ಗುಳೇದಗುಡ್ಡ: ದುಂದು ವೆಚ್ಚ,ಆಡಂಬರದ ಮದುವೆ ಮಾಡದ ಸರಳ ವಿವಾಹದ ಮೂಲಕ ಸಮಾಜ ಪರಿವರ್ತನೆ ಮಾಡಬೇಕು ಎಂದು ಎಂದು ಚಿತ್ರದುರ್ಗ ಮುರುಘರಾಜೇಂದ್ರ ಮಠದ ಜಗದ್ಗುರು ಡಾ. ಶಿವಮೂರ್ತಿ ಮುರುಘಾ ಶರಣರು ಹರ್ಷ ವ್ಯಕ್ತಪಡಿಸಿದರು.
ಅವರು ಸದ್ಗುರು ಸದಾನಂದ ಶಿವಯೋಗಿಗಳ ಮಠದಲ್ಲಿ ಸದ್ಗುರು ಸದಾನಂದ ಶಿವಯೋಗಿಗಳವರ 13ನೇ ಪುಣ್ಯಸ್ಮರಣೆ ನಿಮಿತ್ತ ಉಚಿತ 4ಜೋಡಿ ಸಾಮೂಹಿಕ ವಿವಾಹ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದ ಶರಣರು ಬಸವಣ್ಣನವರ ಅವಧಿಯಲ್ಲಿ ಅಲ್ಲಮಪ್ರಭು ದೇವರು ಮಾಡಿರುವ ಕಲ್ಯಾಣ ಮಹೋತ್ಸವ ಮಹತ್ವವಾದುದು. ಮದುವೆ ಮಾಡುವುದು ಅವರ ಉದ್ದೇಶವಾಗಿದ್ದಿಲ್ಲ. 900 ವರ್ಷಗಳ ಹಿಂದೆ ಅಲ್ಲಮ ಪ್ರಭು ದೇವರು ಬಸವಕಲ್ಯಾಣದಲ್ಲಿ ಬ್ರಾಹ್ಮಣ ಹುಡುಗನಿಗೆ ಸಮಗಾರ ಹುಡಗಿ ಜೋತೆಗೆ ಮದುವೆ ಮಾಡಿ ಪವಾಡ ಮಾಡಿ ತೋರಿಸಿದರು. ಅದರಿಂದ ಸಮಾಜ ಪರಿವರ್ತನೆ ಮಾಡಿದವರು ಎಂದು ಹೇಳಿದರು.
ಕಮತಗಿ–ಕೋಟೆಕಲ್ಲ ಮಠದ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಬಾದಾಮಿ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ, ತಂಗಡಗಿ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ, ಶ್ರೀಮಠದ ನಾಗಭೂಷಣ ದೇವರು, ಕಮತಗಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಶಿರೂರ ವಿಜಯಮಹಾಂತ ತೀರ್ಥದ ಡಾ. ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಮರಡಿಮಠದ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ 4ಜೋಡಿಗಳ ನವದಂಪತಿಗಳಿಗೆ ಶ್ರೀಗಳು ಅಕ್ಷತೆ, ಪುಷ್ಪ ಹಾಕಿ ಶುಭಕೋರಿದರು. ಸಂಗೀತ ವಿದ್ಯಾಲಯದ ಪ್ರಾಚಾರ್ಯ ಅಖಂಡೇಶ್ವರ ಎಂ. ಪತ್ತಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷ ಶಿವುಕುಮಾರ ಹಾದಿಮನಿ, ಸ್ಥಾಯಿ ಸಮಿತಿ ಚೇರಮನ್ ವಸಂತಸಾ ದೊಂಗಡೆ, ಶ್ರೀಧರ ಶಾಸ್ತ್ರಿಗಳು, ಕೌತಾಳ ಅಮರಯ್ಯ ಸ್ವಾಮಿ, ಪುರಸಭೆ ಸದಸ್ಯ ಹನಮಂತ ಕಳ್ಳಿಗುಡ್ಡ, ಸುನಂದಾ ಬೆಂಗಳೂರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.