ಹೈಕೋರ್ಟ್‌ ತಡೆ ನೀಡಿದೆ. ಆದರೆ ಲೋಕಸಭೆಯು ಇವರ ಅನರ್ಹತೆಯನ್ನು ರದ್ದುಗೊಳಿಸಬೇಕಿದೆ.

ಆಜಂ ಖಾನ್

ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಅವರು 2019ರಲ್ಲಿ ಮಾಡಿದ ದ್ವೇಷ ಭಾಷಣ ಅಪರಾಧದಡಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದರಿಂದಾಗಿ 2022ರ ಅಕ್ಟೋಬರ್‌ನಲ್ಲಿ ಅವರು ತಮ್ಮ ಶಾಸಕ ಸ್ಥಾನ ಕಳೆದುಕೊಂಡರು. 

ಅಬ್ದುಲ್ಲಾ ಆಜಂ ಖಾನ್

ಸಮಾಜವಾದಿ ಪಕ್ಷದ ಅಬ್ದುಲ್ಲಾ ಆಜಂ ಖಾನ್ ಅವರ ಮೇಲಿದ್ದ 15 ವರ್ಷಗಳ ಹಿಂದಿನ ಪ್ರಕರಣ ಸಾಬೀತಾಗಿದ್ದರಿಂದ ಅವರಿಗೆ 2 ವರ್ಷ ಜೈಲು ಶಿಕ್ಷೆಯಾಗಿತ್ತು. ಇದರಿಂದ 2023ರಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡರು.

2007ರಲ್ಲಿ ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ತಪಾಸಣೆ ಸಂದರ್ಭದಲ್ಲಿ ತಮ್ಮನ್ನು ತಡೆಯಲಾಯಿತು ಎಂದು ಹೆದ್ದಾರಿಯಲ್ಲಿ ಧರಣಿ ನಡೆಸಿದ ಆರೋಪ ಆಜಂ ಖಾನ್ ಪುತ್ರ ಅಬ್ದುಲ್ಲಾ ಮೇಲಿತ್ತು.

ಅನಿಲ್ ಕುಮಾರ್ ಸಹಾನಿ

ವಂಚನೆ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ಶಾಸಕ ಅನಿಲ್ ಕುಮಾರ್ ಸಹ್ನಿ ಅವರು 2022ರ ಅಕ್ಟೋಬರ್‌ನಲ್ಲಿ ಸಂಸದ ಸ್ಥಾನ ಕಳೆದುಕೊಂಡರು. 

2012ರಲ್ಲಿ ಪ್ರಯಾಣ ಭತ್ಯೆ ಬಳಕೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಇ–ಟಿಕೆಟ್‌ ನಕಲು ಮಾಡಿದ ಆರೋಪ ಇವರ ಮೇಲಿತ್ತು. ಇವರು ಒಟ್ಟು ₹23.71 ಲಕ್ಷದ ಕ್ಲೇಮನ್ನು ಇವರು ಸಲ್ಲಿಸಿದ್ದರು. ಆರೋಪ ಸಾಬೀತಾದ ಸಂದರ್ಭದಲ್ಲಿ ಅನಿಲ್ ಕುಮಾರ್ ಅವರು ರಾಜ್ಯಸಭಾ ಸದಸ್ಯರಾಗಿದ್ದರು. 

ವಿಕ್ರಂ ಸಿಂಗ್ ಸೈನಿ

ಮುಝಾಫರ್‌ನಗರ ದಂಗೆ ಪ್ರಕರಣದಲ್ಲಿ ಬಿಜೆಪಿಯ ಶಾಸಕ ವಿಕ್ರಂ ಸಿಂಗ್ ಸೈನಿ ಅವರು 2013ರಲ್ಲಿ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದರಿಂದ ಅವರು ತಮ್ಮ ಶಾಸಕ ಸ್ಥಾನ ಕಳೆದುಕೊಂಡಿದ್ದರು.

ಕುಲದೀಪ್ ಸಿಂಗ್ ಸೆಂಗಾರ್

ಅತ್ಯಾಚಾರ ‍ಪ್ರಕರಣ ಸಾಬೀತಾದ ಕಾರಣದಿಂದ 2020ರಲ್ಲಿ ಶಿಕ್ಷೆಗೆ ಗುರಿಯಾದ ಉತ್ತರ ಪ್ರದೇಶ ಬಂಗಾರಮಾವ್ ಕ್ಷೇತ್ರದ ಕುಲದೀಪ್ ಸಿಂಗ್ ಸೆಂಗಾರ್ ಶಾಸಕ ಸ್ಥಾನದಿಂದ ಅನರ್ಹಗೊಂಡರು. ಶಿಕ್ಷೆ ಪ್ರಕಟಕ್ಕೂ ಮೊದಲು ಇವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿತ್ತು.

ಪ್ರದೀಪ್ ಚೌಧರಿ

ಹರಿಯಾಣದ ಕಲ್ಕ ಕ್ಷೇತ್ರದ ಶಾಸಕರಾಗಿದ್ದ ಕಾಂಗ್ರೆಸ್‌ನ ಪ್ರದೀಪ್ ಚೌಧರಿ ಅವರು ಹಲ್ಲೆ ನಡೆಸಿದ ಆರೋಪದಡಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ತಮ್ಮ ಚುನಾಯಿತ ಸ್ಥಾನವನ್ನು 2021ರಲ್ಲಿ ಕಳೆದುಕೊಂಡರು.

ಅನಂತ ಸಿಂಗ್

ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಆರ್‌ಜೆಡಿ ಶಾಸಕ ಅನಂತ ಸಿಂಗ್ ಅವರು 2022ರಲ್ಲಿ ತಮ್ಮ ಚುನಾಯಿತ ಸ್ಥಾನ ಕಳೆದುಕೊಂಡಿದ್ದರು.

ರಾಮ್ ದುಲಾರೆ ಗೋಂಡ್‌

ಒಂಭತ್ತು ವರ್ಷದ ಬಾಲಕಿ ಮೇಲೆ ವರ್ಷದ ಹಿಂದೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ದುದ್ಧಿ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ದುಲಾರೆ ಗೋಂಡ್‌ಗೆ ಉತ್ತರ ಪ್ರದೇಶದ ಸೋಭದ್ರಾ ಜಿಲ್ಲೆಯ ಜನಪ್ರತಿನಿಧಿಗಳ ನ್ಯಾಯಾಲಯವು 25 ವರ್ಷ ಜೈಲು ಶಿಕ್ಷೆಯನ್ನು ಡಿ. 15ರಂದು ಪ್ರಕಟಿಸಿತು. ಇದಾದ ಬೆನ್ನಲ್ಲೇ ಅವರು ಶಾಸಕ ಸ್ಥಾನದಿಂದಲೂ ಅನರ್ಹಗೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT