ಬೆಂಗಳೂರು: ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ’ಯಡಿ ಆಸ್ತಿ ಘೋಷಣೆಗೆ ಇದೇ 31ರವರೆಗೆ ಮಾತ್ರ ಅವಕಾಶವಿದೆ ಎಂದು ಅದಾಯ ತೆರಿಗೆ(ಐ.ಟಿ) ಇಲಾಖೆ ತಿಳಿಸಿದೆ.
ಈ ಯೋಜನೆಯಡಿ ಆಸ್ತಿ ಘೋಷಿಸಿಕೊಂಡರೆ ಶೇ 49.90ರಷ್ಟು ತೆರಿಗೆ, ಏ.1ರ ನಂತರ ವಾರ್ಷಿಕ ತೆರಿಗೆ ಪಾವತಿ ಸಂದರ್ಭದಲ್ಲಿ ಆಸ್ತಿ ಘೋಷಿಸಿಕೊಂಡರೆ ಶೇ77.25ರಷ್ಟು ತೆರೆಗೆ ಪಾವತಿಸಬೇಕಾಗುತ್ತದೆ ಎಂದು ಐ.ಟಿ ಅಧಿಕಾರಿಗಳು ಹೇಳಿದ್ದಾರೆ.
ಆಗಲೂ ಆಸ್ತಿ ಘೋಷಿಸಿಕೊಳ್ಳದೆ ಯಾವುದಾದರೂ ವ್ಯಾಜ್ಯದ ಸಂದರ್ಭದಲ್ಲಿ ಹೆಚ್ಚುವರಿ ಆಸ್ತಿ ಇರುವುದು ಗೊತ್ತಾದರೆ ಶೇ 83.25ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ತೆರಿಗೆ ಇಲಾಖೆಯ ಶೋಧ ಅಥವಾ ದಾಳಿ ಸಂದರ್ಭದಲ್ಲಿ ಆಘೋಷಿತ ಸ್ವತ್ತು ಸಿಕ್ಕಾಗ ಸ್ವಯಂ ಪ್ರೇರಣೆಯಿಂದ ಘೋಷಿಸಿಕೊಳ್ಳಲು ಮುಂದೆ ಬಂದರೆ ಶೇ 107.25ರಷ್ಟು ತೆರಿಗೆ, ಅಧಿಕಾರಿಗಳೇ ಆಸ್ತಿ ಪತ್ತೆ ಮಾಡಿ ತೆರಿಗೆ ಕಟ್ಟಿಸಿದರೆ ಶೇ 137.25ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
18 ಲಕ್ಷ ತೆರಿಗೆದಾರರಿಗೆ ಇ–ಮೇಲ್ ಸಂದೇಶ ಕಳುಹಿಸಲಾಗಿದೆ. ಸಂದೇಶ ತಲುಪದೆ ಇದ್ದವರೂ ಐ.ಟಿ ಆರಂಭಿಸಿರುವ ‘ಸ್ವಚ್ಛ ನಗದು’ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.