ಬೆಳಗಾವಿ: ಇಲ್ಲಿನ ಮರಾಠಾ ಮಂಡಳ ದಂತ ವೈದ್ಯಕೀಯ ಕಾಲೇಜು ಸಮೀಪದ ಬಾಕ್ಸೈಟ್ ರಸ್ತೆಯಲ್ಲಿ ಬುಧವಾರ ಉಂಟಾಗಿದ್ದ ಚಿಕ್ಕ ಸುರಂಗದ ಮಾದರಿ ಗುಂಡಿಯನ್ನು ಮಧ್ಯಾಹ್ನದ ವೇಳೆಗೆ ಲೋಕೋಪಯೋಗಿ ಇಲಾಖೆಯವರು ಮುಚ್ಚಿದರು.
ಈ ರಸ್ತೆಯಲ್ಲಿ ಕಾಲೇಜುಗಳ ವಿದ್ಯಾರ್ಥಿಗಳು ಓಡಾಡುತ್ತಾರೆ. ನೂರಾರು ವಾಹನಗಳು ಸಂಚರಿಸುತ್ತವೆ. ಗುಂಡಿಯಿಂದಾಗಿ ಅನಾಹುತ ಸಂಭವಿಸುವ ಆತಂಕ ಎದುರಾಗಿತ್ತು.
‘ನಗರದಲ್ಲಿ ಸುರಂಗ ಕಾಣಿಸಿಕೊಂಡಿದೆ’ ಎನ್ನುವ ಸಂಗತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಕೂಡ ಆಗಿತ್ತು. ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಈ ರೀತಿಯ ಗುಂಡಿ ನಿರ್ಮಾಣವಾಗಿದೆ ಎನ್ನುವ ಆರೋಪಗಳೂ ಕೇಳುಬಂದಿದ್ದವು.
ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜೆಸಿಬಿಯಿಂದ ಗುಂಡಿಯನ್ನು ಮುಚ್ಚಿ ಆತಂಕ ನಿವಾರಿಸಿದರು. ‘ಹಿಂದೆ ಅಲ್ಲಿದ್ದ ಹಳೆಯ ರಸ್ತೆಯ ಮೇಲೆ ಹೊಸದಾಗಿ ಡಾಂಬರು ಹಾಕುತ್ತಾ ಬರಲಾಗಿದೆ. ಅದರ ಕೆಳಗೆ ಹಳೆಯದಾದ ಹಾಗೂ ಅನುಪಯುಕ್ತ ಪೈಪ್ ಸಾಗಿದೆ. ಅದರ ಮೇಲಿನ ರಸ್ತೆಯಲ್ಲಿ ಕುಸಿದು ಗುಂಡಿ ಉಂಟಾಗಿತ್ತು. ಅದನ್ನು ಮುಚ್ಚಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಬಿ. ದಾಮಣ್ಣವರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.