ಬಾಗಲಕೋಟೆ: ಯುವ ಕಾಂಗ್ರೆಸ್ನ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ಎಲ್ಲಾ ಹಂತದ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ಚುನಾವಣೆ ಆರಂಭವಾಗಿದ್ದು, ಮೊದಲ ದಿನ ಬಾಗಲಕೋಟೆಯಲ್ಲಿ ಮತದಾನ ನಡೆಯಿತು.
ಸೋಮವಾರ ಬಾದಾಮಿ ಹಾಗೂ ಬೀಳಗಿಯಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಮತ ಚಲಾಯಿಸಿದರು. ಪಕ್ಷದ ಆಂತರಿಕ ಚುನಾವಣೆಯಾದರೂ ಸಾರ್ವತ್ರಿಕ ಚುನಾವಣೆಯ ಗೌಪ್ಯ ಮತದಾನ ಪದ್ಧತಿಯನ್ನೇ ಇಲ್ಲಿಯೂ ಅನುಸರಿಸಲಾಯಿತು. ಹಳೆಯ ಬಾಗಲಕೋಟೆಯ ಭಗಿನಿ ಸಮಾಜದ ಮಂದಿರದಲ್ಲಿ ಮತದಾನ ಪ್ರಕ್ರಿಯೆ ನಡೆಯತು.
ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಪುತ್ರ ವಿನಯ್ ಹಾಗೂ ಪಕ್ಷದ ಹಿರಿಯ ಮುಖಂಡ ಸತೀಶ ಬಂಡಿವಡ್ಡರ ಪುತ್ರ ತಿರುಪತಿ ಸ್ಪರ್ಧಿಸಿದ ಕಾರಣ ಚುನಾವಣೆ ರಂಗೇರಿತ್ತು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಸವರಾಜ ಹೊನ್ನಳ್ಳಿ ಮತ್ತು ಮಹೇಶ ಜಾಲವಾದಿ ಪೈಪೋಟಿ ನಡೆಸಿದ್ದಾರೆ.
ಇದೇ ವೇಳೆ ಬಾಗಲಕೋಟೆ ತಾಲ್ಲೂಕು ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೆ ಮತದಾನ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹುಲ್ಲಪ್ಪ ಟೇಕೆ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೂರ್ ಮೊಹಮ್ಮದ್ ಪಟ್ಟೇವಾಲೆ ಸ್ಪರ್ಧಿಸಿದ್ದಾರೆ.
ಮುಂಜಾನೆಯಿಂದಲೇ ಮತಗಟ್ಟೆ ಸಮೀಪ ನೆರೆದಿದ್ದ ಅಭ್ಯರ್ಥಿಗಳು ಮತದಾರರನ್ನು ಓಲೈಸುವ ಕೆಲಸ ಮಾಡಿದರು. ಮತದಾರರ ಪಟ್ಟಿ ಹಿಡಿದುಕೊಂಡು ಅವರನ್ನು ಕರೆಸಿಕೊಂಡು ಮತ ಹಾಕಿಸಿದರು. ಜಿಲ್ಲಾ ಕಾಂಗ್ರೆಸ್ ಮುಖಂಡ ಮುತ್ತಣ್ಣ ಬೆನ್ನೂರ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.
18ರಂದು ಫಲಿತಾಂಶ ಘೋಷಣೆ
ಇದೇ 16ರಂದು ಹುನಗುಂದದಲ್ಲಿ, 17ರಂದು ಮುಧೋಳ ಮತ್ತು ಜಮಖಂಡಿಯಲ್ಲಿ ಮತದಾನ ನಡೆಯಲಿದೆ. 18ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.