ADVERTISEMENT

‘ಜನಸಂಖ್ಯೆ ಹೆಚ್ಚಳದಿಂದ ಸಂಪನ್ಮೂಲ ಕೊರತೆ’

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 9:02 IST
Last Updated 19 ಜುಲೈ 2017, 9:02 IST

ರಬಕವಿ ಬನಹಟ್ಟಿ: ‘ಜಗತ್ತಿನ ಆರ್ಥಿಕ ಚಿಂತಕರು, ಬುದ್ಧಿಜೀವಿಗಳು ಜನಸಂಖ್ಯೆಯ ಕುರಿತು ಚಿಂತನೆಗಳನ್ನು ನಡೆಸಿ ಜನಸಂಖ್ಯೆಯನ್ನು ನಿಯಂತ್ರಣ ಮಾಡದೇ ಹೋದರೆ ಮುಂಬರುವ ದಿನಗಳಲ್ಲಿ ಜಗತ್ತು ಸಂಪನ್ಮೂಲಗಳ ಕೊರತೆಯನ್ನು ಅನುಭವಿಸಿ, ತೀವ್ರ ಸಂಕಷ್ಟಕ್ಕೆ ಒಳಗಾಗಲಿದೆ’ ಎಂದು ಜಮಖಂಡಿಯ ಡಾ.ಎಚ್‌.ಜಿ. ದಡ್ಡಿ ತಿಳಿಸಿದರು.
ಅವರು ಮಂಗಳವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ವಿಶ್ವ ಜನಸಂಖ್ಯಾ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ಜನಸಂಖ್ಯೆ ಏರಿಕೆಯಿಂದಾಗಿ ರಾಷ್ಟ್ರದಲ್ಲಿ ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಾರೆ. ಆದ್ದರಿಂದ ಯುವ ಜನತೆಯನ್ನು ರಚನಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಜನಸಂಖ್ಯೆ ಏರಿಕೆಯಿಂದಾಗಿ ಹೆಚ್ಚಿನ ಆಹಾರ ಉತ್ಪಾದನೆ ಮಾಡುವ ಸಂದರ್ಭದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಪರಿಸರದ ಮೇಲಿನ ಹೆಚ್ಚಿನ ಪರಿಣಾಮ ಉಂಟಾಗುತ್ತದೆ. ಜಗತ್ತಿನ ಹವಾಮಾನದಲ್ಲಿ ಏರುಪೇರುಗಳು ಮತ್ತು ಮಾನವ ಜೀವಿಯ ಆರೋಗ್ಯದ ಮೇಲೂ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ’ ಎಂದು ಡಾ.ಎಚ್‌.ಜಿ. ದಡ್ಡಿ ತಿಳಿಸಿದರು.

ADVERTISEMENT

ಪ್ರಾಚಾರ್ಯ ಡಾ.ಎಂ.ಪಿ. ತಾನಪ್ಪಗೋಳ ಮಾತನಾಡಿ, ‘ದೇಶದಲ್ಲಿ ಇಂದಿನ ಜನಸಂಖ್ಯೆಯಲ್ಲಿ ಶೇ 35ರಷ್ಟು ಯುವಕರು ಇದ್ದಾರೆ. ಮುಂಬರುವ ದಿನಗಳಲ್ಲಿ ಜನಸಂಖ್ಯೆ ನಿಯಂತ್ರಣ ಮಾಡದೇ ಹೋದರೆ ದೇಶದ ಯುವ ಜನತೆಯ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಜನಸಂಖ್ಯೆಯಿಂದಾಗುವ ತೊಂದರೆಗಳ ಬಗ್ಗೆ ಗಮನ ನೀಡಬೇಕು’ ಎಂದು ತಿಳಿಸಿದರು.  ಜೆಎಸ್‌ಎಸ್‌ ಸಂಘದ ಸದಸ್ಯ ಮಲ್ಲಿಕಾರ್ಜುನ ಬಾಣಕಾರ ಅಧ್ಯಕ್ಷತೆ ವಹಿಸಿದ್ದರು. 

ಸಮಾರಂಭದ ವೇದಿಕೆಯ ಮೇಲೆ ಜನತಾ ಶಿಕ್ಷಣ ಸಂಘದ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಜಯವಂತ ಗುಂಡಿ, ವೀರಭದ್ರ ಕೊಳಕಿ, ಜಯವಂತ ಕಣಗೊಂಡ ಇದ್ದರು. ವಿನಾಯಕ ಹೂಗಾರ ಪ್ರಾರ್ಥಿಸಿದರು. ಡಾ.ಎಂ.ಪಿ. ತಾನಪ್ಪಗೋಳ ಸ್ವಾಗತಿಸಿದರು. ಪ್ರೊ.ಮಂಜುನಾಥ ಬೆನ್ನೂರ ಪರಿಚಯಿಸಿದರು. ಸುನಂದಾ ಭಜಂತ್ರಿ ವಂದಿಸಿದರು. ಲಕ್ಷ್ಮಿ ನಿಂಬರಗಿ ನಿರೂಪಿಸಿದರು.

ವೈ.ಬಿ. ಕೊರಡೂರ, ಪೂರ್ಣಿಮಾ ನಾಯ್ಕ್‌, ರಮೇಶ ಮಾಗುರಿ ಇದ್ದರು. ಇದೇ ಸಂದರ್ಭದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಮಹತ್ವ ಕುರಿತು ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.