ADVERTISEMENT

ನಾಗರಹಾವು ಮತ್ತು ಮುಂಗುಸಿ

ಅಮರಯ್ಯಾ ಪತ್ರಿಮಠ
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST
ಚಿತ್ರಗಳು: ವಿಜಯಕುಮಾರಿ ಆರ್.
ಚಿತ್ರಗಳು: ವಿಜಯಕುಮಾರಿ ಆರ್.   

ಅನೇಕ ವರ್ಷಗಳ ಹಿಂದೆ ಕಾಡಿನಲ್ಲಿ ನಾಗರಹಾವು ಮತ್ತು ಮುಂಗುಸಿ ತುಂಬಾ ಸ್ನೇಹದಿಂದ ಜೀವಿಸುತ್ತಿದ್ದವು. ಕಾಡೆಲ್ಲಾ ಅಲೆದಾಡಿ ತಮ್ಮ ಆಹಾರವನ್ನು ತಾವೇ ಹುಡುಕಿಕೊಂಡು ಹಾಯಾಗಿದ್ದವು.

ಅದೇನಾಯಿತೋ ಏನೋ... ನಾಗರಹಾವು ದಿನ ಕಳೆದಂತೆ ತುಂಬಾ ಸೋಮಾರಿ ಆಗತೊಡಗಿತು. ಮುಂಗುಸಿ ಮಾತ್ರ ಎಂದಿನಂತೆ ತನ್ನ ಕೆಲಸವನ್ನು ತಾನು ಮಾಡುತ್ತಾ ಕಾಡಿನಲ್ಲಿ ದಕ್ಕಿದ ಮೊಟ್ಟೆಗಳನ್ನು ತಂದು ಬಿಲದಲ್ಲಿ ಸಂಗ್ರಹಿಸಿಟ್ಟು, ಹಸಿವಾದಾಗ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಇದನ್ನು ಕಂಡ ನಾಗರಹಾವಿಗೆ ಹೇಗಾದರೂ ಮಾಡಿ ಆ ಮೊಟ್ಟೆಗಳನ್ನು ಕಬಳಿಸಬೇಕು ಎಂದು ಅನಿಸಿತು. ಇದಕ್ಕಾಗಿ ಅದು ಒಂದು ಹುನ್ನಾರ ಮಾಡಿತು.

ಆಹಾರ ಅರಸಿ ಮುಂಗುಸಿ ಕಾಡಿಗೆ ಹೋದದ್ದನ್ನು ಗಮನಿಸಿದ ಹಾವು ಸರಸರನೆ ಮುಂಗುಸಿಯ ಬಿಲ ಹೊಕ್ಕು, ಅಲ್ಲಿದ್ದ ಮೊಟ್ಟೆಗಳನ್ನು ತಿನ್ನತೊಡಗಿತು. ಮೊಟ್ಟೆಗಳು ಕಾಣೆ ಆಗುತ್ತಿರುವುದನ್ನು ಕಂಡು ಮುಂಗುಸಿಗೆ ಕೋಪ ಬಂತು, ಅನುಮಾನವೂ ಮೂಡಿತು. ‘ನಾಗಣ್ಣ... ಯಾರೋ ನಾನು ಸಂಗ್ರಹಿಸಿದ ಮೊಟ್ಟೆಗಳನ್ನು ಕದ್ದು ತಿನ್ನುತ್ತಿದ್ದಾರೆ. ಅವರು ಯಾರು ಎಂಬುದು ನಿನಗೆ ಗೊತ್ತೇ’ ಎಂದು ಕೇಳಿತು. ಆಗ ನಾಗರಹಾವು ತಲೆ ಅಲ್ಲಾಡಿಸುತ್ತಾ ‘ಇಲ್ಲಪ್ಪಾ... ನಂಗೊತ್ತಿಲ್ಲಪ್ಪಾ!’ ಎಂದು ಸುಳ್ಳು ಹೇಳಿ ಜಾರಿಕೊಂಡಿತು.

ADVERTISEMENT

ಆದರೂ ಮುಂಗುಸಿಗೆ ನಾಗರಹಾವಿನ ಮೇಲೆ ಗುಮಾನಿಯಿತ್ತು. ಒಮ್ಮೆ ಹೊರಹೋದಂತೆ ನಟಿಸಿ ಅಲ್ಲೇ ಮರೆಯಲ್ಲಿ ನಿಂತಿತು. ಇದನ್ನರಿಯದ ನಾಗರಹಾವು ಎಂದಿನಂತೆ ಬಿಲಹೊಕ್ಕು ಮೊಟ್ಟೆ ತಿಂದು ಬಂದಾಗ, ಮುಂಗುಸಿ ಕೈಯಲ್ಲಿ ಸಿಕ್ಕಿಹಾಕಿಕೊಂಡಿತು. ನಾಗರಹಾವಿನ ಕಳ್ಳತನ ಬಯಲಾಯಿತು. ಅಂದಿನಿಂದ ಮುಂಗುಸಿ ಮತ್ತು ನಾಗರಹಾವಿನ ನಡುವೆ ವೈರತ್ವ ಬಂದು ಇಂದಿಗೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.