ಚೊಳಚಗುಡ್ಡ (ಬಾದಾಮಿ): ‘ನಮ್ಮ ದೇಶದ ಮೇಲೆ ಶತ್ರು ದೇಶಗಳಿಂದ ನಿರಂತರವಾಗಿ ದಾಳಿ ನಡೆದರೂ, ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಗುಣವನ್ನು ಹೊಂದಿದೆ’ ಎಂದು ಅತಿಥಿಯಾಗಿ ಪ್ರಾಚಾರ್ಯ ಜಿ.ಜಿ. ಹಿರೇಮಠ ಹೇಳಿದರು. ಚೊಳಚಗುಡ್ಡ ಗ್ರಾಮದ ಹೊಸಬೆಳಕು ಸಾಂಸ್ಕೃತಿಕ ಹಾಗೂ ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆಯ ಆಶ್ರಯದಲ್ಲಿ ಕಾರ್ಗಿಲ್ ಕಾರ್ಯಾಚರಣೆಯಲ್ಲಿ ವೀರಮರಣವನ್ನಪ್ಪಿದ ವೀರಯೋಧ ಶಿವಬಸಯ್ಯ ಕುಲಕರ್ಣಿ ಸ್ಮರಣಾರ್ಥ ಬುಧವಾರ ಜರುಗಿದ ಕಾರ್ಗಿಲ್ ವಿಜಯೋತ್ಸವ, ಮತ್ತು ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜ್ಞಾನಿಗಳು ಮತ್ಯು ಸೈನಿಕರು ಈ ದೇಶದ ಸಂಸ್ಕೃತಿಯನ್ನು ಕಟ್ಟುವ ಪ್ರಯತ್ನ ಮಾಡಿದರು. ಮಹಾತ್ಮರು ಮತ್ತು ಹುತಾತ್ಮರು ದೇಶದ ಎರಡು ಕಣ್ಣುಗಳು ಇದ್ದಂತೆ’ ಎಂದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಸಮಾರಂಭಕ್ಕೆ ಚಾಲನೆ ನೀಡಿದರು.
1999ರಲ್ಲಿ ಮೇ 27ರಂದು ಆರಂಭದಲ್ಲಿಯೇ ಕಾರ್ಗಿಲ್ ವಿಜಯ ಕಾರ್ಯಾಚರಣೆಯಲ್ಲಿ ಐತಿಹಾಸಿಕ ಚಾಲುಕ್ಯರ ನಾಡಿನ ವೀರಯೋಧ ಶಿವಬಸಯ್ಯ ಕುಲಕರ್ಣಿ ವೀರಮರಣವನ್ನಪ್ಪಿದಾಗ ನಾಡಿನ ಮತ್ತು ಜಿಲ್ಲೆಯ ಜನತೆ ಶೋಕತಪ್ತರಾಗಿ ವೀರಯೋಧನಿಗೆ ಮತ್ತು ಭಾರತ ಮಾತೆಗೆ ಜೈಕಾರ ಹಾಕಿ ಗೌರವ ಸಲ್ಲಿಸಿದ್ದನ್ನು ಅವರು ಸ್ಮರಿಸಿದರು.
ಸಾನ್ನಿಧ್ಯ ವಹಿಸಿದ್ದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಮಾಜಿ ಯೋಧರನ್ನು ಸನ್ಮಾನಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ವೀರಯೋಧನ ಸ್ಮಾರಕಕ್ಕೆ ಗೌರ ವ ಸಲ್ಲಿಸಿ ವೀರಯೋಧನಿಗೆ ಜನ್ಮ ನೀಡಿದ ತಾಯಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಹನುಮಂತ ಮಾವಿನಮರದ, ಮಹೇಶ ಹೊಸಗೌಡ್ರ ವೀರಯೋಧನ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.