ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆ ಮಟ್ಟಕ್ಕೆ ಏರುತ್ತಿರುವುದರಿಂದ ನರೇಂದ್ರ ಮೋದಿ ಸರ್ಕಾರವು ‘ಗ್ರಾಹಕ ವಿರೋಧಿ’ಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಟೀಕಿಸಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದುಬಾರಿ ಆಗುತ್ತಿರುವುದರಿಂದ ಈ ಎರಡೂ ಇಂಧನಗಳ ಬೆಲೆಗಳು ಏರುಗತಿಯಲ್ಲಿ ಇವೆ. ‘ಎಚ್ಪಿಸಿಎಲ್’ನಲ್ಲಿನ ಸರ್ಕಾರಿ ಪಾಲು ಬಂಡವಾಳವನ್ನು ‘ಒಎನ್ಜಿಸಿ’ ಖರೀದಿಸಲು ಮುಂದಾಗಿರುವುದರಿಂದ ವಿತ್ತೀಯ ಕೊರತೆ ಹೆಚ್ಚಲಿದೆ ಎಂದೂ ಟೀಕಿಸಿದ್ದಾರೆ.
ಈ ಸಂಬಂಧ ಚಿದಂಬರಂ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಗರಿಷ್ಠ ಲಾಭ ಪಡೆಯಲು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಿನ ಮಟ್ಟದಲ್ಲಿ ತೆರಿಗೆ ವಿಧಿಸಿ ಗ್ರಾಹಕರನ್ನು ಹಿಂಡಿ ಹಿಪ್ಪೆ ಮಾಡಲಾಗುತ್ತಿದೆ. ಇವೆರಡು ಇಂಧನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದು ಗ್ರಾಹಕರಿಗೆ ನೆಮ್ಮದಿ ಒದಗಿಸಲು ಸರ್ಕಾರ ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಒಂದೆಡೆ ಸರ್ಕಾರ ತನ್ನ ಮಾರುಕಟ್ಟೆ ಸಾಲವನ್ನು ₹ 30 ಸಾವಿರ ಕೋಟಿಗಳಷ್ಟು ಕಡಿತ ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ. ಇನ್ನೊಂದೆಡೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್ಜಿಸಿ), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಲ್ಲಿನ ಸರ್ಕಾರಿ ಪಾಲು ಬಂಡವಾಳ (ಶೇ 51.11) ಖರೀದಿಸಲು ₹ 30 ಸಾವಿರ ಕೋಟಿಗಳ ಸಾಲ ಎತ್ತಲಿದೆ. ವಿತ್ತೀಯ ಕೊರತೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೂ ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.